ಶಿವಮೊಗ್ಗ
ಮೇ 9 ನಗರದಲ್ಲಿ ನಡೆಯಲಿರುವ ಸಾವಿರದ ವಚನ ಕಾರ್ಯಕ್ರಮಕ್ಕೆ ಏಕತಾರಿ ಹಿಡಿದು ಗಾಯನಕ್ಕೆ ಕೂತಿರುವ ಬಸವಣ್ಣನವರ ವಿಶೇಷ ಚಿತ್ರವನ್ನು ಬಳಸಲಾಗುತ್ತಿದೆ.
ಬಸವಣ್ಣ ಅವರಿಗೆ ವಾದ್ಯಗಳು ಹಾಗೂ ರಾಗಗಳ ಪರಿಚಯ ಇತ್ತು ಎಂದು ಅನೇಕ ವಚನಗಳು ಸೂಚಿಸುತ್ತವೆ.
ಎನ್ನ ಕಾಯವ ದಂಡಿಗೆಯ ಮಾಡಯ್ಯ
ಎನ್ನ ಶಿರವ ಸೋರೆಯ ಮಾಡಯ್ಯ
ಎನ್ನ ನರಗಳ ತಂತಿಯ ಮಾಡಯ್ಯ
ಬತ್ತೀಸ ರಾಗವ ಹಾಡಯ್ಯ
ಉರದಲೊತ್ತಿ ಬಾರಿಸು ಕೂಡಲಸಂಗಮದೇವ.
ಎಂದು ಬಸವಣ್ಣ ಒಂದು ವಚನದಲ್ಲಿ ಬರೆದಿದ್ದಾರೆ. ಭಕ್ತಿ-ಅರ್ಪಣಾ ಮನೋಭಾವದ ಪರಾಕಾಷ್ಠೆಯಲ್ಲಿ ನನ್ನನ್ನು ಒಂದು ತಂತಿವಾದ್ಯವನ್ನಾಗಿ ಮಾಡಿಕೊಂಡು ಬತ್ತೀಸ ರಾಗವನ್ನು ನುಡಿಸು ಎಂದು ಕೂಡಲಸಂಗಮದೇವನಲ್ಲಿ ಮೊರೆ ಇಡುತ್ತಾರೆ. ಇನ್ನೊಂದು ವಚನದಲ್ಲಿ ‘ಆನು ಒಲಿದಂತೆ ಹಾಡುವೆ’ ಎಂದು ಬಸವಣ್ಣ ಹೇಳುತ್ತಾರೆ.
ಹಲವು ಸ್ವರ ವಚನಗಳನ್ನೂ ಬಸವಣ್ಣ ಬರೆದಿದ್ದಾರೆ. ರಾಗ-ತಾಳಗಳ ಬಳಕೆ ಈ ವಚನಗಳಲ್ಲಿದೆ. ಈ ಎಲ್ಲಾ ಅಂಶಗಳು ಬಸವಣ್ಣ ಅವರಿಗೆ ಸಂಗೀತ ಪ್ರಜ್ಞೆ ಇತ್ತು ಹಾಗು ಬಸವಣ್ಣ ಹಾಡುತ್ತಿದ್ದರು ಎಂಬುದನ್ನು ಪುಷ್ಠೀಕರಿಸುತ್ತವೆ.

ಸಾಮಾನ್ಯವಾಗಿ ಧರ್ಮ ಗುರುವಾಗಿ, ಸಮಾಜ ಸುಧಾರಕರಾಗಿ, ಸಾಂಸ್ಕೃತಿಕ ನಾಯಕರಾಗಿ ಗೋಚರಿಸುವ ಬಸವಣ್ಣನವರನ್ನೂ ಸಂಗೀತಗಾರ, ಗಾಯಕರಾನ್ನಾಗಿಯೂ ನೋಡಬೇಕು. ಈ ಹಿನ್ನಲೆಯಲ್ಲಿ ಖ್ಯಾತ ಕಲಾವಿದರಾದ ಶ್ರೀಕಾಂತ ಹೆಗಡೆ ಅವರು ಏಕತಾರಿ ಹಿಡಿದ ಕುಳಿತಿರುವ ಸಂಗೀತಗಾರ ಬಸವಣ್ಣ ಅವರ ಅದ್ಭುತ ಚಿತ್ರ ರಚಿಸಿದ್ದಾರೆ.
ಬಸವಕೇಂದ್ರದ ಡಾ. ಬಸವ ಮರುಳಸಿದ್ದ ಸ್ವಾಮೀಜಿಯವರ ಬಹಳ ದಿನಗಳ ಕನಸಾದ ಸಾವಿರದ ವಚನ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಗಾಯಕರು ಒಂದೇ ಧ್ವನಿ ಬಸವಣ್ಣನವರ 38 ವಚನಗಳನ್ನು ಹಾಡಲಿದ್ದಾರೆ.
