ಬೆಳಗಾವಿ
ನಾಡಿನ ಬಡ ಹಾಗು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ಶರಣ ಸಂಸ್ಕೃತಿಯೊಂದಿಗೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ನಾಗನೂರು ರುದ್ರಾಕ್ಷಿ ಮಠದ ವತಿಯಿಂದ ಪ್ರಾರಂಭಿಸಲಾದ ಉಚಿತ ವಿದ್ಯಾರ್ಥಿ ಪ್ರಸಾದ ನಿಲಯದ 120 ವಿದ್ಯಾರ್ಥಿಗಳಿಗೆ ಲಿಂಗದೀಕ್ಷೆ ನೀಡುವ ಕಾರ್ಯಕ್ರಮ ಸೋಮವಾರ ಜರುಗಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಪ್ರತಿದಿನ ಇಷ್ಟಲಿಂಗ ಪೂಜೆ ಮಾಡಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ನೈತಿಕತೆ, ಆರೋಗ್ಯ, ಜ್ಞಾಪಕ ಶಕ್ತಿ ಹಾಗೂ ಆತ್ಮವಿಶ್ವಾಸ ವೃದ್ಧಿಸುತ್ತದೆ. ಮಾನಸಿಕ ನೆಮ್ಮದಿ ಸಹ ದೊರಕುತ್ತದೆ. ಇಷ್ಟಲಿಂಗವು 12ನೇ ಶತಮಾನದಲ್ಲಿ ಬಸವಣ್ಣನವರು ನೀಡಿದ ವಿಶಿಷ್ಟ ಕೊಡುಗೆಯಾಗಿದ್ದು ಪರಮಾತ್ಮನನ್ನು ಕಾಣಬೇಕಾದರೆ ಜಾತಿ, ಕುಲ, ಲಿಂಗಭೇದವಿಲ್ಲದೆ ಎಲ್ಲರೂ ಇಷ್ಟಲಿಂಗ ಧರಿಸಬಹುದು.
ಕಾರ್ಯಕ್ರಮದಲ್ಲಿ ಅನುಭಾವಿ ಮಡಿವಾಳಪ್ಪ ಸಂಗೊಳ್ಳಿ, ಶಿಕ್ಷಕರಾದ ಮನೋಹರ ಉಳ್ಳೇಗಡ್ಡಿ, ಶ್ರೀಧರ ನೇಮಗೌಡ, ಬಸಯ್ಯ ಶಿವಲಿಂಗಯ್ಯ ಗೋಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಂಚಾರಿ ಗುರುಬಸವ ಬಳಗದ ಸಂಚಾಲಕ ಮಹಾಂತೇಶ ತೋರಣಗಟ್ಟಿ ಹಾಗೂ ವಿಜ್ಞಾನ ಕೇಂದ್ರದ ಅಧಿಕಾರಿ ಶರಣ ರಾಜಶೇಖರ ಪಾಟೀಲ ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆ ಮಾಡಿದರು.