ಅಂತರಂಗದ ಅರಿವಿನಿಂದ ಬಹಿರಂಗದ ಪರಿವರ್ತನೆ: ಡಾ. ಸಿದ್ದರಾಮ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ

ಜಾತಿ ಮತ ಪಂಥ ಲಿಂಗಭೇದ ಅಳಿಸಿ ಸಂತೃಪ್ತವಾದ ಸಮಾಜ ಕಟ್ಟಿದವರು ಶರಣರು. ಅದು ಸಾಧ್ಯವಾದದ್ದು ಅಂತರಂಗದ ಅರಿವಿನಿಂದ. ಅಂತರಂಗದ ಅರಿವಿನಿಂದ ಬಹಿರಂಗದ ಪರಿವರ್ತನೆ ಸಾಧ್ಯ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೭೪೮ ನೇ ಶಿವಾನುಭವದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಒಬ್ಬ ವ್ಯಕ್ತಿಯ ಜ್ಞಾನ ಸಂವೇದನೆ, ಅರಿವಿನ ಬೆಳವಣಿಗೆಯೇ ಅವನ ಬಾಹ್ಯ ನಡುವಳಿಕೆ. ಅದು ಸಮಾಜದ ಪರಿವರ್ತನೆ ಮೇಲೆ ಪ್ರಭಾವ ಬೀರುತ್ತದೆ.

ಸನ್ಯಾಸ ದೀಕ್ಷೆ ಪಡೆದು ಪುರಪ್ರವೇಶ ಮಾಡಿದ ಶಿವಪ್ರಿಯಾನಂದ ಸ್ವಾಮಿಗಳವರ ಪರ್ವಪ್ರಸಂಗದ ಪ್ರಯುಕ್ತ ಅವರನ್ನು ಗೌರವಿಸಿ ಶ್ರೀಗಳು ಶುಭ ಹಾರೈಸಿದರು.

ಬ್ರಹ್ಮಚರ್ಯ ಗೃಹಸ್ಥ ನಂತರ ಸನ್ಯಾಸ ದೀಕ್ಷೆ ಪಡೆಯಬೇಕು. ಆದರೆ ಶಿವಪ್ರೀಯಾನಂದ ಸ್ವಾಮಿಗಳು ನೇರವಾಗಿ ಸನ್ಯಾಸ ದೀಕ್ಷೆ ಪಡೆದಿದ್ದಾರೆ. ಸನ್ಯಾಸಿಗಳು ಲೌಕಿಕ ಗೊಡವೆ ಇರಲಾರದೆ, ಮಾಯಾಮೋಡಗಳಿಗೆ ಬಲಿಯಾಗದೆ ಸಮಾಜ ಸೇವೆ ಮಾಡುತ್ತಾರೆ ಎಂದು ಶ್ರೀಗಳು ಹೇಳಿದರು.

ತೋಂಟದಾರ್ಯ ಮಠದ ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ಸಂಮಾನ ಸ್ವೀಕರಿಸಿ ಪೂಜ್ಯ ಶಿವಪ್ರಿಯಾನಂದ ಸ್ವಾಮಿಗಳವರು ಮಾತನಾಡಿ, ಪ್ರಾಮಾಣಿಕವಾದ ಪ್ರೀತಿಯಿಂದ ಸಮಾಜ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಪಂಥರಹಿತವಾದ ಪಂಥ ಸೃಷ್ಟಿಸುವುದು ನಮ್ಮ ಆಶಯ. ಮೌಲ್ಯಗಳ ಕುಸಿತ ಮಕ್ಕಳಿಂದ ಆಗಿಲ್ಲ. ದೊಡ್ಡವರಿಂದ ಆಗಿದೆ. ಒಂದು ಮಗು ದೇವರನ್ನು ೨ ನಿಮಿಷ ನೋಡುತ್ತದೆ. ತಾಯಿಯನ್ನು ೧೦ ನಿಮಿಷ ನೋಡುತ್ತದೆ. ಶಿಕ್ಷಕರನ್ನು ೫೦ ನಿಮಿಷ ನೋಡುತ್ತದೆ. ಆದರೆ ಸನ್ಯಾಸಿಗಳನ್ನು ಸಮಾಜ ನಿರಂತರ ನೋಡುತ್ತದೆ. ಸಮಾಜ ಆದರ್ಶಗಳನ್ನು ನಿರೀಕ್ಷೆ ಮಾಡುತ್ತದೆ ಎಂದು ಮಾತನಾಡಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಗದುಗಿನ ಕೆ.ವಿ.ಎಸ್.ಆರ್. ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಎಸ್.ಎಚ್. ದೇಶಪ್ಪನವರ ಮಾತನಾಡುತ್ತಾ, ಮಾನವನ ಅಂತರಂಗದಲ್ಲಿ ಒಮ್ಮೆ ಅರಿವು ಮೂಡಿದರೆ ತಾನು ಯಾರು, ಏಕೆ ಬದುಕಬೇಕು. ಹೇಗೆ ಬದುಕಬೇಕು ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾನೆ. ಇದರಿಂದ ಅವನ ಬಾಹ್ಯ ನಡವಳಿಕೆಗಳು ನಿರ್ಣಯಗಳು ಬದಲಾಗುತ್ತವೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಸಂತ ರಾಜಕಾರಣಿಗಳಾದ ಡಿ. ಆರ್. ಪಾಟೀಲ ಹಾಗೂ ಕರ್ನಾಟಕ ಕೃಷಿ ವಿಶ್ವವಿದ್ಯಾಲಯಧ ನಿವೃತ್ತ ಉಪ ಕುಲಸಚಿವರಾದ ರಾಮಕೃಷ್ಣ ಕುಲಕರ್ಣಿ ಯವರು ಉಪಸ್ಥಿತರಿದ್ದರು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನ ಸಂಗೀತವನ್ನು ನಡೆಸಿದರು. ಧಾರ್ಮಿಕ ಗ್ರಂಥ ಪಠಣವನ್ನು ಕುಮಾರ ಪ್ರದೀಪ್ ಎಸ್. ಲಮಾಣಿ ಹಾಗೂ ವಚನ ಚಿಂತನವನ್ನು ಕುಮಾರಿ ದೀಕ್ಷಾ ಎಸ್. ಲಮಾಣಿ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ರಾಘವೇಂದ್ರ ಎಸ್. ಕಾಲವಾಡ ಗಣ್ಯ ಉದ್ದಿಮೆದಾರರು ಗದಗ ಇವರು ವಹಿಸಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷರಾದ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮು ಪುರಾಣಿಕ ಹಾಗೂ ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.

ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Dv8eAoC8n2rJOtZKYt4o86

Share This Article
Leave a comment

Leave a Reply

Your email address will not be published. Required fields are marked *