ರಾಯಚೂರಿನಲ್ಲಿ ಎರಡು ವಾರಗಳ ಅಲ್ಲಮಪ್ರಭು ಜೀವನ ಚರಿತ್ರೆ ಪ್ರವಚನ
ರಾಯಚೂರು
ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಜೂನ್ 7 ರಿಂದ ಅಲ್ಲಮಪ್ರಭು ದೇವರ ಜೀವನ ಚರಿತ್ರೆಯ ಪ್ರವಚನ ಸರಣಿ “ಜ್ಞಾನ ದಾಸೋಹ” ಶೀರ್ಷಿಕೆಯಡಿ ಪ್ರತಿದಿನ ಸಂಜೆ 5.30ರಿಂದ ನಡೆಯುತ್ತಿದೆ.
ರಾಯಚೂರು ಜಿಲ್ಲಾ ವೀರಶೈವ ಸಮಾಜದ ಆಶ್ರಯದಲ್ಲಿ ನಡೆಯುತ್ತಿರುವ ಈ ಪ್ರವಚನವನ್ನು ಶ್ರೀ ಚರಮೂರ್ತಿ ಚರಂತೇಶ್ವರ ಮಠ, ಬಸವಬೆಳವಿಯ ಪೂಜ್ಯ ಶರಣ ಬಸವ ಅಪ್ಪಗಳು ನೀಡುತ್ತಿದ್ದಾರೆ.
ಪ್ರವಚನದಲ್ಲಿ ಅವರು ಪೌರಾಣಿಕ ಸಾಹಿತ್ಯ, ವಚನ ಸಾಹಿತ್ಯ ಮತ್ತು ಪ್ರಸ್ತುತ ಸಮಾಜದ ಸ್ಥಿತಿಗತಿಯನ್ನು ಅರ್ಥಪೂರ್ಣವಾಗಿ ವಿವರಿಸಿದರು. ಕಳೆದ ಮೂರು ದಿನಗಳಿಂದ ಚಾಮರಸನು ರಚಿಸಿರುವ ಪ್ರಭುಲಿಂಗ ಲೀಲೆಯ ಅರ್ಥವನ್ನೂ ಅದರ ತಾತ್ವಿಕ ಸಾರವನ್ನೂ ಶ್ರದ್ಧಾಪೂರ್ವಕವಾಗಿ ವಿವರಿಸುತ್ತಿರುವ ಅವರು, ಇಂದಿನ ಪ್ರವಚನದಲ್ಲಿ ಚಾಮರಸನ ಶೈಲಿ, ಆತನ ಭಾಷಾ ಪ್ರೀತಿ ಮತ್ತು ಕಾಲಜ್ಞಾನದ ತಾತ್ಪರ್ಯವನ್ನು ವಿಶೇಷವಾಗಿ ಉಲ್ಲೇಖಿಸಿದರು.
ಕನ್ನಡ ಭಾಷೆಯ ಮಹತ್ವವನ್ನೂ ಸಂಸ್ಕೃತಿಯ ಉಳಿವಿಗೆ ಭಾಷೆಯ ಸಂರಕ್ಷಣೆಯ ಅಗತ್ಯವನ್ನೂ ಅವರ ಮಾತುಗಳಲ್ಲಿ ತೀವ್ರವಾಗಿ ವ್ಯಕ್ತವಾಯಿತು. “ಭಾಷೆ ನಾಶವಾದರೆ ಸಂಸ್ಕೃತಿಯೂ ನಾಶವಾಗುತ್ತದೆ” ಎಂಬ ಎಚ್ಚರಿಕೆಯನ್ನು ಅವರು ನೀಡಿದರು. ಕನ್ನಡದಲ್ಲಿ ಇರುವ ವಚನ ಸಾಹಿತ್ಯವೇ ನಮ್ಮ ಭಾಷೆಯ ಜೀವಾಳವಾಗಿದ್ದು, ಅದರಲ್ಲಿ ಅಡಕವಾಗಿರುವ ತತ್ವಗಳು ಮನುಷ್ಯನ ಬದುಕಿಗೆ ದಿಕ್ಕು ತೋರಿಸುತ್ತವೆ ಎಂದರು.
ಶರಣರು ತಮ್ಮ ಆತ್ಮಜ್ಞಾನದಿಂದ ಕಾಲದ ಮುಂದಿನ ಘಟನೆಗಳನ್ನು ನಿಖರವಾಗಿ ಊಹಿಸಿದ್ದನ್ನು ಉದಾಹರಣೆಗಳ ಮೂಲಕ ವಿವರಿಸಿದ ಅವರು, ಶಿಕ್ಷಣ ನೀತಿಯ ಮೇಲೂ ಶರಣರು ಬರೆದ ವಚನಗಳ ಮೂಲವನ್ನು ಸ್ಪಷ್ಟಪಡಿಸಿದರು. ತ್ರೇತಾಯುಗದಿಂದ ಕಲಿಯುಗದವರೆಗೆ ಗುರು-ಶಿಷ್ಯ ಸಂಬಂಧದ ಬದಲಾವಣೆಯ ರೂಪವನ್ನು ಗಂಭೀರವಾಗಿ, ಆಳವಾಗಿ ವಿವರಿಸಿದರು.
ಶರಣರು ವೈಜ್ಞಾನಿಕ ಪ್ರಗತಿಗೆ ಆಧ್ಯಾತ್ಮಿಕ ವ್ಯಾಖ್ಯಾನ ನೀಡಿದ್ದ ಉದಾಹರಣೆಗಳಾದ – ವಿದ್ಯುತ್ ತಂತಿಗಳಿಗಾಗಿ “ಸುರಿಗಿ ಸುತ್ತು” ಎಂಬ ಉಲ್ಲೇಖ, ಟಿವಿಗೆ “ಮಾಯೆ ಎಂಬ ಪೆಟ್ಟಿಗೆ”, ಮೊಬೈಲ್ಗಾಗಿ “ಕಲ್ಲಿನ ಕೋಳಿ ಕೂಗುತ್ತೆ”, ಬಟ್ಟೆಯಲ್ಲಿನ ಸಾಂಕೇತಿಕ ವ್ಯತ್ಯಾಸ, ಮಾಲ್ ಸಂಸ್ಕೃತಿಗೆ “ಚಿತ್ತ ಚಿತ್ತಾರದ ಬಜಾರ್”, ವೃದ್ಧಾಶ್ರಮಗಳ ವೇದನೆಗಳಿಗೆ “ಹೊರಲಾರದವರು ಬಂದು ಕರೆದುಕೊಂಡು ಹೋದರು” ಎಂಬ ಭಾಷಾಂತರ- ಇಂದಿನ ಪರಿಕಲ್ಪನೆಗಳಿಗೆ ಶರಣರು ಶತಮಾನಗಳ ಹಿಂದೆಯೇ ತಾತ್ವಿಕ ತಾತ್ಪರ್ಯ ನೀಡಿದ ಬಗ್ಗೆ ಶರಣಬಸವರು ಹೇಳಿದರು.
ಸಮಾಜದಲ್ಲಿ ಪ್ರೇಮ, ವಿಶ್ವಾಸ, ಮಾನವೀಯತೆ, ಆತ್ಮೀಯತೆ ಇವನ್ನೆಲ್ಲ ಅಳವಡಿಸಿಕೊಂಡರೆ ನಮ್ಮ ಬದುಕೇ ಕೈಲಾಸವಾಗುತ್ತದೆ. ಮಕ್ಕಳು ಹಣ ತರುತ್ತಾರೆ ಎಂಬ ದೃಷ್ಟಿಯಿಂದ ಅಲ್ಲ, ಅವರು ಸಂಸ್ಕಾರ ಹೊಂದಿದ ಪ್ರಜ್ಞಾವಂತ ನಾಗರಿಕರಾಗಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಇಂದಿನ ಸಮಾಜದ ಅನಾಗರಿಕತೆ, ವೃದ್ಧಾಶ್ರಮಗಳ ಸಂಖ್ಯೆಯು ಧರ್ಮಶಾಲೆಗಳ ಸಂಖ್ಯೆಯನ್ನು ಮೀರಿಸುತ್ತಿರುವ ವಾಸ್ತವಗಳು, ಮನೆ ದೊಡ್ಡದಾದರೂ ಮನಸ್ಸು ಸಣ್ಣದಾಗಿರುವ ಸ್ಥಿತಿಗಳನ್ನು ಅವರು ಸಂಕೇತಮಯವಾಗಿ ಚಿಂತಿಸಿದರು. “ಆಚಾರವೇ ಸ್ವರ್ಗ, ಅನಾಚಾರವೇ ನರಕ” ಎಂಬ ಬಸವಣ್ಣನವರ ನುಡಿಯನ್ನು ನೆನೆಪಿಸಿದರು.
ಪ್ರವಚನದ ಜೂನ್ 21ರವರೆಗೆನಡೆಯಲಿದ್ದು, ಶರಣರ ತತ್ವಜ್ಞಾನವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಬಯಸುವ ಪ್ರತಿಯೊಬ್ಬರೂ ಈ ಪ್ರವಚನ ಸರಣಿಯಲ್ಲಿ ಭಾಗವಹಿಸಬೇಕೆಂದು ಶರಣಬಸವ ಅಪ್ಪಗಳು ಎಲ್ಲರಿಗೂ ಆಹ್ವಾನ ನೀಡಿದರು.