ಚುಕ್ಕಿ ಉಮಾಪತಿ ಅವರ ಪುಣ್ಯಸ್ಮರಣೆ ನಿಮಿತ್ಯ ಸಿರವಾರದಲ್ಲಿ ಬಸವತತ್ವ ಚಿಂತನಗೋಷ್ಠಿ

ಡಿ.ಪಿ. ನಿವೇದಿತಾ
ಡಿ.ಪಿ. ನಿವೇದಿತಾ

ಬಸವಣ್ಣನವರ ಕ್ರಾಂತಿಯನ್ನು ಒಪ್ಪಿಕೊಂಡರೆ ಮಕ್ಕಳ ಭವಿಷ್ಯ ಉಜ್ವಲ: ಚುಕ್ಕಿ ಸೂಗಪ್ಪ

ಸಿರವಾರ

ಸ್ಥಳೀಯ ಚುಕ್ಕಿ ಪ್ರತಿಷ್ಠಾನ ವತಿಯಿಂದ ಲಿಂಗೈಕ್ಯ ಚುಕ್ಕಿ ಉಮಾಪತಿಯವರ 49ನೇ ಪುಣ್ಯಸ್ಮರಣೆಯ ನಿಮಿತ್ಯವಾಗಿ ಬಸವತತ್ವ ಚಿಂತನಗೋಷ್ಠಿ ನಡೆಯಿತು.

ಪ್ರಾಸ್ತಾವಿಕ ನುಡಿಗಳನ್ನಾಡುತ್ತ, ಪ್ರತಿಷ್ಠಾನದ ಅಧ್ಯಕ್ಷ ಚುಕ್ಕಿ ಸೂಗಪ್ಪನವರು, ಬಸವತತ್ವದ ಆಧಾರದ ಮೇಲೆ ನಮ್ಮ ಕುಟುಂಬ ನಡೆದುಕೊಂಡು ಬಂದಿದೆ. ವಿಶ್ವಗುರು ಬಸವಣ್ಣನವರು ಹೆಣ್ಣುಮಕ್ಕಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದರು. ಈ ಕಾರಣದಿಂದ ಬಸವಗೀತಾ ತಾಯಿಯವರನ್ನು ಅನುಭಾವಕ್ಕಾಗಿ ಕರೆಸಿದ್ದೇವೆ.

ವಚನ ಸಾಹಿತ್ಯ ಎಲ್ಲರಿಗೂ ಪ್ರೇರಣೆಯಾಗಿದೆ. ಎಲ್ಲ ಸಮಸ್ಯೆಗಳಿಗೂ ಔಷಧವೆಂದರೆ ಬಸವತತ್ವ ಮಾತ್ರ. ಬಸವಣ್ಣನವರ ಅನುಗ್ರಹದಿಂದ ನಮ್ಮ ಕುಟುಂಬದ ಎಲ್ಲಾ ಮಕ್ಕಳು ಉತ್ತಮ ಸ್ಥಾನದಲ್ಲಿದ್ದಾರೆ‌. ಬಸವಣ್ಣನವರ ಕ್ರಾಂತಿಯನ್ನು ಒಪ್ಪಿಕೊಂಡರೆ ನಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿರುತ್ತದೆ. ಬಸವಣ್ಣನವರ ವಚನಗಳನ್ನು ಅಪ್ಪಿ-ಒಪ್ಪಿಕೊಳ್ಳಬೇಕು. ಬಸವಣ್ಣ ಮಾತ್ರ ಜಗಜ್ಯೋತಿ, ಅವರು ಗುಡಿ-ಗುಂಡಾರಗಳನ್ನು ಕಟ್ಟದೇ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಿದರು ಎಂದರು.

ಉದ್ಘಾಟಕರಾದ ಬಸವಪ್ರಭು ಪಾಟೀಲ ಮಾತನಾಡಿ, 1974-75ರಲ್ಲಿ ಪ್ರತಿಷ್ಠಾನ ಆರಂಭವಾಯಿತು. ಇಡೀ ರಾಯಚೂರು ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮ ಎಲ್ಲಿಯೂ ನಡೆದಿಲ್ಲ ಮತ್ತು ಪುಣ್ಯಸ್ಮರಣೆ ಕಾರ್ಯಕ್ರಮ 50 ವರ್ಷಗಳವರೆಗೆ ನಡೆದದ್ದನ್ನು ನಾನೆಲ್ಲಿಯೂ ಕಂಡಿಲ್ಲ.‌ ಲಿಂಗೈಕ್ಯ ಚುಕ್ಕಿ ಉಮಾಪತಿಯವರು ಬಹಳ ಹೃದಯವಂತರೂ, ದಾನಿಗಳೂ ಆಗಿದ್ದರು ಎಂದು ಹೇಳಿದರು.

ನಾಗನೂರ ಗುರುಬಸವ ಮಠದ ಅನುಭಾವಿಗಳಾದ ಪೂಜ್ಯ ಬಸವಗೀತಾ ತಾಯಿಯವರು ಮಾತನಾಡಿ, ಈ ಕಾರ್ಯಕ್ರಮ ತುಂಬಾ ವಿಶೇಷವಾದದ್ದು, ಇಂತಹ ಸ್ಮರಣೋತ್ಸವಗಳು ಸಮಾಜಕ್ಕೆ ಮಾದರಿಯಾಗುತ್ತವೆ. 12 ನೇ ಶತಮಾನದಲ್ಲಿ ಪ್ರತೀ ವ್ಯಕ್ತಿ-ವಸ್ತುವಿನಲ್ಲೂ ಭೇದ ಎಂಬುದಿತ್ತು,‌ ಅದನ್ನು ತೊಡೆಯಲು ಬಂದವರೇ ಬಸವಣ್ಣನವರು. ಬಸವಣ್ಣ ವ್ಯಕ್ತಿಯಲ್ಲ ಅದೊಂದು ಮಹಾನ್ ಶಕ್ತಿ.

ಬಸವಣ್ಣನವರನ್ನು ನಮಗೆ ಪರಿಚಯಿಸಿದವರು ಲಿಂಗೈಕ್ಯ ಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳು. ವಿಶ್ವಗುರು ಬಸವಣ್ಣನವರು ಇಷ್ಠಲಿಂಗವನ್ನು ಜಗತ್ತಿಗೆ ನೀಡಿದರು, ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಕೇವಲ ಎಂಟನೇ ವಯಸ್ಸಿನಲ್ಲಿ ಮನೆಯನ್ನು ತೊರೆದರು, ಅದೇ ವಯಸ್ಸಿನಲ್ಲಿ ತನ್ನ ಹೆತ್ತ ತಂದೆಗೆ ಏಕದೇವೋಪಾಸನೆಯನ್ನು ಕಲಿಸಿಕೊಟ್ಟರು.

ಮೂಢನಂಬಿಕೆಯನ್ನು ತೊಡೆದು ಹಾಕಿ, ಅನ್ಯಾಯ ಅಕ್ರಮಗಳನ್ನು ಸಹಿಸದೇ ಸಿಡಿದೆದ್ದರು. ಅಂಗ ಅಂಗಗಳ ನಡುವಿನ ಭೇದವನ್ನು ತೊಡೆದು ಹಾಕಿದರು. ವಿದ್ಯೆಯೊಂದೇ ದೇವನೊಲಿಸುವ ಸಾಧನ ಎಂಬ ಆ ಕಾಲದಲ್ಲಿ ಉದ್ಯೋಗವೂ ದೇವನೊಲಿಸುವ ಸಾಧನ ಎಂದು ಕೆಲಸಕ್ಕೆ ‘ಕಾಯಕ’ ಪಟ್ಟ ಕಟ್ಟಿದವರು ಗುರು ಬಸವಣ್ಣನವರು. ಹೆಣ್ಣಿಗೆ ದೈವತ್ವದ ಸ್ಥಾನವನ್ನು ಕಲ್ಪಿಸಿದವರು‌, ಆಕೆಗೆ ಅಕ್ಷರ ಜ್ಞಾನವನ್ನು ಕೊಟ್ಟು ವಚನ ಬರೆಯುವ ಸ್ವಾತಂತ್ರ್ಯವನ್ನು ಕೊಟ್ಟು ಮಾದರಿಯಾದವರು.

ಆಗಿನ ಕಾಲದಲ್ಲಿ ಅತೀ ಅಸ್ಪೃಶ್ಯರು ಎನಿಸಿಕೊಂಡವರನ್ನು ಅಪ್ಪ-ಬೊಪ್ಪ ಎಂದು ಕರೆದು ಕೊಂಡಾಡಿ ಅಪ್ಪಿಕೊಂಡವರು. ಅದು ಕೇವಲ ಗುರು ಬಸವಣ್ಣನವರಿಗೆ ಮಾತ್ರ ಸಾಧ್ಯ. ಅವರಿಗೆ ಅವರೇ ಸಾಟಿ, ಅವರನ್ನು ಹೊಗಳುವುದು ಸೂರ್ಯನ ಬೆಳಕನ್ನು ಅಳತೆ ಮಾಡಿದಂತೆ. ಅದನ್ನು ಅಳೆಯಲು ಸಾಧ್ಯವಿಲ್ಲ ಕೇವಲ ಆ ಬೆಳಕಿನಲ್ಲಿ ಜೀವಿಸಬೇಕಷ್ಟೇ ಎಂದು ಹೇಳಿದರು.

ಕೃತಿಗಳ ಪ್ರಶಸ್ತಿ ಪುರಸ್ಕೃತರಾದ
ಡಾ. ಸರ್ವಮಂಗಳಾ ಸಕ್ರಿ- ‘ಚಿತ್ ಜ್ಯೋತಿ’
ಡಾ. ಬಾಬು ಭಂಡಾರಿಗಲ್- ‘ಸಂಘರ್ಷದ ಹಾದಿಯಲ್ಲಿ’
ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ- ‘ಅರವತ್ತುಮೂರು ಪುರಾತನರ ಪಟಗಳು’ ಇವರನ್ನು ಸತ್ಕರಿಸಲಾಯಿತು.

ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾದ ಶರಣ ನವಲಿಂಗ ಪಾಟೀಲ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಸಮ್ಮುಖವನ್ನು ಅಭಿನವ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ, ನವಲಕಲ್ ಪೂಜ್ಯರು ವಹಿಸಿದ್ದರು. ವೇದಿಕೆ ಮೇಲೆ ಜಾವಟಗಲ್ ಸಣ್ಣಪ್ಪಯ್ಯ ತಾತ, ಬೆಟ್ಟಪ್ಪಯ್ಯ ತಾತ, ಬೀರಪ್ಪ ತಾತ, ಚಂದ್ರಶೇಖರ ಪಾಟೀಲ, ಶಿವಾನಂದ ಚುಕ್ಕಿ, ಶಿವಕುಮಾರ ಚುಕ್ಕಿ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/DAHwtSaP5nUL2sT483TnP6

Share This Article
Leave a comment

Leave a Reply

Your email address will not be published. Required fields are marked *

ಬಸವ ತತ್ವ ಪ್ರಚಾರಕರು, ಗುರು ಬಸವ ಮಠ, ನಾಗನೂರು