ಯಾರಾದರೂ ನಮಸ್ಕರಿಸಲು ಬಂದರೆ ಪೂಜ್ಯ ಸಿದ್ದಲಿಂಗ ಶ್ರೀಗಳು ತಮ್ಮ ಕೈ ಕೊಡುತ್ತಿದ್ದರೆ ಹೊರತು ಕಾಲು ಚಾಚುತ್ತಿರಲಿಲ್ಲ.
ಶಹಾಪುರ
ಹಿರಿಯರಾದ ಶಾಮನೂರು ಶಿವಶಂಕರಪ್ಪನವರ ಎರಡು ಚಿತ್ರಗಳು ವೈರಲ್ ಆಗಿವೆ. ಒಂದರಲ್ಲಿ ಸನಾತನ ಪರಂಪರೆಯ ಗುರುಗಳು ಹಣೆಗೆ ತಮ್ಮ ಕಾಲುಗಳನ್ನು ಎತ್ತಿ ಹಚ್ಚಿದರೆ, ಇನ್ನೊಂದರಲ್ಲಿ ಶರಣ ಪರಂಪರೆಯ ಸಾಣೆಹಳ್ಳಿಯ ಪಂಡಿತಾರಾಧ್ಯ ಮಹಾಸ್ವಾಮೀಜಿ ತಮ್ಮ ಎರಡೂ ಕೈಗಳನ್ನು ಮುಗಿಯುವ ಚಿತ್ರವಿದೆ. ಈ ಎರಡೂ ಚಿತ್ರಗಳು ಏನನ್ನು ಬಿಂಬಿಸುತ್ತವೆ ಎಂಬುದನ್ನು ಭಕ್ತರಾದ ನಾವು ಅರ್ಥಮಾಡಿಕೊಳ್ಳಬೇಕಾಗಿದೆ.
ಭಕ್ತಿ ಎಂದರೆ ಕಾಲು ಬೀಳುವುದೇ ದೊಡ್ಡ ಸಂಸ್ಕೃತಿಯಾಗಿದೆ. ಸ್ವಾಮಿಗಳಿಗೆ ಕಾಲು ಬೀಳದಿದ್ದರೆ ಅದೊಂದು ಅಪಚಾರವೇನೋ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ಶರಣ ಪರಂಪರೆಯಲ್ಲಿ ಭಕ್ತಿ ಎಂದರೆ ಪ್ರೀತಿ. ಭಕ್ತಿ ಎಂದರೆ ಕರಗಸದಂತೆ ಹೋಗುತ್ತ ಕೊರೆಯುವುದು, ಬರುತ್ತ ಕೊರೆಯುವುದು. ಮತ್ತು ಅದು “ತೋರುಂಬ ಲಾಭ” ಎಂಬ ಮಾತೂ ಇದೆ.
ಭಕ್ತಿಯು ಬಾಹ್ಯ ಪ್ರದರ್ಶನವಾಗಿರದೆ, ಅದು ನಿರಂತರವಾಗಿ ನಮ್ಮ ಅಂತರಂಗವನ್ನು ಪರಿಶುದ್ಧಗೊಳಿಸುವ ಒಂದು ಪ್ರಕ್ರಿಯೆ., ಹಾಗೆಯೇ ಭಕ್ತಿಯು ನಮ್ಮಲ್ಲಿರುವ ಅಹಂಕಾರ ಮತ್ತು ಕೆಟ್ಟ ಗುಣಗಳನ್ನು ಕಳೆದು ಶುದ್ಧಗೊಳಿಸಬೇಕು.
ಆದರೆ, ಬಸವಣ್ಣನವರು ಹೇಳಿದ್ದನ್ನು ಪರಂಪರೆಯ ನೆಪದಲ್ಲಿ ಭಕ್ತರು ಹೇಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದರೆ, ನಮ್ಮ ನಡೆ-ನುಡಿಯಲ್ಲಿ ತಪ್ಪುಗಳಾಗುವುದು ಸಹಜ. ನಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಗುರುಗಳಿಗೆ ಕಾಲು ಬೀಳುವುದು, ಯಥೇಚ್ಛ ದಕ್ಷಿಣೆ ಕೊಡುವುದು ನಡೆದಿದೆ.
ಒಮ್ಮೆ ನಾನು ನನ್ನ ಗೆಳೆಯ, ಸಾಹಿತಿ ಚಂದ್ರಕಾಂತ ಕರದಳ್ಳಿ ಅವರೊಂದಿಗೆ ತೋಂಟದಾರ್ಯ ಮಠಕ್ಕೆ ಹೋಗಿದ್ದೆವು. ಲಿಂಗೈಕ್ಯ ಸಿದ್ಧಲಿಂಗ ಮಹಾಸ್ವಾಮೀಜಿಯವರ ಹತ್ತಿರ ಹೋದಾಗ, ಅವರು ಒಂದು ಚಿಕ್ಕ ರೂಮಿನಲ್ಲಿ ಕುಳಿತಿದ್ದರು. ಅವರು ನೆಲದ ಮೇಲೆ ಹಾಕಿದ ಜಮಖಾನದ ಮೇಲೆ ತಮ್ಮ ಕಾಲುಗಳನ್ನು ಮುಚ್ಚಿಕೊಂಡು ಕುಳಿತಿದ್ದರು. ಯಾರಾದರೂ ನಮಸ್ಕರಿಸಲು ಕಾಲಿಗೆ ಬೀಳಲು ಬಂದರೆ, ಕೆಳಗಿನ ನೆಲಕ್ಕೆ ನಮಸ್ಕರಿಸುವವರಿಗೆ ತಮ್ಮ ಕೈ ಕೊಡುತ್ತಿದ್ದರೆ ಹೊರತು, ಕಾಲು ಚಾಚುತ್ತಿರಲಿಲ್ಲ.
ಶರಣ ಪರಂಪರೆಯಲ್ಲಿ ಗುರು-ಶಿಷ್ಯ ಸಂಬಂಧವು ಶ್ರೇಷ್ಠತೆಯ ಆಧಾರದಲ್ಲಿರದೆ, ಪ್ರೀತಿ ಮತ್ತು ಪರಸ್ಪರ ಗೌರವದ ಮೇಲೆ ನಿಂತಿರುತ್ತದೆ, ಸಿದ್ಧಲಿಂಗ ಸ್ವಾಮೀಜಿಯವರ ವರ್ತನೆಯು, ನಿಜವಾದ ಗುರುವು ತನ್ನನ್ನು ಸಾಮಾನ್ಯರಿಗಿಂತ ಭಿನ್ನವಾಗಿ ಕಾಣದೆ, ಎಲ್ಲರನ್ನೂ ಸಮಾನವಾಗಿ ಕಾಣುತ್ತಾನೆ ಎಂಬುದಕ್ಕೆ ಉತ್ತಮ ನಿದರ್ಶನವಾಗಿದೆ. ಇದು ಶರಣ ಸಂಸ್ಕೃತಿಯ ಲಕ್ಷಣ ಎಂದು ನಮಗೆ ಆಗ ತಿಳಿದು ಬಂದಿತ್ತು.
ಲಿಂಗಾಯತ ಧರ್ಮದಲ್ಲಿ ಭಕ್ತರಾಗಲಿ, ಜಂಗಮರಾಗಲಿ ಎಲ್ಲರೂ ಸಮಾನರೇ ಹೊರತು, ಯಾರೂ ಶ್ರೇಷ್ಠ-ಕನಿಷ್ಠ ಎಂಬುದಿಲ್ಲ. ಇಲ್ಲದಿದ್ದರೆ ಅದು ಹೇಗೆ ಸಮಾನತೆಯ ಧರ್ಮವಾಗಬಲ್ಲುದು? ಇದು ಕೇವಲ ಮಾತಿನಲ್ಲಿರದೆ, ಆಚರಣೆಯಲ್ಲಿಯೂ ಅಳವಡಿಸಬೇಕು. ಇಲ್ಲದಿದ್ದರೆ ಅದು ಬಸವಣ್ಣನವರು ಕಂಡ ಕನಸು ಸಮಾನತೆಯ ಸಮಾಜವಾಗಲು ಸಾಧ್ಯವಿಲ್ಲ. ಆಚಾರ್ಯ ಪರಂಪರೆಯಲ್ಲಿ ಮೇಲು-ಕೀಳು ಇದೆ. ಅದು ಬಸವ ಪರಂಪರೆ ಆಗಲಾರದು.
ಶ್ರೇಷ್ಠತೆ ಎಂಬುದು ಅವರ ಆಡಂಬರದ ವೇಷಭೂಷಣಗಳಲ್ಲಿ ಇರುವುದಲ್ಲ, ಅವರ ನಡೆ-ನುಡಿಗಳಲ್ಲಿ ಮತ್ತು ವಿನಮ್ರತೆಯಲ್ಲಿ ಇರುತ್ತದೆ ಎಂಬುದನ್ನು ನಾವು ಅರಿಯಬೇಕು. ಭಕ್ತಿ ಎಂದರೆ ಹೃದಯಗಳ ನಡುವಿನ ನಿಸ್ವಾರ್ಥ ಪ್ರೀತಿ ಮತ್ತು ಗೌರವ. ಇದು ಮನುಷ್ಯನನ್ನು ಮನುಷ್ಯನಾಗಿ ಕಾಣುವ ಸಿದ್ಧಾಂತ. ಈ ಸಿದ್ದಾಂತಕ್ಕೆ ಪೂರಕವಾಗಿರದೆ ಅಂತರವನ್ನು ಕಾಯ್ದುಕೊಂಡು ಬರುತ್ತಿರುವ ಒಂದು ವರ್ಗ ಭಕ್ತಿಯನ್ನು ಪ್ರೀತಿಯೆಂದು ಭಾವಿಸದೇ, ಕರಗಸದಂತೆ ಹೋಗುತ್ತಾ ಬರುತ್ತಲ್ಲು ಕೊಯ್ದು ಇಬ್ಬಾಗ ಮಾಡುತ್ತಿದ್ದಾರೆ. ತೋರುಂಬ ಲಾಭವಾಗದೆ ಹಂಚಿಕೊಂಡು ಉಣ್ಣುವ ಒಂದು ಪರಂಪರೆ ಬೆಳಯಬೇಕಾದರೆ ನಾವು ಅವರಿಗೆ ಪ್ರೀತಿಯಿಂದ ಕಾಣಬೇಕು, ಅವರು ನಮಗೆ ಪ್ರೀತಿಯಿಂದ ಕಾಣುವುದೇ ಶರಣ ತತ್ವ. ಅದುವೇ ಬಸವ ತತ್ವ. ಅದುವೇ ಮನುಷ್ಯತ್ವ. ಇದುವೇ ನಿಜವಾದ ಸಂಸ್ಕೃತಿ.
🥲
ಬಸವ ಶರಣರ ಲಿಂಗಾಯತ ಧರ್ಮದಲ್ಲಿ ಮೇಲು ಕೀಳಿಲ್ಲ .
ಅದೂ ಎಡಗಾಲು ಕೊಟ್ಟಿದು ಅಶುಭ ದುರುದ್ದೇಶದಿಂದ ಕೂಡಿದ್ದು.
ಶ್ಯಾಮನೂರ ಅಜ್ಜವರಿಗೆ ಬಸವಾದಿಶರಣರು ಕಾಪಾಡಲಿ.
ಶ್ಯಾಮನೂರ ಅಜ್ಜವರಿಗೆ ಬಸವಾದಿಶರಣರು ಸದ್ಬುದ್ಧಿ ಆರೋಗ್ಯ ಆಯುಷ್ಯ ಗಟ್ಟಿಮನಸ್ಸು ಕಲ್ಪಿಸಿ ಅವರು ಇರುವುವಾಗಲೆ ಶಕ್ತಿ ಮೀರಿ ಬಸವಾದಿಶರಣರ ಲಿಂಗಾಯತ ಧರ್ಮದ ಮಾನ್ಯತೆಯು ಕೇಂದ್ರ ಸರ್ಕಾರದಿಂದ ಪಡೆಯುವಂತಾಗಲಿ.
💐
ಕಾಲೆತ್ತಿ ಇನ್ನೊಬ್ಬರ ಹಣೆಗೆ ಹಚ್ಚುವುದು ಇದು ಸನಾತನ ಸಂಸ್ಕ್ರತಿ ಹೌದೋ ಅಲ್ವೋ ಗೊತ್ತಿಲ್ಲ, ಯಾಕೆಂದರೆ ವೀರಶೈವರು ಸ್ವಲ್ಪ ಅತಿಯಾಗಿಯೇ ಎಲ್ಲದರ ಮೇಲೆ ಕಾಲಿಡುತ್ತಾರೆ , ಸ್ಥಾವರ ಲಿಂಗದ ಮೇಲೆ ಕಾಲಿಟ್ಟು ಜನರಿಂದ ಬೈಸಿಕೊಂಡಿದ್ದಾರೆ , ಲಿಂಗಾಯತರ ಶವಸಂಸ್ಕಾರದಲ್ಕಿ ಬಂದು ಹೆಣದ ತಲೆಯ ಮೇಲೆ ಕಾಲಿಡುತ್ತಾರೆ , ಈ ಪಂಚಪೀಠದ ಸ್ವಾಮಿಗಳು ವಯಸ್ಸಾದವರಿಗೆ ರೋಗಿಗಳಿಗೆ ಈ ರೀತಿ ಫುಟ್ ಬಾಲ್ ಆಡುವ ರೀತಿಯಲ್ಲಿ ಕಾಲು ಎತ್ತಿ ಇನ್ನೊಬ್ಬರ ಹಣೆಗೆ ಕಾಲು ಮುಟ್ಟಿಸುವುದು ಅಸಹ್ಯ ಪಧ್ದತಿಯಾಗಿ ಕಾಣುತ್ತಿದೆ, ಸ್ವಾಮಿಗಳು ಕೂಡ ಈ ಅಸಹ್ಯ ಮತ್ತು ಹಾಸ್ಯಾಸ್ಪದ ಪಧ್ದತಿಗಳನ್ನು ಬಿಟ್ಟು ಬದಲಾಗಲಿ, ತಲೆ ನೇವರಿಸಿ, ವಿಭೂತಿ ಹಚ್ಚಿಯೂ ಆಶೀರ್ವಾದ ಮಾಡಬಹುದು , ಮಾನವೀಯತೆ ಪ್ರೀತಿ ಆಗಲೂ ಕಾಣುತ್ತೆ , ಮಬ್ಬಕ್ತರೂ ಶ್ರೀಗಳಿಗೆ ಈ ರೀತಿ ಆಶೀರ್ವಾದ ಮಾಡದಂತೆ ಒತ್ತಾಯ ಮಾಡಬಾರದು
ಮೌಡ್ಯ ಭಕ್ತಿ ಸಾವಿರಾರು ವರ್ಷಗಳಿಂದ ರೂಡಿಗತವಾಗಿದೆ.
ಮೌಲ್ಯದಿಂದ ಕೂಡಿದ ಭಕ್ತಿ ಬೆಳೆಯಬೇಕಿದೆ.