ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ – ಎಲ್ಲರೂ ಓದಲೇಬೇಕಾದ ಪುಸ್ತಕ

ದೇವಸ್ಥಾನಗಳೇ ಇಲ್ಲದ ಜಗತ್ತಿನ ಏಕೈಕ ಧರ್ಮದ ಪರಿಚಯ

ಹಿರೇಬಾಗೇವಾಡಿ

ಭಾರತದ ಇತಿಹಾಸದಲ್ಲಿ ೧೨ನೇ ಶತಮಾನದ ಶರಣರ ಚಳವಳಿಯು ಒಂದು ಅದ್ಭುತ ಮೈಲುಗಲ್ಲು. ಈ ಚಳವಳಿಯ ನಿಜವಾದ ತತ್ವಗಳ ಹಾಗೂ ಲಿಂಗವಂತ ಧರ್ಮದ ಅಸ್ಮಿತೆಯ ಬಗ್ಗೆ ಪ್ರಸಿದ್ಧ ಚಿಂತಕ ರಂಜಾನ್ ದರ್ಗಾ “ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?” ಪುಸ್ತಕದಲ್ಲಿ ಬಹಳ ಸ್ಪಷ್ಟವಾಗಿ ಚರ್ಚಿಸಿದ್ದಾರೆ.

ದೇವಾಲಯವಿಲ್ಲದ ಧರ್ಮ

ದರ್ಗಾ ಅವರ ಪ್ರಕಾರ, ಲಿಂಗವಂತ ಧರ್ಮವು ‘ಏಕದೇವೋಪಾಸನೆ’ಯ ತತ್ವದ ಮೇಲೆ ನಿಂತಿದೆ. “ಜಗತ್ತಿನಲ್ಲಿ ದೇವಸ್ಥಾನಗಳೇ ಇಲ್ಲದ ಏಕೈಕ ಧರ್ಮ ಇದು” ಎನ್ನುವುದು ಇವರ ಮುಖ್ಯ ವಾದ.

ಉಳ್ಳವರ ಶಿವಾಲಯದಿಂದ ಪರಿವರ್ತನೆ ಆಗಿ “ದೇಹವೇ ದೇವಾಲಯ” ಎಂಬ ವಚನದ ಮೂಲ ತತ್ವವನ್ನು ಆಧರಿಸಿ, ದೇವರು ಹೊರಗಿನ ಗುಡಿ-ಗುಂಡಾರಗಳಲಿಲ್ಲ, ನಮ್ಮೊಳಗೇ ಇದ್ದಾನೆ ಎನ್ನುವುದು ಈ ಧರ್ಮದ ಸಿರಿ. ಮನುಷ್ಯನೊಳಗೆ ಸೃಷ್ಟಿಕರ್ತ ದೇವರಿದ್ದಾನೆ ಎಂದು ಭಾವಿಸುವುದು ಈ ಧರ್ಮದ ವಿಶೇಷತೆ.

ಇಷ್ಟಲಿಂಗ: ಬಸವಣ್ಣನ ಸೃಷ್ಟಿ

ಈ ಪುಸ್ತಕದಲ್ಲಿ ‘ಇಷ್ಟಲಿಂಗ’ದ ಬಗ್ಗೆ ಬಹು ಮುಖ್ಯ ಮಾಹಿತಿ ಇದೆ. ಕೆಲವರು ಇದು ವೈದಿಕ ಸಂಸ್ಕೃತಿಯ ಭಾಗ ಎಂದು ಹೇಳಿದರೂ, ದರ್ಗಾ ಅವರು ಅದನ್ನು ಆಧಾರಸಹಿತವಾಗಿ ತಿರಸ್ಕರಿಸುತ್ತಾರೆ.

“ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಲಿಂಗ” ಎಂಬ ಚೆನ್ನಬಸವಣ್ಣನವರ ವಚನವನ್ನು ಮುಂದಿಟ್ಟುಕೊಂಡು, ಬಸವಣ್ಣನವರೇ ಇಷ್ಟಲಿಂಗದ ಸೃಷ್ಟಿಕರ್ತ ಮತ್ತು ಜನಕರು ಎಂದು ಅವರು ನಿರೂಪಿಸುತ್ತಾರೆ. ಇಷ್ಟಲಿಂಗ ಕೇವಲ ಒಂದು ಕುರುಹಲ್ಲ, ಅದು ‘ಅರಿವಿನ’ ಸಂಕೇತವಾಗಿದೆ.

ಲಿಂಗಾಯತ ಮತ್ತು ವೀರಶೈವ ವ್ಯತ್ಯಾಸದ ನೆಲೆಗಳು

ಬಸವಣ್ಣನ ತತ್ವಗಳು ವೇದಗಳನ್ನಾಗಲಿ, ಆಗಮಗಳನ್ನಾಗಲಿ ಒಪ್ಪುವುದಿಲ್ಲ. ಆದರೆ ‘ವೀರಶೈವ’ ಎಂಬ ಪದವು ನಂತರದ ಕಾಲದಲ್ಲಿ ವಚನಗಳಲ್ಲಿ ನುಸುಳಿದೆ ಎನ್ನುವುದು ದರ್ಗಾ ಅವರ ಅಭಿಪ್ರಾಯ.

ಲಿಂಗಾಯತ ಧರ್ಮವು ಒಂದು ಸ್ವತಂತ್ರ ಧರ್ಮ ಎನ್ನುವುದಕ್ಕೆ ಈ ಪುಸ್ತಕ ಒಂದು ಬಲವಾದ ದಸ್ತಾವೇಜಾಗಿದೆ.

ಕಾಯಕವೇ ಕೈಲಾಸ: ಆರ್ಥಿಕ ಸಮಾನತೆ

ಕೇವಲ ಧರ್ಮವಲ್ಲ, ಲಿಂಗವಂತ ಧರ್ಮವು ಒಂದು ‘ಕಾಯಕದ ಅರ್ಥಶಾಸ್ತ್ರ’. “ಕಾಯಕವೇ ಕೈಲಾಸ” ಎನ್ನುವುದು ಕೇವಲ ಕೆಲಸ ಮಾಡಿ ಎನ್ನುವುದಲ್ಲ, ಅದು ಸಾಮಾಜಿಕ ಸಮಾನತೆಯ ದಾರಿ. ಶ್ರಮಕ್ಕೆ ಗೌರವ ನೀಡುವ ಮತ್ತು ಬಂದ ಲಾಭವನ್ನು ‘ದಾಸೋಹ’ ಮೂಲಕ ಸಮಾಜಕ್ಕೆ ಅರ್ಪಿಸುವ ಪದ್ಧತಿಯನ್ನು ದರ್ಗಾ ಅವರು ಬಹಳ ಸುಂದರವಾಗಿ ವಿವರಿಸಿದ್ದಾರೆ.

ಕೊನೆಮಾತು

ರಂಜಾನ್ ದರ್ಗಾ ಅವರು ತಮ್ಮ ಪತ್ರಕರ್ತರ ದೃಷ್ಟಿಕೋನ ಮತ್ತು ಸಾಮಾಜಿಕ ವಿಜ್ಞಾನಿಯ ಚಿಂತನೆಯನ್ನು ಈ ಪುಸ್ತಕದಲ್ಲಿ ಬೆರೆಸಿದ್ದಾರೆ. “ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?” ಪುಸ್ತಕವು ಶರಣರ ವಚನ ತತ್ವಗಳ ಮೂಲಕ ಹೊಸ ಸಮಾಜವನ್ನು ಹೇಗೆ ಕಟ್ಟಬಹುದು ಎಂಬ ಮಾರ್ಗದರ್ಶಿಯಾಗಿದೆ.

ಲಡಾಯಿ ಪ್ರಕಾಶನ, ಗದಗ ಅವರು ಅಷ್ಟೇ ಶರಣಪ್ರಜ್ಞೆಯಾಗಿ ಪ್ರಕಾಶನ ಮಾಡಿದ್ದಾರೆ, ಬೆಲೆ ಕೇವಲ ೩೦/- ರೂಪಾಯಿ ವಚನ ಸಾಹಿತ್ಯದ ಬಗ್ಗೆ ಆಸಕ್ತಿ ಉಳ್ಳವರು ಮತ್ತು ಧರ್ಮದ ನಿಜವಾದ ಬೇರುಗಳನ್ನು ತಿಳಿಯಬೇಕೆನ್ನುವವರು ತಪ್ಪದೆ ಓದಲೇಬೇಕಾದ ಕೃತಿ ಇದು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *