ರಾಯಚೂರು
(ಬಸವ ಸಂಸ್ಕೃತಿ ಅಭಿಯಾನದ ಸಿದ್ದತೆಯ ಬಗ್ಗೆ ರಾಯಚೂರು ಜಿಲ್ಲೆಯ ಶರಣ ತತ್ವ ಚಿಂತಕ ಬಸವರಾಜ ಕುರಗೋಡ ಅವರ ಪ್ರತಿಕ್ರಿಯೆ.)
1) ನಿಮ್ಮ ಜಿಲ್ಲೆಯಲ್ಲಿ ಅಭಿಯಾನದ ಬಗ್ಗೆ ಯಾವ ಪ್ರಮಾಣದಲ್ಲಿ ಬೆಂಬಲ ದೊರೆಯುತ್ತದೆ?
ಉತ್ತರ: ಜಿಲ್ಲೆಯಲ್ಲಿ ಅಭಿಯಾನದ ಬಗ್ಗೆ ಹೆಚ್ಚಿನ ಪ್ರಚಾರವಿಲ್ಲದ ಕಾರಣ ಅಭಿಯಾನ ಕುರಿತು ತಿಳುವಳಿಕೆ ಕಡಿಮೆ ಇದೆ ಎಂದು ಅನಿಸುತ್ತಿದೆ. ಸ್ವಾಮೀಜಿಗಳ ಬೆಂಬಲ ಬಹುತೇಕ ಕಡಿಮೆ. ಬೆರಳೆಣಿಕೆಯ ಸ್ವಾಮೀಜಿಗಳು ಬೆಂಬಲಿಸುವರು. ಜನಸಾಮಾನ್ಯರದೇ ಹೆಚ್ಚಿನ ಬೆಂಬಲವಾಗಿರುತ್ತದೆ.
2) ಆಯೋಜಕರು ಅಭಿಯಾನದ ಸ್ವರೂಪ ಮತ್ತು ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಅದು ನಿಮ್ಮ ಜಿಲ್ಲೆಗೆ ಸೂಕ್ತವೇ.
ಉತ್ತರ: ಅಭಿಯಾನದ ಕಾರ್ಯಗಳು ಜಿಲ್ಲಾವಾರು ಬದಲಾವಣೆ ಅವಶ್ಯಕತೆ ಇರುವುದಿಲ್ಲ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಕ್ಕೆ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಸಾಕು ಎಂಬುದು ನನ್ನ ಅನಿಸಿಕೆ.
3) ನಿಮ್ಮ ಜಿಲ್ಲೆಯಲ್ಲಿ ಅಭಿಯಾನ ಸಫಲವಾಗಿ ನಡೆಯಲು ಯಾವ ರೀತಿಯ ಪೂರ್ವಸಿದ್ಧತೆಯ ಅಗತ್ಯವಿದೆ?
ಉತ್ತರ: ಪ್ರಮುಖ ಮಠಾಧೀಶರು ಒಂದು ಕಾರ್ಯಕ್ರಮ ಮಾಡಿ ಅಭಿಯಾನ ಕುರಿತು ತಿಳುವಳಿಕೆ ಕೊಟ್ಟು ಹೋದರೆ ಉಳಿದದ್ದು ತನ್ನಪಾಡಿಗೆ ತಾನು ನಡೆದು ಹೋಗುತ್ತದೆ.
4) ಅಭಿಯಾನದಲ್ಲಿ ಪಾಲ್ಗೊಳ್ಳಬೇಕಾಗಿರುವ ಸಂಘಟನೆಗಳು, ಮಠ, ಗುರುಗಳನ್ನು ಹೆಸರಿಸುತ್ತೀರಾ? ಅವರಿಂದ ಯಾವ ರೀತಿಯ ಬೆಂಬಲ ನಿರೀಕ್ಷಿಸಬಹುದು?
ಉತ್ತರ: ಸಿಂಧನೂರಿನ ಸುವರ್ಣಗಿರಿ ವಿರಕ್ತಮಠದ ಶಾಖಾಮಠವಾದ ಯದ್ದಲದೊಡ್ಡಿಯ ಪೂಜ್ಯರು, ಲಿಂಗಸೂಗೂರು ತಾಲೂಕಿನ ಮುದಗಲ್ ಬಳಿಯ ತಿಮ್ಮಾಪುರದ ಕಲ್ಯಾಣಾಶ್ರಮ ಪೂಜ್ಯರು, ದೇವದುರ್ಗದ ಬಸವದೇವರು (ವಟಗಲ್), ಲಿಂಗಸೂಗೂರು ತಾಲೂಕು ಸಂತೇಕೆಲೂರ ಘನಮಠದ ಪೂಜ್ಯರುಗಳು ಪ್ರಮುಖ ಮಠಾಧೀಶರ ಪ್ರೇರಣೆಯಿಂದ ಭಾಗವಹಿಸುವ ಸಾಧ್ಯತೆಗಳಿವೆ. ಉಳಿದಂತೆ ಅನೇಕ ಬಸವಪರ ಸಂಘಟನೆಗಳು ಭಾಗವಹಿಸುತ್ತವೆ.
5) ಅಭಿಯಾನವನ್ನು ಸಫಲವಾಗಿ ನಡೆಸುವಲ್ಲಿ ಏನಾದರು ಸಮಸ್ಯೆಯಾಗಬಹುದೇ?
ಉತ್ತರ: ಸಾಮಾನ್ಯ ಊಹೆಯಂತೆ ಪಂಚಪೀಠದ ಜಗದ್ಗುರುಗಳ ಬೆಂಬಲಿಗರಿಗೂ ಮತ್ತು ಬಸವ ಬೆಂಬಲಿಗರ ನಡುವೆ ಸ್ವಲ್ಪಮಟ್ಟಿಗೆ ವಾದವಿವಾದಗಳು ಏರ್ಪಡಬಹುದು. ವಿಚಾರ ವಿನಿಮಯಗಳ ಮೂಲಕ ಘರ್ಷಣೆಗೆ ಅವಕಾಶವಾಗದಂತೆ ಅದನ್ನು ಸಂಭಾಳಿಸಿಕೊಂಡು ಮುನ್ನಡೆಯಬೇಕಾದುದು ನಮ್ಮಗಳ ಕರ್ತವ್ಯವಾಗುತ್ತದೆ.