ವಿಜಯಪುರ
ಜಾಗತಿಕ ಲಿಂಗಾಯತ ಮಹಾಸಭಾದ ವಿಜಯಪುರ ಜಿಲ್ಲಾ ಘಟಕದ ಘೋಷಣಾ ಸಮಾರಂಭ ಶುಕ್ರವಾರ ನಡೆಯಿತು.
ನಗರದ ಹೊರವಲಯದಲ್ಲಿರುವ ಕಾಯಕಯೋಗಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದಿದ್ದ ಬಸವಾನುಯಾಯಿಗಳು ಭಾಗವಹಿಸಿದ್ದರು.

ಅಧ್ಯಕ್ಷರಾಗಿ ಕಾಯಕಯೋಗಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಬಸನಗೌಡ ಹರನಾಳ್ ಅವರನ್ನು ಹಾಗೂ ಕಾರ್ಯಾಧ್ಯಕ್ಷರಾಗಿ ಉದ್ಯಮಿ ಎಸ್.ಎಚ್. ನಾಡಗೌಡರ ಅವರನ್ನು ಆಯ್ಕೆ ಮಾಡಲಾಯಿತು. ಮಹಾಸಭಾ ನಿಯಮಾನುಸಾರ ಪೂರ್ಣಪ್ರಮಾಣದ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಹಾಗೂ ಜಿಲ್ಲೆಯ ವಿವಿಧ ತಾಲೂಕು ಘಟಕಗಳು, ಜಿಲ್ಲಾ ಹಾಗೂ ತಾಲೂಕು ಮಹಿಳಾ ಘಟಕಗಳು ಮತ್ತು ಯುವ ಘಟಕಗಳನ್ನು ಆಯ್ಕೆ ಮಾಡಲು ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರಿಗೆ ಸೂಚಿಸಲಾಯಿತು.

ಸಭೆಯಲ್ಲಿ ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿಗಳಾದ ಡಾ. ಎಸ್. ಎಮ್. ಜಾಮದಾರ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ಲಿಂಗಾಯತರಲ್ಲಿ ಧಾರ್ಮಿಕ ಹಾಗೂ ರಾಜಕೀಯ ಪ್ರಜ್ಞೆ ಮೂಡಬೇಕು ಎಂದರು. ಮಹಾಸಭಾಕ್ಕೆ ಸದಸ್ಯತ್ವ ನೋಂದಣಿ ಕಾರ್ಯ ಹೆಚ್ಚಿನಪ್ರಮಾಣದಲ್ಲಿ ಕೈಕೊಳ್ಳುವಂತೆ ಜಿಲ್ಲಾ ಘಟಕಕ್ಕೆ ಸಲಹೆ ನೀಡಿದರು.
ನೂತನ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರು ಮಹಾಸಭಾವನ್ನು ಗಟ್ಟಿಯಾಗಿ ಸಂಘಟಿಸುವ ಭರವಸೆ ನೀಡಿದರು. ಮಹಾಸಭಾದ ಕಚೇರಿಗಾಗಿ ನಿವೇಶನ ಹಾಗೂ ದೇಣಿಗೆ ನೀಡುವುದಾಗಿ ಬಸನಗೌಡ ಹರನಾಳ್ ಅವರು ಘೋಷಿಸಿದರು.

ಸೆಪ್ಟೆಂಬರ ತಿಂಗಳಲ್ಲಿ ನಡೆಯಲಿರುವ ಬಸವ ಸಾಂಸ್ಕೃತಿಕ ಅಭಿಯಾನದ ಪೂರ್ವಭಾವಿಯಾಗಿ ವಿವಿಧ ಜಿಲ್ಲೆಗಳಲ್ಲಿ ಬಸವಾನುಯಾಯಿಗಳನ್ನು ಸಂಘಟಿಸುವ ಕಾರ್ಯ ಚುರುಕುಗೊಂಡಿದೆ. ಆ ನಿಮಿತ್ಯ ಸಮಸ್ತ ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಜಾಗತಿಕ ಲಿಂಗಾಯತ ಮಹಾಸಭಾದ ವಿವಿಧ ಜಿಲ್ಲಾ ಘಟಕಗಳನ್ನು ರಚಿಸಲಾಗುತ್ತಿದೆ ಎಂದು ಶರಣ ಚಿಂತಕ ಡಾ.ಜೆ. ಎಸ್. ಪಾಟೀಲ ಹೇಳಿದರು.
ಸಂಘಟನೆ ನಿಯಮಾವಳಿ ಹಾಗೂ ಸಂಘಟನೆಯ ಕುರಿತು ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿಯವರು ಮಾತನಾಡಿದರು.

ಮನಗೂಳಿ ವಿರಕ್ತಮಠದ ಪೂಜ್ಯ ವಿರತೀಶಾನಂದ ಸ್ವಾಮೀಜಿ ಸಾನಿದ್ಯ ವಹಿಸಿ ಮಾತನಾಡುತ್ತಾ, ಸ್ವತಂತ್ರ ಧರ್ಮ ಮಾನ್ಯತೆಗಾಗಿ ಎಂಟು ವರ್ಷದ ಹಿಂದೆ ವಿಜಯಪುರ ನಗರದಲ್ಲಿ ನಡೆದ ಬೃಹತ್ ಸಮಾವೇಶದ ನಂತರ ಲಿಂಗಾಯತ ಜಾಗೃತಿ ಕಾರ್ಯ ಇದೀಗ ನಡೆಯುತ್ತಿದೆ. ವಿಜಯಪುರ ಜಿಲ್ಲೆ ಶರಣರ ಕ್ಷೇತ್ರವಾಗಿದೆ, 20ಕ್ಕಿಂತ ಹೆಚ್ಚು ಬಸವಾದಿ ಶರಣರು ಇಲ್ಲಿಯವರಾಗಿದ್ದಾರೆ. ಬಸವ ಧರ್ಮದ ಕಾರ್ಯ ಚಟುವಟಿಕೆಗಳು ಜಿಲ್ಲೆಯಲ್ಲಿ ಮುಂಚೂಣಿಯಲ್ಲಿರಬೇಕು. ಲಿಂಗಾಯತ, ಬಸವಧರ್ಮ ಸಂಘಟನೆಯನ್ನು ಗಟ್ಟಿಗೊಳಿಸುವ ಕಾರ್ಯ ನಿರಂತರ ನಡೆಯಬೇಕು ಎಂದರು.
ಮನಗೂಳಿಯ ಸೋಮನಗೌಡ ಪಾಟೀಲ, ಮಾನವ ಬಂಧುತ್ವ ವೇದಿಕೆಯ ಪ್ರಭುಗೌಡ ಪಾಟೀಲ, ಡಿವೈಎಸ್ಪಿ ಬಸವರಾಜ ಎಲಿಗಾರ, ಡಾ. ರವಿಕುಮಾರ ಬಿರಾದಾರ, ಅಪ್ಪುಗೌಡ ಪಾಟೀಲ, ಚೆನ್ನು ಕಟ್ಟಿಮನಿ, ಶಾಂತಮ್ಮ ಹರನಾಳ, ಸಿದ್ದು ಯಾಪಲಪರವಿ, ಮಾರುತಿರಾವ ಬಂಡಿ, ಕಲ್ಲಪ್ಪ ಕಡೆಚೂರ, ಬಸವರಾಜ ಕೊಂಡಗುಳಿ ಮತ್ತಿತರರು ಭಾಗವಹಿಸಿದ್ದರು.

ಡಿವೈಎಸ್ಪಿ ಬಸವರಾಜ ಎಲಿಗಾರ ಅವರನ್ನು ಸತ್ಕರಿಸಲಾಯಿತು.
ಸಮಾರಂಭದಲ್ಲಿ ಶಿಕ್ಷಣ ಸಂಸ್ಥೆಯ ಮಕ್ಕಳು ವಚನ ಗಾಯನ ಹಾಗೂ ಮಲ್ಲಗಂಬ ಪ್ರದರ್ಶನ ಮಾಡಿದರು.
ಆರಂಭದಲ್ಲಿ ಷಟಸ್ಥಲ ಧ್ವಜಾರೋಹಣ ಮಾಡಿ, ಧ್ವಜಗೀತೆ ಹಾಡಲಾಯಿತು. ನಂತರ ಬಸವಣ್ಣನವರ ಮೂರ್ತಿಗೆ ಪುಷ್ಟಾರ್ಚನೆ ಮಾಡುವುದರೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಬಸನಗೌಡ ಹರನಾಳ ಅವರು ಎಲ್ಲರನ್ನು ಸ್ವಾಗತಿಸಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಒಳ್ಳೆಯ ಬೆಳವಣಿಗೆ. ಪ್ರತಿ ಹಳ್ಳಿ ಹಳ್ಳಿಯಲ್ಲಿ ಜಾಲಿಮಾದ ಘಟಕಗಳು ಆಗಬೇಕು. 🙏
ವಿಜಯಪುರ ಜಿಲ್ಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಅಸ್ತಿತ್ವಕ್ಕೆ ಬಂದು, ಅದರ ಅದ್ಯಕ್ಷರಾದ ಶ್ರೀ ಬಸನಗೌಡ ಹರನಾಳ ಹಾಗೂ ಕಾರ್ಯಾದ್ಯಕ್ಷರಾದ ಎಸ್ ಎಚ್. ನಾಡಗೌಡರ ಅವರಿಗೆ ಅಭಿನಂದನೆಗಳು , ಜಾಗತಿಕ ಲಿಂಗಾಯತ ಮಹಾಸಭೆಗೆ ನಿವೇಶನ ಮತ್ರು ಕಟ್ಟಡ ಕಟ್ಡಿದರೆ ಅದು ರಾಜ್ಯದಲ್ಲಿಯೇ ಪ್ರಥಮವಾಗುವುದು , ಇದರ ಜೊತೆಗೆ ವಿಜಯಪುರ ಜಿಲ್ಲೆಯಲ್ಲಿ ಯುವಜನಾಂಗದಲ್ಲಿ ಹೆಚ್ಚು ಬಸವ ತತ್ವ ಪ್ರಸಾರಕ್ಕೆ ಹೆಚ್ಚಿನ ಒತ್ತು ಕೊಡಲಿ
ಶುದ್ಧ ಬಸವ ಪರ ಮನಸ್ಸಿನವರು(ಅಶುದ್ಧ/ಭೇದವಿಲ್ಲದೆ) ಸಂಘಟನೆಯಾಗಲು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.ತಮಗೆಲ್ಲರಿಗೂ ಶುಭವಾಗಲಿ
ನೂತನವಾಗಿ ಆಯ್ಕೆಯಾಗಿರುವ ವಿಜಯಪುರ ಜಾ ಲಿ ಮ ಘಟಕದ ಅಧ್ಯಕ್ಷರು ಮತ್ತು ಕಾರ್ಯಾದಕ್ಷರಿಗೆ ಅಭಿನಂದೆನೆಗಳು….
ಒಳ್ಳೆಯ ಬೆಳವಣಿಗೆ…..
💐💐🌹🌹👍👍👌👌🙏🙏