ಸಂಗೀತ ಜೀವನದ ಅವಿಭಾಜ್ಯ ಅಂಗ: ಡಾ. ತೋಂಟದ ಸಿದ್ಧರಾಮ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ

ಸಂಗೀತವು ಮಾನವ ಸಮಾಜದ ಸಂಸ್ಕೃತಿಯಾಗಿದೆ. ಸಂಗೀತಕ್ಕೆ ಪಂಚಮವೇದ ಎನ್ನುತ್ತಾರೆ. ಸಂಗೀತ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೭೫೦ ನೇ ಶಿವಾನುಭವದಲ್ಲಿ ಮಾತನಾಡಿದ ಶ್ರೀಗಳು, ಗದುಗಿನ ಪಂಚಾಕ್ಷರಿ ಗವಾಯಿಗಳು ಹಾಗೂ ಕವಿ ಪುಟ್ಟರಾಜರು ಸಂಗೀತವನ್ನು ಕರಗತ ಮಾಡಿಕೊಂಡಿದ್ದರು. ಪುಟ್ಟರಾಜರು ತ್ರಿಭಾಷಾ ಕವಿಗಳಾಗಿದ್ದರು. ಅಂಧ ಅನಾಥ ಮಕ್ಕಳಿಗೆ ಸಂಗೀತ ವಿದ್ಯೆ ನೀಡುವ ಮೂಲಕ ಅವರ ಬಾಳಿಗೆ ದಾರಿದೀಪವಾದರು.

ಪ್ರತಿಯೊಂದು ಕಾರ್ಯಕ್ರಮದಲ್ಲಿ ಸಂಗೀತ ಬೇಕೇ ಬೇಕು. ಸಂಗೀತವಿಲ್ಲದೆ ಪ್ರಾರಂಭವಾಗುವುದೆ ಇಲ್ಲ. ಶರಣರ ವಚನಗಳನ್ನು ಮೊದಮೊದಲು ಹಾಡಲು ಬರುವುದಿಲ್ಲ ಎನ್ನುತ್ತಿದ್ದರು. ಈಗ ಶರಣರ ವಚನಗಳನ್ನು ಹಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭಗೊಳ್ಳುತ್ತವೆ. ಬಸವಣ್ಣನವರು ನಾದಪ್ರಿಯನಲ್ಲ, ಭಕ್ತಿ ಪ್ರಿಯ ನಮ್ಮ ಕೂಡಲಸಂಗಮದೇವ ಎಂದರು. ಮೀರಾಬಾಯಿ ಸಂಗೀತವನ್ನು ಭಕ್ತಿಯಿಂದ ಹಾಡಿದಾಗ ಶಿವನನ್ನು ಕಂಡಳು. ಭೌತ ಪ್ರಪಂಚವನ್ನ ನೋಡುವುದು ವಿಜ್ಞಾನ. ಅಂತರಂಗವನ್ನು ಅರಿಯುವುದು ಆಧ್ಯಾತ್ಮ. ಸಂಗೀತಕ್ಕೆ ಮನಸೋಲದ ಮನಸ್ಸುಗಳಿಲ್ಲ. ಸಂಗೀತವನ್ನು ಕಡ್ಡಾಯವಾಗಿ ಶಾಲಾ ಕಾಲೇಜು ಮಕ್ಕಳಿಗೆ ಬೋಧಿಸಬೇಕು ಎಂದು ಆಶೀರ್ವಚನ ನೀಡಿದರು.

ಉಪನ್ಯಾಸಕರಾಗಿ ಆಗಮಿಸಿದ ಲಕ್ಷ್ಮೇಶ್ವರದ ಚಿಂತಕರು, ನಿವೃತ್ತ ಮುಖ್ಯೋಪಾಧ್ಯಾಯ ರಮೇಶ್ ನವಲೆಯರು ಮಾತನಾಡಿ, ಸಿ.ಎನ್. ಶಾಸ್ತ್ರೀಯವರು ೧೯೩೨ ರಲ್ಲಿ ರೇಡಿಯೋದಲ್ಲಿ ಮೊದಲು ವಚನಗಳನ್ನು ಹಾಡಿದರು. ನಂತರ ಮಲ್ಲಿಕಾರ್ಜುನ ಮನ್ಸೂರ್‌ರವರು ಅಕ್ಕಾ ಕೇಳವ್ವ ನಾನೊಂದು ಕನಸು ಕಂಡೆ ತುಂಬಾ ಪ್ರಸಿದ್ಧಿಯನ್ನು ಪಡೆಯಿತು. ಸಂಗೀತಕ್ಕೆ ಒಲಿಯದ ಮನವಿಲ್ಲ. ಬ್ರಹ್ಮಾಂಡ ಸೃಷ್ಟಿಯಲ್ಲಿ ಓಂಕಾರ ನಾದ ಹೊಮ್ಮಿತು. ಸೃಷ್ಟಿಯಲ್ಲಿನ ಕಲ್ಲು, ಮಣ್ಣು, ಗಿಡ, ಎಲೆ, ಬಳ್ಳಿ, ಗಾಳಿ, ನೀರು, ಹಾರುವ ಹಕ್ಕಿ, ಎಲ್ಲದರಲ್ಲಿಯೂ ಸಂಗೀತವಿದೆ ಎಂದು ಮಾರ್ಮಿಕವಾಗಿ ಉಪನ್ಯಾಸ ನೀಡಿದರು.

ಸಾಹಿತಿಗಳಾದ ಅಂದಾನಪ್ಪ ವಿಭೂತಿ ಅತಿಥಿಗಳಾಗಿ ಆಗಮಿಸಿದ್ದರು. ಬಸವರಾಜ ಸಿಂಧಗಿಮಠ, ವೈಷ್ಣವಿ ಗೂಳಿ, ಭೀಮಸಿಂಗ ರಾಠೋಡ, ಶ್ರೀಕಾಂತ್ ಚಿಮ್ಮಲ ಮತ್ತು ಭೀಮಪ್ಪ ಹಳ್ಳೇಗೋಳ ಭಾಗವಹಿಸಿ ವಚನಗಳಿಗೆ ನಾದರೂಪ ಕೊಟ್ಟರು. ವಚನ ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನಡೆಸಿಕೊಟ್ಟರು.

ಧಾರ್ಮಿಕ ಗ್ರಂಥ ಪಠಣವನ್ನು ಕುಮಾರಿ ತೆಹರಿನ್ ಎಸ್. ಖವಾಸ, ವಚನ ಚಿಂತನವನ್ನು ಕುಮಾರಿ ಪ್ರಣವಿ ಬಿ. ಅಣ್ಣಿಗೇರಿ ನೆರವೇರಿಸಿದರು. ದಾಸೋಹ ಸೇವೆಯನ್ನು ವಿಜಯಕುಮಾರ ಶೆಟ್ಟರ ಹಾಗೂ ರಾಜೇಶ್ವರಿ ಶೆಟ್ಟರ್ ಮತ್ತು ಡಾ. ಶಿಲ್ಪಾ ಪ್ರಕಾಶ್ ಕುಷ್ಟಗಿ ಇವರು ವಹಿಸಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ ಉಪಾಧ್ಯಕ್ಷರಾದ ಡಾ . ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮು ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷರಾದ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.

ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/DAHwtSaP5nUL2sT483TnP6

Share This Article
Leave a comment

Leave a Reply

Your email address will not be published. Required fields are marked *