ಉದ್ಘಾಟನೆಗೆ 6-7,000 ಬಸವ ಭಕ್ತರ ನಿರೀಕ್ಷೆ; ಸಚಿವ ಶಿವಾನಂದ ಪಾಟೀಲರ ಸಹಕಾರದ ನಿರೀಕ್ಷೆ
ಬಸವನಬಾಗೇವಾಡಿ
ಬಸವತತ್ವವನ್ನು ಎಲ್ಲರಿಗೂ ಮುಟ್ಟಿಸಲು ಈ ಪುಣ್ಯ ನೆಲದಿಂದ ಸೆಪ್ಟೆಂಬರ್ ಒಂದರಿಂದ ಶುರುವಾಗಲಿರುವ ಬಸವ ಸಂಸ್ಕ್ರತಿ ಅಭಿಯಾನಕ್ಕೆ ಎಲ್ಲಾ ಮಠಾಧೀಶರು, ಬಸವ ಸಂಘಟನೆಗಳು ಕೈ ಜೋಡಿಸಿ ಯಶಸ್ವಿಗೊಳಿಸಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಡಾ. ಎಸ್. ಎಮ್. ಜಾಮದಾರ ಕರೆ ನೀಡಿದರು.
ಪಟ್ಟಣದ ವಿರಕ್ತಮಠದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಬಸವ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಗುರುವಾರ ಸಂಜೆ ಜರುಗಿದ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸೆಪ್ಟೆಂಬರ್ 1ರಂದು ಬಸವನಬಾಗೇವಾಡಿಯಲ್ಲಿ ನಡೆಯುವ ಅಭಿಯಾನದ ಉದ್ಘಾಟನೆಯಲ್ಲಿ ಸುಮಾರು 6-7 ಸಾವಿರ ಜನರು ಭಾಗವಹಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಸಂವಾದ, ವಚನ ಸಂಗೀತ, ಉಪನ್ಯಾಸ, ವಚನ ಕಟ್ಟುಗಳ ಮೆರವಣಿಗೆ, ದಾಸೋಹ ಹಮ್ಮಿಕೊಳ್ಳಬೇಕು. ಅಭಿಯಾನವನ್ನು ಆಯೋಜಿಸಲು ಐದು ಸಮಿತಿಗಳನ್ನು ರಚನೆ ಮಾಡುವ ಅಗತ್ಯವಿದೆ, ಎಂದು ಜಾಮದಾರ ಹೇಳಿದರು.
ನಾವು ಬಸವ ಸಂಸ್ಕ್ರತಿಯನ್ನು ಮರೆತಿರುವುದು ವಿಷಾದನೀಯ ಸಂಗತಿ. ಕೆಲ ಸ್ವಾಮೀಜಿಗಳು ಇದೀಗ ಬಸವ ಸಂಸ್ಕ್ರತಿಯ ಕುರಿತು ಎಚ್ಚೆತ್ತುಕೊಂಡಿದ್ದಾರೆ. ಅವರ ಬೆನ್ನೆಲುಬಾಗಿ ನಾವು ನಿಂತಿದ್ದೇವೆ. ಎಲ್ಲ ಸ್ವಾಮೀಜಿಗಳು ಲಿಂಗಾಯತರಾಗಿ ಬರಬೇಕಿದೆ. ಲಿಂಗಾಯತ ಪರವಾಗಿ ನಿಲ್ಲದಿರುವ ಮಠಾಧೀಶರಿಗೆ ಅಸ್ತಿತ್ವ ಇಲ್ಲದಂತಾಗುತ್ತದೆ. ಬಸವತತ್ವ ಎಲ್ಲಕ್ಕಿಂತಲೂ ದೊಡ್ಡದ್ದು. ಈ ಭಾವನೆ ಎಲ್ಲರಲ್ಲಿಯೂ ಬರುವಂತಾಗಬೇಕೆಂದರು.
ಲಿಂಗಾಯತರು ವೈದಿಕ ಪರಂಪರೆಯಿಂದ ಹೊರಗೆ ಬರಬೇಕಿದೆ. ನಮ್ಮ ಹಿರಿಯರು ಬಸವಾದಿ ಶರಣರ ವಚನಗಳನ್ನು ಪರಿಷ್ಕರಿಸಿ ನಮಗೆ ನೀಡಿದ್ದಾರೆ. ಈ ವಚನಗಳು ಲಿಂಗಾಯತ ಧರ್ಮದ ಕುರಿತು ಹೇಳುತ್ತವೆ. ಇದನ್ನು ನಾವೆಲ್ಲರೂ ಅರಿತುಕೊಂಡು ಲಿಂಗಾಯತರು ಜಾಗೃತರಾಗುವ ಅಗತ್ಯವಿದೆ ಎಂದರು.

ಈಚೆಗೆ ಕೆಲವರು ವಚನಗಳು ವೇದಗಳ ಭಾಷಾಂತರ, ಅನುಭವ ಮಂಟಪ ಇರಲಿಲ್ಲ ಎಂದೆಲ್ಲಾ ಹೇಳಿ ವಚನ ಸಾಹಿತ್ಯ, ಲಿಂಗಾಯತರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನಾವು ತಕ್ಕ ಉತ್ತರ ನೀಡಿ ಅವರ ಸಂಚನ್ನು ವಿಫಲಗೊಳಿಸಲಾಗಿದೆ. ಎಲ್ಲಾ ಲಿಂಗಾಯತರು ಒಗ್ಗೂಡಿ ಬಸವ ಯುಗ ಆರಂಭಿಸಬೇಕಿದೆ ಎಂದರು.
ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಈ ಪುಣ್ಯ ನೆಲದಿಂದ ಆರಂಭವಾಗುವ ಬಸವ ಸಂಸ್ಕ್ರತಿಯ ಅಭಿಯಾನಕ್ಕೆ ಬಸವ ನಾಡಿನ ಜನರು ಸಂಪೂರ್ಣ ಕೈಜೋಡಿಸುವ ಅಗತ್ಯವಿದೆ. ಸಚಿವ ಶಿವಾನಂದ ಪಾಟೀಲರ ಸಹಕಾರವನ್ನು ಇದಕ್ಕೆ ಪಡೆಯಲಾಗುವುದು. ಅಭಿಯಾನದ ಯಶಸ್ವಿಗೆ ನಾವು ಸದಾ ಬದ್ಧ ಎಂದರು.
ಸಾನಿಧ್ಯ ವಹಿಸಿದ್ದ ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ, ಮನಗೂಳಿಯ ವಿರತೀಶಾನಂದ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರ ಚಿಂತನೆಗಳು ಜಗತ್ತಿಗೆ ಸರಿಯಾಗಿ ಮುಟ್ಟಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಎಲ್ಲ ಲಿಂಗಾಯತರು ತನು-ಮನ-ಧನದಿಂದ ಸಹಕಾರ ನೀಡಿ ಬಸವ ಸಿದ್ಧಾಂತ ಎಲ್ಲೆಡೆ ಹರಡುವಂತಾಗಬೇಕೆಂದರು.

ಬೆಳಗಾವಿ ಜಿಲ್ಲಾ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ರೊಟ್ಟಿ, ವಿಜಯಪುರದ ಬಸನಗೌಡ ಹರನಾಳ ಮಾತನಾಡಿದರು. ವೇದಿಕೆಯಲ್ಲಿ ಮಸಬಿನಾಳದ ಸಿದ್ದರಾಮ ಶಿವಯೋಗಿಗಳು, ಸಾಹಿತಿ ಲ.ರು. ಗೊಳಸಂಗಿ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕಾಧ್ಯಕ್ಷ ಎಫ್.ಡಿ.ಮೇಟಿ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವ್ಹಿ.ಬಿ. ಮರ್ತುರ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಕದಳಿ ವೇದಿಕೆಯ ಸಾವಿತ್ರಿ ಕಲ್ಯಾಣಶೆಟ್ಟಿ, ಮುಖಂಡರಾದ ಬಿ.ಕೆ.ಕಲ್ಲೂರ, ಬಸವರಾಜ ಹಾರಿವಾಳ, ಎಸ್.ಆರ್. ಹೂಗಾರ, ಸಂಗನಗೌಡ ಚಿಕ್ಕೊಂಡ, ಎಸ್.ಎ. ದೇಗಿನಾಳ, ಮಲ್ಲಿಕಾರ್ಜುನ ಹಡಪದ ಇತರರು ಇದ್ದರು.
ಶರಣು ಬಸ್ತಾಳ ವಚನ ಗೀತೆ ಪ್ರಸ್ತುತ ಪಡಿಸಿದರು. ವಿವೇಕಾನಂದ ಕಲ್ಯಾಣಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಮಹಾಂತೇಶ ಆದಿಗೊಂಡ ಸ್ವಾಗತಿಸಿದರು. ಮಹಾಂತೇಶ ಸಂಗಮ ನಿರೂಪಿಸಿದರು. ಸಂಗನಗೌಡ ಚಿಕ್ಕೊಂಡ ವಂದಿಸಿದರು.
ಲಿಂಗಾಯತ ಧರ್ಮಕ್ಕೆ ಜಯವಾಗಲಿ.ಬಸವ ತತ್ವ ಬೆಳಗಲಿ.ಈ ಅಭಿಯಾನ ಯಶಸ್ವಿಯಾಗಲಿ.ಹಿಂದೂ ಧರ್ಯದ ಜಾಡ್ಯದಿಂದ ಜನರೆಲ್ಲಾ ಹೊರಬರಲಿ