ಹುನಗುಂದ
‘ಯೋಗವು ಮನಸ್ಸು ಮತ್ತು ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ’ ಎಂದು ಇಳಕಲ್ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಲಿಂಗ ಪೂಜೆ ಯೋಗದ ಒಂದು ಭಾಗವಾಗಿದೆ. ಯೋಗ ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ನಿತ್ಯ ಯೋಗ ಮಾಡುವುದರಿಂದ ಚೈತನ್ಯದಿಂದಿರಲು ಸಾಧ್ಯ’ ಎಂದರು.
ವಿಜಯ ಮಹಾಂತೇಶ ವಿದ್ಯಾ ವರ್ಧಕ ಸಂಘದ ಗೌರವ ಕಾರ್ಯದರ್ಶಿ ಮಹಾಂತೇಶ ಕಡಪಟ್ಟಿ ಮಾತನಾಡಿ, ‘ಯೋಗ ಮಾಡುವುದರಿಂದ ಹಲವು ರೋಗಗಳು ಗುಣಮುಖ ಆಗುತ್ತವೆ. ಪ್ರತಿಯೊಬ್ಬರೂ ಜೀವನದಲ್ಲಿ ಯೋಗ ರೂಡಿಸಿಕೊಳ್ಳಿ. ಯೋಗದಿಂದ ಉತ್ತಮ ಆರೋಗ್ಯ ಹೊಂದಬಹುದು’ ಎಂದು ತಿಳಿಸಿದರು.
ಶಿರೂರು ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ ಮಾತನಾಡಿದರು. ಐಟಿಬಿಪಿ ಕಮಾಂಡರ್ ಮಹಾಂತೇಶ ಗೌಡರ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾಡಿಸಿದರು.
ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ನಿರ್ದೇಶಕರು, ಪ್ರಾಥಮಿಕ, ಪ್ರೌಢ ಶಾಲಾ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.