ಬಳ್ಳಾರಿ
ಲಿಂಗಾಯತ ಮಠಾಧೀಶರ ಒಕ್ಕೊಟದ ನೇತೃತ್ವದಲ್ಲಿ ಬಸವ ಸಂಸ್ಕೃತಿ ಅಭಿಯಾನವನ್ನು ಕೈಗೊಂಡಿರುವುದು ಸ್ವಾಗತಾರ್ಹ ಸಂಗತಿ. ಈ ಬೃಹತ್ ಕಾರ್ಯಕ್ರಮಕ್ಕೆ ಭರದಿಂದ ಸಾಗುತ್ತಿರುವ ಸಿದ್ಧತೆಯ ನಡುವೆ ಮಹಿಳೆಯರಿಗೆ ಪೂರಕವಾದ ಚಟುವಟಿಕೆಗಳನ್ನು ಮುನ್ನೆಲೆಗೆ ತರುವ ಅಗತ್ಯವಿದೆ.
ಬಸವ ಪ್ರಜ್ಞೆಯನ್ನು ವಿಶೇಷವಾಗಿ ಮಹಿಳೆಯರಿಗೆ ಮನದಟ್ಟು ಮಾಡುವ ಕ್ರಿಯಾಶೀಲತೆಯನ್ನು ಪ್ರತಿಯೊಬ್ಬರೂ ಕೈಗೊಳ್ಳುವ ತುರ್ತು ಇಂದು ಅಗತ್ಯವಾಗಿದೆ. ಧರ್ಮದ ಮೂಲಕ ಬಹುತ್ವ ನೆಲೆಯಲ್ಲಿ ಇಷ್ಟಲಿಂಗ ಏಕದೇವೋಪಾಸನೆಯಲ್ಲಿ ಬಹುತ್ವವಿದೆ ಎಂಬುದನ್ನು ತಂಡೋಪತಂಡವಾಗಿ ಸಾಬೀತು ಪಡಿಸಿದವರು ಹನ್ನೆರಡನೆಯ ಶತಮಾನದಲ್ಲಿ ಶಿವಶರಣರು.
ಇಷ್ಟಲಿಂಗ ಅವರವರ ಭಾವಕ್ಕೆ ಅವರವರ ಭಕ್ತಿಗೆ ಮೆಚ್ಚಿದ ದೈವ. ಇಷ್ಟಲಿಂಗವು ಅವರ ಇಷ್ಟದಲಿಂಗ ದೇವರು ದೇಹದಲ್ಲಿ ಜೀವ ಹೇಗೋ ಹಾಗೆ ವ್ಯಕ್ತಿಗೆ ಇಷ್ಟಲಿಂಗ ಜೀವ ಅಥವಾ ಆತ್ಮ. ವಚನಕಾರರು ವಚನ ರಚನೆಯನ್ನು ತಮ್ಮ ಇಷ್ಟಲಿಂಗದ ಅಂಕಿತವನ್ನೇ ಕರೆದಿರುವುದು. ಏಕತೆಯಲ್ಲಿ ಬಹುತ್ವದ ಬಾಂಧವ್ಯವನ್ನು ಸ್ಥಾಪಿಸಿದ್ದರು. ಎಲ್ಲರಿಗೂ ಇಷ್ಟಲಿಂಗವೇ ಪ್ರೇರಣೆ, ಅನುಸರಣೆ, ಅತ್ಮಾವಲೋಕನ, ಆಧ್ಯಾತ್ಮಿಕತೆಯ ಅನಂತತೆ.
ಏಳನೂರ ಎಪ್ಪತ್ತು ಅಮರಗಣಂಗಳ ಬಗ್ಗೆ ಮಹಿಳೆಯರಿಗೆ ಪರಿಚಯ ಮಾಡಿಕೊಡುವುದು. ಶಿವಶರಣೆ ಮಹಿಳೆಯರ ಜೀವನದ ಸಾಧನೆಯನ್ನು ರಂಗಭೂಮಿಯ ಮೂಲಕ ಅನಾವರಣಗೊಳಿಸಬೇಕು.
೧) ಬಸವ ಪ್ರಜ್ಞೆಯ ಅಭಿಯಾನ ಕೈಗೊಂಡಿರುವುದು ಸ್ವಾಗತ. ಮಹಿಳೆಯರು ವಚನ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿ ಪ್ರತಿಯೊಬ್ಬರೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.
೨) ಧರ್ಮದ ಬಹುತ್ವದ ನೆಲೆಯಲ್ಲಿ ಏಕದೇವೋಪಾಸನೆಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಬೇಕು.
೩) ಇಷ್ಟಲಿಂಗದ ದೀಕ್ಷೆಯನ್ನು ಆಸಕ್ತರಿಗೆ ಪಡೆಯಲು ಅವಕಾಶ ನೀಡಬೇಕು.
೪) ಎಲ್ಲರಿಗೂ ೭೭೦ ಅಮರಗಣಂಗಳ ಬಗ್ಗೆ ಪರಿಚಯ ಮಾಡಿಕೊಡಬೇಕು.
೫) ವಚನ ಸಾಹಿತ್ಯದ ಮೂಲಕ ರಂಗ ಚಳವಳಿಯನ್ನು ಕೈಗೊಂಡು ಹಳ್ಳಿ ಹಳ್ಳಿಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಬೀದಿ ನಾಟಕಗಳನ್ನು ಪ್ರದರ್ಶನ ಮಾಡಬೇಕು.
೬) ವಚನಕಾರರ ಜೀವನಾಧಾರಿತ ನಾಟಕಗಳನ್ನು ಮಹಿಳೆಯರು ಮತ್ತು ಮಕ್ಕಳು ರಂಗ ಪ್ರದರ್ಶನ ಮಾಡಬೇಕು.
೭) ಎಲ್ಲಾ ಶಿವಶರಣರ ಜೀವನ ಚರಿತ್ರೆಯನ್ನು ಕುರಿತು ನಾಟಕ ರಚಿಸಬೇಕು.
೮) ಶರಣ ಮತ್ತು ಶರಣರ ಚಿತ್ರವನ್ನು ಮಕ್ಕಳಿಗೆ ಚಿತ್ರಿಸುವ ಸ್ಪರ್ಧೆಯನ್ನು ಏರ್ಪಡಿಸುವುದು. ಮತ್ತು ಚಿತ್ರಗಳ ವೈವಿಧ್ಯಮಯ ಮಾದರಿಗಳನ್ನು ಪರಿಚಯಿಸುವುದು.
೯) ಶಿವಶರಣರ ಹೆಸರಿನೊಂದಿಗೆ ಪ್ರತಿವರ್ಷವೂ ಮಳೆಗಾಲದಲ್ಲಿ ಗಿಡ ಬಳ್ಳಿಗಳನ್ನು ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.
೧೦) ಶಿವಶರಣರ ಬಗ್ಗೆ ಜನಪದರು ಹಾಡಿರುವ ತ್ರಿಪದಿ ಗಳನ್ನು ಕಲಿಸಿ ಹಾಡಿಸುವುದು.
೧೧) ಹೊಸ ಹೊಸ ಸಂಗೀತ ಸಂಯೋಜನೆಗಳನ್ನು ಮಾಡಿಸಿ ಮಕ್ಕಳಿಗೆ ವಚನಗಳನ್ನು ಮತ್ತು ವಚನಕಾರರ ತ್ರಿಪದಿಗಳನ್ನು ಕಲಿಸುವುದು ಮತ್ತು ಹಾಡಿಸುವುದು.
೧೨) ಕೋಲಾಟ,ಡೊಳ್ಳು, ಕಂಸಾಳೆ, ತಾಳ ಜನಪದ ವಾದ್ಯಗಳೊಂದಿಗೆ ನೃತ್ಯಗಳನ್ನು ಕಲಿಸಿ ಪ್ರದರ್ಶಿಸುವುದು.
೧೩) ಪಂಚಚಾರ, ಷಟಸ್ಥಲಗಳನ್ನು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕಲಿಸುವುದು.
೧೪) ಹಲವಾರು ವಚನಕಾರರ ಸಾಲುಗಳೇ ಗಾದೆಗಳಾಗಿ ಪ್ರಚಲಿತದಲ್ಲಿ ಇವೆ. ಆ ಗಾದೆ ಮಾತುಗಳನ್ನು ಜೀವನ ಪಾಠವಾಗಿ ಕಲಿಸುವುದು.
೧೫) ಚಿತ್ರ ನೋಡಿ ಗಾದೆ ಹೇಳುವುದು. ಗಾದೆ ಸಂದರ್ಭಗಳನ್ನು ವಿವರಿಸುವುದು. ಅಪೂರ್ಣ ಗಾದೆ ಮಾತುಗಳನ್ನು ಪೂರ್ಣಗೊಳಿಸುವುದು. ಈ
ಎಲ್ಲಾ ಕಾರ್ಯಕ್ರಮಗಳನ್ನು ಮಕ್ಕಳಿಗೆ ಯುವಕರಿಗಾಗಿ ಹಮ್ಮಿಕೊಳ್ಳುವುದು.
೧೬) ಗ್ರಾಮ, ಹೋಬಳಿ, ತಾಲ್ಲೂಕು, ಜಿಲ್ಲೆಗಳಲ್ಲಿ ಪದಾಧಿಕಾರಿಗಳನ್ನು ನೇಮಿಸಿ ಆ ಮೂಲಕ ವಚನ ಸಾಹಿತ್ಯದ ಅಭಿಯಾನವನ್ನು ಸಾರ್ಥಕಗೊಳಿಸುವುದು.
೧೭) ಗುಡ್ಡಾಪುರ ದಾನಮ್ಮನು ಹನ್ನೆರಡನೆಯ ಶತಮಾನದಲ್ಲಿ ವಚನ ಸಾಹಿತ್ಯದ ಸಂರಕ್ಷಣೆ ಮತ್ತು ಪ್ರಸಾರ ಮಾಡಿ ಕಂಚಿ ರಾಜರಿಗೆ ಲಿಂಗ ದೀಕ್ಷೆ ಕೊಟ್ಟಿದ್ದಾಳೆ. ಇಂತಹ ಕಾರ್ಯ ಚಟುವಟಿಕೆಗಳನ್ನು ನಾವು ಮಹಿಳೆಯರಿಗೆ ಮತ್ತು ಮಕ್ಕಳಿಗೆ ತಿಳಿಸಬೇಕು.
೧೮) ಸೊಲ್ಲಾಪುರದ ಚಾಮಲಾದೇವಿ ವಚನ ಸಾಹಿತ್ಯ ಸಂರಕ್ಷಣೆ ಮತ್ತು ಹೋರಾಟದಲ್ಲಿ ಭಾಗವಹಿಸಿ ಪ್ರಾಣತ್ಯಾಗ ಮಾಡಿದ್ದಾಳೆ. ಇಂಥ ಮಹಿಳೆಯರ ತ್ಯಾಗವನ್ನು ಇಂದಿನ ಪೀಳಿಗೆಯವರಿಗೆ ಪರಿಚಯ ಮಾಡಿಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.
೧೯) ವಚನ ಸಾಹಿತ್ಯದ ಮರು ಚಿಂತನೆಯ ಓದುವಿಕೆಯನ್ನು ಕಾರ್ಯರೂಪಕ್ಕೆ ತರುವುದು.
೨೦) ಜನಪದ ವಾದ್ಯ ಪರಿಕರಗಳಾದ ತಾಳ, ತಂಬೂರಿ, ಚೌಡಿಕೆ, ಡಪ್ಪು, ಹಲಗೆ, ಬಣ್ಣದಕೋಲು, ಪಿಯಾನೊ, ದಿಲ್ ರುಬಾ, ಪಿಟೀಲು, ಕೊಳಲು, ಕಿನ್ನರಿ, ಕಂಸಾಳೆ ಮುಂತಾದ ವಾದ್ಯ ಪರಿಕರಗಳನ್ನು ಬಳಸಿಕೊಂಡು ಮಧುರವಾದ ಅಬ್ಬರವಿಲ್ಲದೆ, ವಚನ ಸಾಹಿತ್ಯವೂ ಕೇಳುವಂತೆ ಸಂಗೀತ ಸಂಯೋಜನೆ ಮಾಡುವುದು. ಮಕ್ಕಳಿಗೆ ಮಹಿಳೆಯರಿಗೆ ಕಲಿಸುವುದು ಮತ್ತು ಮಧುರವಾಗಿ ಹಾಡಿಸುವುದು.
೨೧) ವಚನ ಸಾಹಿತ್ಯ ಓದಿಸುತ್ತಲೇ ಆಧುನಿಕ ವಚನಗಳನ್ನು ಬರೆಯಲು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪ್ರೇರಣೆ ನೀಡುವುದು.
೨೨) ಎಲ್ಲಾ ವಚನ ಕಾರರ ಅನುಭಾವದ ಅರಿವಿನಿಂದ ಸರಳ ಜೀವನದ ಮಹತ್ವ ಸುಲಲಿತವಾಗಿ ಜೀವನ ನಡೆಸಲು ಮಹಿಳೆಯರಿಗೆ ಪ್ರಜ್ಞೆಯನ್ನು ಮೂಡಿಸುವುದು.
೨೩) ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯದ ನಂತರದಲ್ಲಿ ವಚನಕಾರರ ಬಗ್ಗೆ ಹರಿಹರ, ಚಾಮರಸ, ರಾಘವಾಂಕ, ಭೀಮಕವಿ, ಕೆರೆಯ ಪದ್ಮರಸ, ನೂರೊಂದು ವಿರಕ್ತರು ಮುಂತಾದ ಕವಿವರ್ಯರ ಸಾಹಿತ್ಯದ ಬಗ್ಗೆ ಉಪನ್ಯಾಸ, ಚಿಂತನೆ, ಸಂವಾದದ ಸಭಾ ಕಾರ್ಯಕ್ರಮಗಳನ್ನು ವಾರಕ್ಕೊಮ್ಮೆ ವಚನ ಸಾಹಿತ್ಯದ ತಜ್ಞರಿಂದ ಏರ್ಪಡಿಸುವುದು.
೨೪) ವಚನಕಾರರ ಕುರಿತು ಸಹೋದರ ಭಾಷೆಗಳಾದ ತೆಲುಗು ಮತ್ತು ಇನ್ನಿತರ ಭಾಷೆಯಲ್ಲಿ ವಚನಕಾರರ ಅಭಿವ್ಯಕ್ತಿಯನ್ನು ನಮ್ಮ ಮಹಿಳೆಯರು ಮತ್ತು ಮಕ್ಕಳಿಗೆ ತಿಳಿಸುವುದು.
೨೫) ಕನ್ನಡ ಸಾಹಿತ್ಯದಲ್ಲಿ ವಚನಕಾರರ ಬಗ್ಗೆ ಬರೆದಿರುವ ಎಲ್ಲಾ ಸಾಹಿತಿಗಳ ನಾಟಕಗಳನ್ನು ಪ್ರದರ್ಶನ ಮಾಡಿಸುವುದು.
೨೬) ಜನಪದರು ಕಂಡಂತೆ ವಚನ ಯುಗದ ಬಗ್ಗೆ ಮಾಹಿತಿಯನ್ನು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಮನಗಾಣಿಸುವುದು.
೨೭) ವಚನಕಾರರ ಹುಟ್ಟಿದ ಊರನ್ನು ಪರಿಚಯ ಮಾಡಿಸುವುದು. ಆ ಎಲ್ಲಾ ಊರುಗಳಿಗೆ ಪ್ರವಾಸವನ್ನು ಏರ್ಪಡಿಸಿದರೆ ದೇಶವನ್ನೂ ನೋಡು ಕೋಶವನ್ನು ಓದಿದಂತಾಗುತ್ತದೆ. ಎಲ್ಲಾ ಸ್ಥಳ ಪರಿಚಯ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಆಗುತ್ತದೆ.
೨೮) ಕಾಶಿಯ ರಾಜ ಮೋಳಿಗೆಯ ಮಾರಯ್ಯ ದಂಪತಿಗಳು ಮತ್ತು ಅಫ್ಘಾನಿಸ್ತಾನದ ಮರುಳ ಶಂಕರದೇವರು ಬಗ್ಗೆ ವಚನ ಚಳವಳಿಯ ಅಂದಿನ ಕಾಲಘಟ್ಟದ ಬಗ್ಗೆ ಮುಂದಿನ ಪೀಳಿಗೆಗೆ ಮಾಹಿತಿಯನ್ನು ಒದಗಿಸುವ ಹೊಣೆ ನಮ್ಮೆಲ್ಲರದಾಗಬೇಕಿದೆ.
೨೯) ಬಸವಣ್ಣನವರ ಬಾಲ್ಯ ಜೀವನ. ಅವರ ಅಧ್ಯಯನ ಶಿಸ್ತು ಸಂಯಮ ಮಕ್ಕಳಿಗೆ ಆದರ್ಶಗಳನ್ನು ಅಳವಡಿಸಿ ಕೊಳ್ಳಲು ಸಾಧ್ಯವಾಗುತ್ತದೆ.
೩೦) ಹನ್ನೆರಡನೆಯ ಶತಮಾನದಲ್ಲಿ ಅನಕ್ಷರಸ್ಥರು ಎಂಬ ಮಾತೇ ಇರಲಿಲ್ಲ. ಎಲ್ಲರಿಗೂ ಉಸುಕಿನಲ್ಲಿ ಅಕ್ಷರ ಕಲಿಸಿ ಉಸಿರಿರುವತನಕ ಜ್ಞಾನದಿಂದ ಆತ್ಮಸ್ಥೈರ್ಯ ನೀಡಿದ ಕ್ರಮ ನಮಗೆಲ್ಲ ಮಾದರಿ.
೩೧) ಬಸವಣ್ಣನವರ ಸಾಂಘಿಕ ಪ್ರಯತ್ನ ನಡೆಯಾಗಿ ಪ್ರತಿಯೊಂದು ಕುಟುಂಬದ ಸದಸ್ಯರು ಪ್ರತಿಯೊಬ್ಬರೂ ವಚನ ರಚನೆ ಮಾಡುತ್ತಲೇ ತಮ್ಮ ಕಾಯಕದ ಘನತೆ ಗೌರವಗಳ ಉತ್ತುಂಗ ಸ್ಥಿತಿಯಲ್ಲಿ ತಂದಿರುವುದು. ನಾವು ಕಾಯಕ ಘನತೆಯಲ್ಲಿ ಮುನ್ನ ಡೆಯಬೇಕು.
೩೨) ನೂರೊಂದು ವಿರಕ್ತರ ವಚನ ಸಾಹಿತ್ಯ ಪ್ರಚಾರವನ್ನು ನಾವೆಲ್ಲರೂ ಅನುಸರಿಸಬೇಕು.
೩೩) ಫ.ಗು.ಹಳಕಟ್ಟಿಯವರು ಬದುಕು ವಚನ ಸಾಹಿತ್ಯದ ಸಂಪಾದನೆ ಮಾಡಲು ಅವರು ಪಟ್ಟ ಪರಿಶ್ರಮದ ಬಗ್ಗೆ ಅರಿವು ಮೂಡಿಸುವ ಪ್ರಯತ್ನವಾಗಬೇಕು.
೩೪) ಬಸವಾದಿ ಶರಣರ ಜನ್ಮ ಸ್ಥಳವನ್ನು ಪ್ರವಾಸಿ ತಾಣಗಳಾಗಿಸಿ ಅಭಿವೃದ್ಧಿ ಪಡಿಸಬೇಕು.
೩೫) ವಚನಕಾರರ ನೆಲದಲ್ಲಿ ವಚನಗಳ ವಾಚನಾಲಯ ಮತ್ತು ವಚನ ಸಂಗೀತ ಶಾಲೆಗಳನ್ನು ಆರಂಭಿಸಬೇಕು.
೩೬) ವಚನ ಧರ್ಮ
ಕನ್ನಡದ ಧರ್ಮ
ಕಾಯಕದ ಧರ್ಮ
ದಾಸೋಹ ಧರ್ಮ
ಸರ್ವ ಸಮಾನತೆಯ ಧರ್ಮ
ಮಾನವೀಯ ಧರ್ಮ
ಬಸವ ಧರ್ಮವೇ ಎಲ್ಲರ ಬದುಕಾಗಬೇಕು.
೩೭) ಅಕ್ಷರ ಕ್ರಾಂತಿ ಎಂಬ ಇಷ್ಟಲಿಂಗ ಸಾಹಿತ್ಯ ಮನೆ ಮನೆಗಳಲ್ಲಿ ಜೀವನ ಹಾಡಾಗಬೇಕು.
೩೮) ಜನಪದ ವಾದ್ಯ ಪರಿಕರಗಳಾದ ಡೊಳ್ಳು, ಕೋಲಾಟ, ಕಂಸಾಳೆ, ಡಪ್ಪು, ತಮಟೆ, ಚೌಡಿಕೆ, ತಾಳ, ತಂಬೂರಿ, ಶಹನಾಯಿ, ದಿಲ್ ರುಬಾ, ಪಿಯಾನೋ, ತಬಲ, ಕಿನ್ನರಿ, ಪಿಟೀಲು, ನಗಾರಿ, ಜಗ್ಗಲಗಿ ಮುಂತಾದ ವಾದ್ಯ ಮೇಳದಿಂದ ಮಧುರವಾದ ವಚನ ಸಂಗೀತ ಮಾರ್ಧನಿಗೊಳ್ಳಬೇಕು. ಅಬ್ಬರವಿಲ್ಲದೆ ಸಾಹಿತ್ಯ ಕೇಳಿ ಅನುಭವಿಸುವ ಸಂಗೀತ ಪ್ರಸಾರ ಮಾಡಬೇಕು.
೩೯) ವಚನ ಸಾಹಿತ್ಯವೇ ನಮ್ಮ ಬದುಕಿನ ಆಧಾರವಾಗಿರಬೇಕು.
ಈ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಒಳಗೊಂಡಂತೆ ಮಹಿಳೆಯರು ಮತ್ತು ಮಕ್ಕಳಿಗೆ ಸರಳತೆಯ ಜೀವನ ವಿಧಾನ ಪ್ರಾಯೋಗಿಕವಾಗಿರಬೇಕು. ನಿತ್ಯ ನಿರಂತರವಾಗಿ ಜನತೆಯ ಜೀವನ ಶೈಲಿಯ ಕಲೆಯನ್ನು ಮಾದರಿಯಾಗಿಸಬೇಕು.