ಇಳಕಲ್
ಮನರಂಜನೆಯೊಂದಿಗೆ ಮನಸ್ಸನ್ನು ಪ್ರಭಾವಿಸುವ ರಂಗಭೂಮಿಯು ಬದುಕಿನ ಕನ್ನಡಿಯಾಗಿದೆ. ಕಲೆಯ ಹಲವು ಸಾಧ್ಯತೆಗಳು ಇಲ್ಲಿ ಅನಾವರಣಗೊಳ್ಳುತ್ತವೆ ಎಂದು ಗುರುಮಹಾಂತ ಶ್ರೀಗಳು ಹೇಳಿದರು.
ನಗರದ ಸುವರ್ಣ ರಂಗಮಂದಿರದಲ್ಲಿ ಬೀದಿ ನಾಟಕ ಅಕಾಡೆಮಿ, ರಂಗ ಪರಿಮಳ ಹಾಗೂ ಸ್ನೇಹರಂಗದ ಸಹಯೋಗದಲ್ಲಿ ರಂಗಕರ್ಮಿ ಸಿ.ಜಿ. ಕೃಷ್ಣಸ್ವಾಮಿ (ಸಿಜಿಕೆ) ಸ್ಮರಣೆಯ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮೊಬೈಲ್, ಟಿವಿ ಹಾಗೂ ಸಿನಿಮಾದಿಂದಾಗಿ ರಂಗಭೂಮಿಯ ವೈಭವ ಸ್ವಲ್ಪ ಕಡಿಮೆಯಾಗಿದೆ. ಜೀವಂತ ಹಾಗೂ ವಾಸ್ತವವನ್ನು ಮಾತ್ರ ತೋರಿಸುವ ರಂಗಭೂಮಿಯಲ್ಲಿ ನೈಜ ಕಲಾವಂತಿಕೆ ಇರುತ್ತದೆ. ರಂಗಭೂಮಿ ಹಿನ್ನಲೆಯ ಸಿನೆಮಾ ನಟರು ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ಪ್ರೇಕ್ಷಕರು ನಾಟಕ ನೋಡುವ ಮೂಲಕ ಕಲಾವಿದರನ್ನು ಪ್ರೋತ್ಸಾಯಿಸಬೇಕು ಎಂದು ಹೇಳಿದರು.
ಎಲೆ ಮರೆಯ ಕಾಯಿಯಂತಿದ್ದು ರಂಗಭೂಮಿಯಲ್ಲಿ ಸಾಧನೆ ಮಾಡಿದ ಹಿರಿಯ ಕಲಾವಿದೆ ಸುಗುಣಾತಾಯಿ ಸಪ್ಪಂಡಿ, ಬಿಬಿಜಾನ್ ಕಂದಗಲ್ಲ ಹಾಗೂ ತಬಲಾ ವಾದಕ ಅಮರೇಶ ಹಡಪದ ಅವರಿಗೆ ಸಿಜೆಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು..
ಮುಖ್ಯ ಅತಿಥಿಯಾಗಿ ಸ್ನೇಹರಂಗದ ಅಧ್ಯಕ್ಷ ಬಸವರಾಜ ಮಠದ, ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಬಲವಂತಗೌಡ ಪಾಟೀಲ ಉಪಸ್ಥಿತರಿದ್ದರು.
ಸಿಜಿಕೆ ಬೀದಿ ನಾಟಕ ಅಕಾಡೆಮಿಯ ಬಾಗಲಕೋಟೆ ಜಿಲ್ಲಾ ಸಂಚಾಲಕ, ರಂಗಕರ್ಮಿ ಮಹಾಂತೇಶ ಗಜೇಂದ್ರಗಡ ಪ್ರಾಸ್ತಾವಿಕವಾಗಿ ಮಾತನಾಡಿದರು.