ಬಾಗಲಕೋಟೆ
ಸಕಲ ಜೀವಾತ್ಮದ ಲೇಸನ್ನೇ ಬಯಸಿ ಉದಯಸಿದ್ದು ಶರಣ ಧರ್ಮ. ಉನ್ನತ ತತ್ವ, ಸಿದ್ಧಾಂತ, ಆದರ್ಶಗಳ ಸಂಗಮ. ಅರಿವು, ಆಚಾರ, ಅನುಭಾವ, ಕಾಯಕ, ದಾಸೋಹ ಇದರ ಪ್ರಾಣಜೀವಾಳ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಬಾಗಲಕೋಟೆ ನವನಗರದ ಚಂದ್ರದೇವಿ ಭೋವಿ-ವಡ್ಡರ್ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಗುರುವಾರ ಹಮ್ಮಿಕೊಂಡ ಚಂದ್ರಾದೇವಿ, ದುರ್ಗಾದೇವಿ, ವಿನಾಯಕ, ಹಾಗೂ ಮಾರುತಿ ದೇವಾಲಯಗಳ ಜಾತ್ರಾ ಮಹೋತ್ಸವದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಆಹಾರವನ್ನು ಯಾರು ನಿರ್ದಿಷ್ಟ ಸಮಯ, ನಿರ್ದಿಷ್ಟ ಪ್ರಮಾಣದಲ್ಲಿ ಸೇವಿಸುವರೋ ಅವರ ದೇಹ ಮತ್ತು ಮನಸ್ಸು ಆರೋಗ್ಯದಿಂದ ಇರುವವು. ದೇಶದಲ್ಲಿ ಯೋಗ್ಯ ಆಹಾರದ ಕೊರತೆ ತುಂಬಾ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೆಲವರಿಗೆ ಉಣ್ಣುವುದೊಂದೇ ಜೀವನದ ಗುರಿಯಾಗಿದೆ. ತಿನ್ನುವುದಕ್ಕಾಗಿ ಬದುಕದೇ, ಬದುಕುವುದಕ್ಕಾಗಿ ಉಣ್ಣಬೇಕಾಗಿದೆ. ಶರಣರ ಪ್ರಸಾದ ತತ್ವ, ಧಾರ್ಮಿಕ, ನೈತಿಕ, ವೈಜ್ಞಾನಿಕ ಹಾಗೂ ಆರ್ಥಿಕ ನೆಲೆಗಟ್ಟಿನ ಮೇಲೆ ನಿಂತಿದೆ. ಇದರಲ್ಲಿ ಆರೋಗ್ಯ ರಕ್ಷಣೆ ಇದೆ. ಅಧ್ಯಾತ್ಮದ ಸಾಧನೆಯಿದೆ. ರಾಷ್ಟ್ರದ, ಸಮಾಜದ ಉನ್ನತಿ ಅಡಗಿದೆ. ಇದನ್ನರಿತು ಪ್ರಸಾದ ತತ್ವವನ್ನು ಎಲ್ಲರೂ ಪಾಲಿಸುವಂತಾಗಬೇಕು ಎಂದು ಆಶಿಸಿದರು.
ರಷ್ಯಾ, ಜಪಾನ್ ಮೊದಲಾದ ರಾಷ್ಟ್ರಗಳಲ್ಲಿ ಜನರು ಕ್ರಿಯಾಶೀಲರಾಗಿ ಕಾಯಕಗಳಲ್ಲಿ ನಿರತರಾಗಿರುವುದರಿಂದ ಆ ರಾಷ್ಟ್ರಗಳು ಆರ್ಥಿಕವಾಗಿ ಸ್ವಾವಲಂಬಿಯಾಗಿ ಕೈಗಾರಿಕೆಯಲ್ಲಿ, ಕೃಷಿ ಉದ್ಯಮ ಹಾಗೂ ತಂತ್ರಜ್ಞಾನದಲ್ಲಿ ಅಗ್ರಸ್ಥಾನದಲ್ಲಿವೆ. ನಮ್ಮ ರಾಷ್ಟ್ರದಲ್ಲಿ ನೈಸರ್ಗಿಕ ಸಂಪನ್ಮೂಲಗಳಿಗೆ ಕೊರತೆ ಇರದಿದ್ದರೂ, ಪರರಾಷ್ಟ್ರಗಳ ಬಳಿ ಸಾಲಕ್ಕಾಗಿ ಕೈಯೊಡ್ಡುವ ಸ್ಥಿತಿಯಲ್ಲಿದ್ದೇವೆ ಎಂದರು.
ಮಸ್ಕಿಯ ಇರಕಲ್ ಮಠದ ಬಸವ ಪ್ರಸಾದ ಶ್ರೀಗಳು ಮಾತನಾಡಿ, ಸೇವಿಸುವ ಅನ್ನವಷ್ಟೇ ಪ್ರಸಾದವಲ್ಲ, ಪಡೆವ ಜ್ಞಾನವೂ ಪ್ರಸಾದವೇ. ಅದಕ್ಕಾಗಿಯೇ ಪ್ರಸಾದವನ್ನು ಕ್ರಿಯಾ ಪ್ರಸಾದ, ಜ್ಞಾನ ಪ್ರಸಾದ ಹಾಗೂ ಭಾವ ಪ್ರಸಾದವೆಂದು ವಿಂಗಡಿಸಲಾಗಿದೆ. ಅನ್ನಪ್ರಸಾದವು ತನುವಿನ ಹಸಿವುನ್ನು ನೀಗಿಸಿ ಚಿತ್ತವೃತ್ತಿಗಳನ್ನು ತೃಪ್ತಿಗೊಳಿಸದರೆ, ಜ್ಞಾನ ಪ್ರಸಾದವು ಭ್ರಮೆ ಹಾಗೂ ಅಜ್ಞಾನಗಳನ್ನು ಹೋಗಲಾಡಿಸಿ ಬುದ್ದಿ ಪ್ರಖರಗೊಳಿಸುತ್ತದೆ, ಎಂದು ಹೇಳಿದರು.
ಪಡೆದ ಜ್ಞಾನವನ್ನು ಲೋಕಕಲ್ಯಾಣಕ್ಕಾಗಿ ವಿನಿಯೋಗಿಸದಿದ್ದರೆ, ಕೊನೆಗೆ ತನ್ನನ್ನೇ ಆಹುತಿ ತೆಗೆದುಕೊಳ್ಳುತ್ತದೆ. ಪರಮಾತ್ಮನು ಕೊಟ್ಟ ಈ ಶರೀರವು ಆತನ ಸೃಷ್ಟಿಯ ಚರಾಚರ ಜೀವಿಗಳ ಉಪಕಾರಕ್ಕಾಗಿ ಅರ್ಪಿತವಾಗಬೇಕು. ಆಗ ನಮ್ಮ ಈ ಶರೀರವು ಕಾಯ ಪ್ರಸಾದ ಎನಿಸುತ್ತದೆ ಎಂದರು.
ಸಂಘದ ಅಧ್ಯಕ್ಷ ಯಲ್ಲಪ್ಪ ಪಾತ್ರೋಟಿ, ಸಿದ್ಧರಾಮಪ್ಪ ಪಾತ್ರೋಟ, ರಾಮಚಂದ್ರ ಮುಧೋಳ, ರಾಜು ಮಾಡಮಗೇರಿ, ಪ್ರಕಾಶ ವಡ್ಡರ, ಮಲ್ಲಿಕಾರ್ಜುನ ಪಾತ್ರೋಟ ಮತ್ತಿತರರು ಇದ್ದರು.