ಕಲಬುರಗಿ
ವಿಜಯನಗರ ಸಾಮ್ರಾಜ್ಯದ ಕುರಿತಾದ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯುವ ಅವಶ್ಯಕತೆ ಇದೆ. ಲಕ್ಕಣ್ಣ ದಂಡೇಶ ವಿಜಯನಗರ ಅರಸರ ಸಂಗಮ ವಂಶದ ಮಹಾಮಂತ್ರಿಯಾಗಿದ್ದ. ಅವನು ಶಿವತತ್ವ ಚಿಂತಾಮಣಿ ಕೃತಿಯನ್ನು ರಚಿಸಿದನು. ಬಸವಣ್ಣನವರ ಕುರಿತಾಗಿ ತುಂಬಾ ಮಹತ್ವದ ಕೃತಿ ಇದಾಗಿದೆ, ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು ರವಿವಾರ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ. ಬಿ. ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಪಿ.ಎಚ್ಡಿ ಪದವಿ ಪಡೆದ ಆರು ವಿದ್ಯಾರ್ಥಿಗಳಿಗಾಗಿ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಉಪಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಪ್ರೌಢದೇವರಾಯ ಶ್ರೇಷ್ಠ ಅರಸನಾಗಿದ್ದರೂ ಕೂಡ ಕೃಷ್ಣದೇವರಾಯ ಮಹತ್ವ ಪಡೆದಷ್ಟು ಪ್ರೌಢದೇವರಾಯನಿಗೆ ಮಹತ್ವ ದೊರಕದಿರುವುದು ವಿಷಾದನೀಯ.
ಕನ್ನಡಕ್ಕಾಗಿ ಕನ್ನಡಿಗರಿಗಾಗಿ ಪ್ರೌಢದೇವರಾಯ ತನು-ಮನ ಧನದಿಂದ ಶ್ರಮಿಸಿದನು. ಬಸವಾದಿ ಶರಣರ ವಚನಗಳನ್ನು ಪ್ರೌಢದೇವರಾಯನ ಕಾಲದಲ್ಲಿ ಪುನರುಜ್ಜೀವನಗೊಳಿಸಿದರು. ಪ್ರೌಢದೇವರಾಯ ನಾಟಕಗಳನ್ನು ಬರೆದಿದ್ದಾನೆ ಅವನು ಸಾಹಿತಿಯಾಗಿದ್ದನು.
ಪ್ರೌಢದೇವರಾಯನ ಕೊಲೆಗೆ ಒಳಸಂಚು ನಡೆದಾಗ ಅದನ್ನು ವಿಫಲಗೊಳಿಸಿ ಅರಸನ ಪ್ರಾಣ ಉಳಿಸಿದ್ದು ಲಕ್ಕಣ್ಣ ದಂಡೇಶ. ಲಕ್ಕಣ್ಣ ದಂಡೇಶ ಒಬ್ಬ ಸಾಹಿತಿ ಮತ್ತು ರಾಜಕೀಯ ಚತುರನಾಗಿದ್ದ. ಕರ್ನಾಟಕ ತಮಿಳುನಾಡು ಸೇರಿ ಒಟ್ಟು ೫೦ ಶಾಸನಗಳು ಲಕ್ಕಣ್ಣ ದಂಡೇಶನನ್ನು ವರ್ಣಿಸಿವೆ.
ಬಸವಣ್ಣನವರ ಹುಟ್ಟಿನ ಕಾಲ ನಿರ್ಣಯದ ಕುರಿತು ಶಿವತತ್ವ ಚಿಂತಾಮಣಿಯಲ್ಲಿ ಹೇಳಲಾಗಿದೆ. ಬಸವಣ್ಣನವರು ಬಾಲ್ಯದಲ್ಲಿ ಅಜ್ಜಿಯ ಆಶ್ರಯದಲ್ಲಿದ್ದರೂ ಅಕ್ಕನಾಗಾಂಬಿಕೆ ಬಸವಣ್ಣನನ್ನು ಅತ್ಯಂತ ಪ್ರೀತಿಯಿಂದ ಆರೈಕೆ ಮಾಡುತ್ತಿದ್ದಳು. ಬಸವಣ್ಣನವರು ಬಾಲ್ಯದಲ್ಲಿಯೇ ಸಕಲ ವಿದ್ಯಾಪಾರಂಗತರಾದರು ಎಂದು ಲಕ್ಕಣ್ಣ ದಂಡೇಶ ಚಿತ್ರಿಸಿದ್ದಾನೆ ಎಂದು ಡಾ. ಪರಮಶಿವಮೂರ್ತಿ ತಿಳಿಸಿದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಕೇಂದ್ರ ಬಸವ ಸಮಿತಿಯ ಅಧ್ಯಕ್ಷರಾದ ಡಾ. ಅರವಿಂದ ಜತ್ತಿ ಅವರು ಮಾತನಾಡಿ, ಇಂದಿನ ಪ್ರಸ್ತುತ ಜಗತ್ತಿನ ಸಮಸ್ಯೆಗಳಿಗೆ ಶರಣರ ವಚನ ಸಂದೇಶಗಳಲ್ಲಿ ಪರಿಹಾರಗಳಿವೆ. ಡಾ. ಬಿ. ಡಿ. ಜತ್ತಿಯವರು ಕನ್ನಡದ ಏಕೈಕ ರಾಷ್ಟ್ರಪತಿಗಳಾಗಿದ್ದಾರೆ. ನಮಗೆ ಇಂಗ್ಲೀಷ್ ಎಷ್ಟೇ ಚೆನ್ನಾಗಿ ಬಂದರು ಕೂಡಾ ನಾವು ಅಪ್ಪಟ ಕನ್ನಡ ಅಭಿಮಾನಿಗಳಾಗಿರಬೇಕು ಎಂದರು. ಬದುಕಿನಲ್ಲಿ ನೈಜ ಆಚರಣೆಗಳು ರೂಡಿಸಿಕೊಳ್ಳಬೇಕು ಕೇವಲ ಒಂದು ಪಿ. ಎಚ್ಡಿಗಾಗಿ ವಿದ್ಯಾರ್ಥಿಗಳು ಸೀಮಿತವಾಗಬಾರದು, ನಿರಂತರ ಸಂಶೋದನೆ ಮಾಡಬೇಕು.
ಸುಮಾರು ೪೫ಕ್ಕೂ ಹೆಚ್ಚು ಭಾಷೆಗಳಿಗೆ ವಚನಗಳನ್ನು ವಸವ ಸಮಿತಿ ಅನುವಾದಿಸಿದೆ. ಸುಮಾರು ೧೦ ವಿಶ್ವವಿದ್ಯಾಲಯಗಳ ಜೊತೆಗೆ ಕೈಜೋಡಿಸಿ ಬಸವ ಸಮಿತಿ ಸಂಶೋಧನೆಯ ಕೆಲಸ ಮಾಡುತ್ತಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ. ಬಿ. ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ. ವೀರಣ್ಣ ದಂಡೆ ಅವರು, ಧಾರ್ಮಿಕ ಸಂಸ್ಥೆಗಳಾಗಿ ಉಳಿದರೆ ಸಾಲದು ಅವು ಸಂಶೋಧನಾತ್ಮಕವಾಗಿ ಬೆಳೆಯಬೇಕು ಎಂದರು.
ಬಸವ ಸಮಿತಿಯಿಂದ ಡಾ. ಬಿ. ಡಿ. ಜತ್ತಿ ವ್ಯಕ್ತಿ ಸಂಶೋಧನಾ ಪ್ರಶಸ್ತಿ ವೈರಾಗ್ಯ ನಿಧಿ ಅಕ್ಕ ಪ್ರಶಸ್ತಿ, ಸಂಗೀತ ವಿಭೂಷಣ ಪ್ರಶಸ್ತಿಗಳನ್ನು ಕೊಡಲಾಗುತ್ತಿದೆ. ಡಾ. ಬಿ. ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಿಂದ ಆರು ವಿದ್ಯಾರ್ಥಿಗಳು ಪಿ.ಎಚ್ಡಿ. ಪದವಿ ಪಡೆದಿದ್ದಾರೆ, ಇದು ಹೆಮ್ಮೆಯ ಸಂಗತಿ ಎಂದರು.
ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ, ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ದಾಮಣಿ ಉಪಸ್ಥಿತರಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.