ಗದಗ
ಇದೇ ಅಗಸ್ಟ್ 24ರಂದು ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯುವ ಜಿಲ್ಲಾಮಟ್ಟದ ದ್ವಿತೀಯ ಕದಳಿ ಮಹಿಳಾ ವೇದಿಕೆಯ ಸಮ್ಮೇಳನಕ್ಕೆ ಗದುಗಿನ ಶರಣ ಸಾಹಿತಿ ಗಿರಿಜಕ್ಕ ಧರ್ಮರೆಡ್ಡಿ ಅವರನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಪರಿಷತ್ತಿನ ಗೌರವಾಧ್ಯಕ್ಷರಾದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಆಯ್ಕೆ ಮಾಡಲಾಗಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷೆ ಸುಧಾ ಹುಚ್ಚಣ್ಣವರ ತಿಳಿಸಿದ್ದಾರೆ.
ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯ ಪರವಾಗಿ ಪದಾಧಿಕಾರಿಗಳು ಗಿರಿಜಕ್ಕನವರ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಅಧಿಕೃತವಾಗಿ ಆಮಂತ್ರಣ ನೀಡಿ, ಅವರನ್ನು ಗೌರವಿಸಲಾಯಿತು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ.ಎ. ಬಳಿಗೇರ ಅವರು ಈ ಸಂದರ್ಭದಲ್ಲಿ ಮಾತನಾಡಿ, ಗಿರಿಜಕ್ಕನವರು ತಮ್ಮ ಹೃದಯದ ತುಂಬಾ ಶರಣರ ವಿಚಾರಗಳನ್ನು ತುಂಬಿಕೊಂಡವರು. ಶರಣತತ್ವ ಚಿಂತನೆ, ಅಧ್ಯಯನ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ತತ್ವಗಳನ್ನು ನಾಡಿನಲ್ಲಿ ಅಷ್ಟೇ ಅಲ್ಲದೆ ಪಕ್ಕದ ಆಂಧ್ರದಲ್ಲೂ ತಮ್ಮ ಪ್ರವಚನಗಳ ಮೂಲಕ ಪ್ರಸಾರ ಮಾಡಿದ್ದಾರೆ . “ಶರಣರು ಕಂಡ ಅನಾದಿ ಬಸವಣ್ಣ”, “ವಚನ ಸಂಕಲನ”, “ವಚನ ವ್ಯಾಖ್ಯಾನ” ಮತ್ತು ವಚನಾಧಾರಿತ ಲೇಖನಗಳನ್ನೊಳಗೊಂಡ “ಹೊಲಬು”, “ಕುರುಡ ಕಿವುಡ ಮೂಗರು ಯಾರು”, “ಓದಿನೊಳಗಣ ಓದು ಎಂಬ ಅಪರೂಪದ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಇಂತಹ ಗಿರಿಜಕ್ಕ ಧರ್ಮರೆಡ್ಡಿ ಅವರು ನಮ್ಮ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆ ಆಗಿರುವುದು ಜಿಲ್ಲೆಯ ಶರಣ ಸಾಹಿತಿಗಳಿಗೆ ಸಂತಸವನ್ನುಂಟು ಮಾಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶರಣೆ ರತ್ನಕ್ಕ ಪಾಟೀಲ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಬೂದಪ್ಪ ಅಂಗಡಿ, ಗದಗ ನಗರ ಘಟಕದ ಅಧ್ಯಕ್ಷ ಪ್ರಕಾಶ ಅಸುಂಡಿ, ತಾಲೂಕ ಕದಳಿ ವೇದಿಕೆಯ ಅಧ್ಯಕ್ಷೆ ಸುಲೋಚನ ಐಹೊಳೆ, ಎನ್.ಎಚ್. ಸಕ್ಕರಗೌಡ್ರ, ಎಸ್. ಎಂ. ಮುಗದ, ಅಶ್ವಥರೆಡ್ಡಿ, ಕದಳಿ ವೇದಿಕೆಯ ಅನ್ನಪೂರ್ಣ ವರವಿ, ಗೌರಕ್ಕ ಬಡಿಗಣ್ಣವರ, ರೇಖಾ ಯಾಪಲಪರ್ವಿ ಮುಂತಾದವರು ಇದ್ದರು.
