ಜಮಖಂಡಿ
ರಾಜ್ಯ ಸರ್ಕಾರ ಕೈಗೊಳ್ಳಲಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಎಂದು ಬರೆಯಲು ಅವಕಾಶ ಮಾಡಿಕೊಡಲು ಒತ್ತಾಯಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು.
ಬಸವ ಕೇಂದ್ರ, ಬಸವ ಸಮಿತಿ, ವಚನ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಇಲ್ಲಿನ ಉಪ ವಿಭಾಗಾಧಿಕಾರಿಗಳ ಕಚೇರಿಯ ಗ್ರೇಡ್-2 ತಹಶೀಲ್ದಾರ್ ಎನ್.ಜಿ. ಬಿರಡಿ ಅವರ ಮೂಲಕ ಮಂಗಳವಾರ ಸಲ್ಲಿಸಲಾದ ಮನವಿಯಲ್ಲಿ ಈ ಒತ್ತಾಯ ಮಾಡಲಾಗಿದೆ.
ಒಂದು ವೇಳೆ ಧರ್ಮದ ಕಾಲಂನಲ್ಲಿ ಲಿಂಗಾಯತ ಬರೆಯಲು ಅವಕಾಶ ಇರದಿದ್ದರೆ ಧರ್ಮದ ಕಾಲಂನಲ್ಲಿ, ‘ಯಾವುದು ಇಲ್ಲ’ ಎಂದು ನಮೂದಿಸಿ ಜಾತಿ ಕಾಲಂನಲ್ಲಿ ಲಿಂಗಾಯತ ಅಥವಾ ಲಿಂಗಾಯತದ ಜೊತೆಗೆ ಉಪಜಾತಿಯನ್ನು ನಮೂದಿಸಲಾದರೂ ಅವಕಾಶ ಕೊಡಬೇಕು.
ಯಾವುದೇ ಕಾರಣಕ್ಕೂ ಹಿಂದೂ ಅಥವಾ ಇತರೆ ಎಂದು ಧರ್ಮದ ಕಾಲಂನಲ್ಲಿ ಲಿಂಗಾಯತರನ್ನು ಸೇರಿಸಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗ ಗುರುತಿಸಿರುವ ಲಿಂಗಾಯತರ 78 ಜಾತಿ/ ಉಪಜಾತಿಗಳ ಪೈಕಿ 13 ಉಪಜಾತಿಗಳು ಪುನರಾವರ್ತನೆಗೊಂಡಿವೆ. ಆದರೆ, ಆಯೋಗ ಇನ್ನೂ 48 ಉಪಜಾತಿ ಗುರುತಿಸಿಲ್ಲ.
ಕೇಂದ್ರ ಸರ್ಕಾರದ 2006ರ ಜಾತಿ ಸಂಹಿತೆ ಪ್ರಕಾರ 32 ಉಪಜಾತಿಗಳು, ಡಾ. ಬಾಬಾಸಾಹೇಬ ಅಂಬೇಡ್ಕರ್ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಪ್ರಕಾರ 8 ಉಪಜಾತಿಗಳು ಹಾಗೂ ಇತರ ಮಾಹಿತಿ ಪ್ರಕಾರ 23 ಉಪಜಾತಿಗಳು ಒಟ್ಟು ಸೇರಿ ಲಿಂಗಾಯತರ 111 ಉಪಜಾತಿಗಳನ್ನು ಗುರುತಿಸಿಲ್ಲ. ಆಯೋಗ ಗುರುತಿಸಿರುವ 78 ಉಪಜಾತಿಗಳು ಹಾಗೂ ಗುರುತಿಸದ ಉಳಿದಿರುವ 111 ಉಪಜಾತಿಗಳು ಸೇರಿ ಲಿಂಗಾಯತರ ಒಟ್ಟು 189 ಜಾತಿ/ಉಪಜಾತಿಗಳನ್ನು ಪಟ್ಟಿ ಮಾಡಲು ಮನವಿ ಪತ್ರದಲ್ಲಿ ಆಯೋಗಕ್ಕೆ ಒತ್ತಾಯಿಸಲಾಗಿದೆ.
ವಚನ ಸಾಹಿತ್ಯ ಪರಿಷತ್ತಿನ ಎಂ.ಡಿ. ಸಂಖ, ಬಸವ ಕೇಂದ್ರದ ಮಹಾಂತೇಶ ಅಂಗಡಿ, ಅಣ್ಣಾಸಾಹೇಬ ಜಗದೇವ, ಬಸವಜ್ಯೋತಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ. ಬಸವರಾಜ ಕಡ್ಡಿ, ಪ್ರಾಚಾರ್ಯ ಡಾ. ಟಿ.ಪಿ. ಗಿರಡ್ಡಿ, ಉಪನ್ಯಾಸಕ ಮಹಾಂತೇಶ ಬಡಿಗೇರ ಹಾಗೂ ಕರವೇ ಬೀಳಗಿ ಮನವಿ ಸಲ್ಲಿಸುವ ಸಂದರ್ಭದಲ್ಲಿದ್ದರು.