ಗದಗ
ಸತ್ಯ ಮತ್ತು ಅಹಿಂಸಾ ಮಾರ್ಗ ಮಾನವನ ಬದುಕಿನಲ್ಲಿ ವಿಶಿಷ್ಟ ಮೌಲ್ಯಗಳು. ಇವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಡೆದರೆ ಅದೇ ಶ್ರೇಷ್ಠ ಧರ್ಮ ಮಾರ್ಗ. ಇವು ದುರ್ಗುಣಗಳನ್ನು ದೂರ ಮಾಡಿ ಸದ್ಗುಣಗಳು ಹೊರಹೊಮ್ಮುವಂತೆ ಮಾಡುತ್ತವೆ ಎಂದು ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2766ನೇ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಬಸವಣ್ಣ ಬ್ರಹ್ಮ ಪದವಿಯನೊಲ್ಲೆ, ವಿಷ್ಣುಪದವಿಯನೊಲ್ಲೆ ಎಂದರು. ಹಾಗೇ ಮಹಾತ್ಮ ಗಾಂಧೀಜಿ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರೂ ಯಾವ ಅಧಿಕಾರವನ್ನು ಬಯಸಲಿಲ್ಲ. ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ಈ ಇಬ್ಬರು ಮಹಾತ್ಮರು ಪರಿಪಾಲಿಸಿದರು.
ಅಹಿಂಸೆ ಮತ್ತು ಸಮಾನತೆಯ ಹಾದಿಯಲ್ಲಿ ಬಸವಣ್ಣ ಮತ್ತು ಗಾಂಧೀಜಿ ಸಾಗಿದರು. ದಯವೇ ಧರ್ಮದ ಮೂಲವಯ್ಯ ಇದರಲ್ಲಿ ಅಹಿಂಸೆ ಇದೆ. ಅಹಿಂಸೆಗೆ ತಲೆಬಾಗದ ವ್ಯಕ್ತಿಗಳೇ ಇಲ್ಲ. ಸಾಮಾಜಿಕವಾಗಿ, ಧಾರ್ಮಿಕವಾಗಿ ನಾವೆಲ್ಲ ಇಷ್ಟಲಿಂಗ ಧಾರಿಗಳಾಗಬೇಕು, ಜಂಗಮಸೇವೆ ಮಾಡಬೇಕು.
ಸತ್ಯ ಅಹಿಂಸೆಯಂತಹ ಮಾನವೀಯ ಮೌಲ್ಯಗಳನ್ನು ಬದುಕಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರ. ಸಮಾನತೆ ತರಲು ಇದು ಬೇಕು. ಸಮಾಜ ಶಾಂತಿಯಿಂದ ಇರಲು, ಸಮಾನತೆಯನ್ನು ಸಮಾಜದಲ್ಲಿ ತರುವುದು ಮುಖ್ಯ ಎಂದು ಹೇಳಿದರು.
ಮುಳಗುಂದ ಎಸ್.ಜೆ.ಜೆ.ಎಂ. ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರವೀಂದ್ರ ಪಟ್ಟಣ ಅವರು ಅಹಿಂಸೆ ಮತ್ತು ಸಮಾನತೆಯ ಹಾದಿಯಲ್ಲಿ ಬಸವಣ್ಣ ಮತ್ತು ಗಾಂಧೀಜಿ ಕುರಿತು ಉಪನ್ಯಾಸ ನೀಡುತ್ತಾ, ಸತ್ಯ ಮತ್ತು ಅಹಿಂಸೆ ಎಲ್ಲಾ ಧರ್ಮಗಳ ಸಾರವಾಗಿದೆ. ಗಾಂಧೀಜಿಯವರ ದಿವ್ಯ ವ್ಯಕ್ತಿತ್ವವನ್ನು ಲಾರ್ಡ್ ಮೌಂಟ್ ಬ್ಯಾಟನ್, ಮಾರ್ಟೀನ್ ಲೂಥರ್ ಕಿಂಗ್ ಸೇರಿದಂತೆ ಅನೇಕ ಬ್ರಿಟಿಷ್ ಅಧಿಕಾರಿಗಳು ಪ್ರಶಂಸಿಸಿದ್ದಾರೆ. ಗಾಂಧಿ ಅಹಿಂಸಾ ಪರಮೋಧರ್ಮ ಎಂದು ಅದರಂತೆ ನಡೆದರು.
ಬಸವಣ್ಣನವರು ಸಾರಿದ ಸತ್ಯ ಮತ್ತು ಅಹಿಂಸೆ ಮಾನವನ ಬದುಕಿನಲ್ಲಿ ವಿಶಿಷ್ಟ ಗುಣಗಳು. ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಉತ್ತಮ ಬದುಕು ನಮ್ಮದಾಗುತ್ತದೆ ಎಂದರು.
ಬಸವಣ್ಣನವರು ಬಂಗಾರದ ಮೂರ್ತಿ ಬಯಸಲಿಲ್ಲ. ನಾನೇ ಸಣ್ಣವ ಎಂದು, ನೊಂದವರ ಧ್ವನಿಯಾಗಿ ಸಮಸಮಾಜದ ಕಲ್ಪನೆಯನ್ನು ಹೊಂದಿದ್ದರು. ಸತ್ಯ ಮತ್ತು ಅಹಿಂಸೆ ತತ್ವವನ್ನು ಮಾನವ ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಪಾವನವೆಂದು ಹೇಳಿದರು. ಬಸವಣ್ಣ ಮತ್ತು ಗಾಂಧೀಜಿ ಕುರಿತು ತುಲನಾತ್ಮಕವಾಗಿ, ಅರ್ಥಪೂರ್ಣವಾಗಿ ದೃಷ್ಟಾಂತದೊಂದಿಗೆ ಪಟ್ಟಣ ತಿಳಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯದರ್ಶಿಗಳಾದ ಶೇಕಣ್ಣ ಕವಳಿಕಾಯಿ ಅವರು ಬಸವ ಸಂಸ್ಕೃತಿ ಅಭಿಯಾನದ ಬೆಂಗಳೂರು ಸಮಾರೋಪ ಸಮಾರಂಭದ ವ್ಯವಸ್ಥೆ ಬಗ್ಗೆ ಅಭಿಮಾನದಿಂದ ಮಾತನಾಡಿದರು.
ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿಗೆ ತಿಂಗಳ ಪರ್ಯಂತ ಮಹಾದಂಡನಾಯಕರಂತೆ ಮುಂಚೂಣಿಯಲ್ಲಿ ಇದ್ದು ಯಶಸ್ಸಿಗೆ ಕಾರಣರಾದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳನ್ನು ಲಿಂಗಾಯತ ಮಹಾಸಭಾ ಹಾಗೂ ವಿವಿಧ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಗೌರವಪೂರ್ವಕವಾಗಿ ಸನ್ಮಾನಿಸಿದರು.
ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಮಹೇಶ ರವಿಕುಮಾರ ಪುರಾಣಿಕಮಠ ಹಾಗೂ ವಚನ ಚಿಂತನವನ್ನು ಮಹಾಂತೇಶ ರವಿಕುಮಾರ ಪುರಾಣಿಕಮಠ ನಡೆಸಿದರು.
ದಾಸೋಹ ಸೇವೆಯನ್ನು ಲಿಂ. ಜಂಭವ್ವ ಮತ್ತು ಜಂಭಣ್ಣ ಕಾತರಕಿ ಅವರ ಸ್ಮರಣಾರ್ಥ ಕುಟುಂಬ ವರ್ಗದವರು ವಹಿಸಿದ್ದರು. ಸಿದ್ದಲಿಂಗಪ್ಪ ಕಾತರಕಿ, ಉಮಾದೇವಿ ಕಾತರಕಿ ಹಾಗೂ ಶೋಭಾ ಕಾತರಕಿ ಉಪಸ್ಥಿತರಿದ್ದರು.
ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ಕೆ ಎಸ್. ಚಟ್ಟಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿಗಳಾದ ಸೋಮು ಪುರಾಣಿಕ ಹಾಗೂ ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.
ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
