ಭಾಲ್ಕಿ
ಸ್ಥಳೀಯ ಬಾಲಯೇಸು ಪುಣ್ಯಕ್ಷೇತ್ರದ ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಆಳಂದ ತೋಂಟದಾರ್ಯ ಅನುಭವ ಮಂಟಪದ ಸಂಚಾಲಕರಾದ ಪೂಜ್ಯ ಕೋರಣೇಶ್ವರ ಸ್ವಾಮೀಜಿಗೆ ‘ವಿಶೇಷ ಸೇವಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗುಲಬರ್ಗಾ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪೂಜ್ಯ ರಾಬರ್ಟ್ ಮೈಕಲ್ ಮಿರಾಂದ ಮಾತನಾಡುತ್ತ, ಕೊರಣೇಶ್ವರ ಸ್ವಾಮೀಜಿ ಅವರು ನಿಜವಾದ ಶರಣ ಸಂಸ್ಕೃತಿಯ ಬೆಳಕನ್ನು ಸಮಾಜದ ಪ್ರತಿಯೊಂದು ಹೃದಯದವರೆಗೂ ತಲುಪಿಸುತ್ತಿದ್ದಾರೆ.

ಸ್ವಾಮೀಜಿಯವರ ಚಿಂತನೆಗಳಲ್ಲಿ ಬುದ್ಧನ ಬೋಧನೆ, ಬಸವಣ್ಣನ ಸಮತಾವಾದ ಹಾಗೂ ಡಾ. ಬಿ ಆರ್. ಅಂಬೇಡ್ಕರ ಅವರ ಸಾಮಾಜಿಕ ನ್ಯಾಯದ ತತ್ವಗಳು ಸಮನ್ವಯಗೊಂಡಿವೆ.
ಭಾಷೆ, ಧರ್ಮ, ಜಾತಿಯೆಂಬ ಅಂತರಗಳನ್ನು ಮರೆಮಾಡಿ ನಿಜವಾದ ಮೌಲ್ಯವನ್ನು ಪ್ರತಿಪಾದಿಸುತ್ತಿದ್ದಾರೆ. ಸಾಮಾಜಿಕ ನ್ಯಾಯ, ಕೋಮು ಸೌಹಾರ್ದತೆ ಹಾಗೂ ಅಸ್ಪೃಶ್ಯತೆ ನಿವಾರಣೆ ಎನ್ನುವುದು ಅವರ ಜೀವನದ ಧ್ಯೇಯವಾಗಿದ್ದು ಅವರ ಸಾನಿಧ್ಯದಲ್ಲಿ ಅನೇಕರು ಮಹತ್ವದ ನಿಜವಾದ ಅರ್ಥವನ್ನು ಅರಿತು ಹೊಸ ಜೀವನದ ದಾರಿ ಹಿಡಿದಿದ್ದಾರೆ.
2016ರಲ್ಲಿ ಇಂಗ್ಲೆಂಡಿನ ಪ್ರಸಿದ್ಧ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾನಿಲಯದಲ್ಲಿ ಅವರು ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ, ಸಾಮಾಜಿಕ ನ್ಯಾಯ ಕುರಿತು ನೀಡಿದ ಉಪನ್ಯಾಸವು ವಿಶ್ವಮಟ್ಟದಲ್ಲಿ ಭಾರತದ ಸಾಮಾಜಿಕ ಚಿಂತನೆಗೆ ಗೌರವ ತಂದಿದೆ.
ಸ್ವಾಮೀಜಿಯವರು ಧಾರ್ಮಿಕ ಸೌಹಾರ್ದತೆಯ ನಿಜವಾದ ವಕ್ತಾರರು, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಲಿಂಗಾಯತ ಮತ್ತು ಸಿಖ್ ಧರ್ಮಗಳಲ್ಲಿಯೂ ಅಂತರಾತ್ಮರ ಸಮಾನತೆ ಶಾಂತಿ ಪ್ರೀತಿ ಮತ್ತು ನಿಜವಾದ ದೇಶಭಕ್ತಿಯ ಸಂದೇಶವನ್ನು ಸಾರುವ ಮೂಲಕ ಅವರು ಧಾರ್ಮಿಕ ದ್ವೇಷ ಭೇದ ವೈಮನಸ್ಸುಗಳನ್ನು ನಿವಾರಿಸಲು ಶ್ರಮಿಸಿದ್ದಾರೆ.

ಅವರ ನೇತೃತ್ವದಲ್ಲಿ ಆಳಂದ ಮತ್ತು ಸುತ್ತಮುತ್ತಲಿನ ಪದೇಶದಲ್ಲಿ ಶಿಕ್ಷಣ ಸೇವೆ ಮತ್ತು ಸಾಮಾಜಿಕ ಜಾಗೃತಿಯ ಅಸಾಧಾರಣ ಕಾರ್ಯಗಳು ನಡೆಯುತ್ತಿವೆ. ಅನೇಕ ವಿದ್ಯಾರ್ಥಿಗಳು ಬಡಜನರು ಮತ್ತು ನಿರ್ಗತಿಕರು ಅವರ ಆಶ್ರಯದಲ್ಲಿ ನಂಬಿಕೆಯ ಬೆಳಕನ್ನು ಕಂಡಿದ್ದಾರೆ. ಭಾಲ್ಕಿ ಜಾತ್ರೆಯ ಈ ಪವಿತ್ರ ಸಂದರ್ಭದಲ್ಲಿ ‘ವಿಶೇಷ ಸೇವಾ ಪ್ರಶಸ್ತಿ’ ನೀಡಿ ಗೌರವಿಸಲು ಸಂತೋಷವೆನಿಸುತ್ತದೆ ಎಂದು ಬಿಷಪ್ ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಬಸವಲಿಂಗ ಪಟ್ಟದ್ದೇವರು ಭಾಗವಹಿಸಿ ಮಾತನಾಡಿದರು.
ಕಲಬುರಗಿ ಕೆಕೆಆರ್ಡಿಬಿ ಯೋಜನಾ ನಿರ್ದೇಶಕಿ ಪ್ರವೀಣಪ್ರಿಯ ಎನ್. ಡೇವಿಡ್ ಅವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅನೇಕರು ಉಪಸ್ಥಿತರಿದ್ದರು.

ಸರ್ವ ಧರ್ಮ ಸಮನ್ವಯದ ತಮ್ಮ ಪ್ರಯತ್ನಕ್ಕೆ ಶುಭವಾಗಲಿ. ದೇವರು ಎಲ್ಲರನ್ನು ಒಳ್ಳೆಯದು ಮಾಡಲಿ.ಶರಣು ಶರಣಾರ್ಥಿ ಎಲ್ಲರಿಗೂ ಶುಭವಾಗಲಿ.
ಪೂಜ್ಯ ಕೋರಣೇಶ್ವರ ಮಹಾಸ್ವಾಮಿಗಳು ಬಹಳ ಸರಳ ಜೀವಿಗಳು ಅವರಿಗೆ ಪ್ರಶಸ್ತಿ ದೊರಕಿದ್ದು ಬಹಳ ಸಂತೋಷದ ವಿಷಯ..