ಗದಗ :
ಕನಕದಾಸರು ಕೇವಲ ಒಬ್ಬ ಕವಿ ಮತ್ತು ಸಂತ ಮಾತ್ರವಲ್ಲ. ಅವರು ಜಾತ್ಯಾತೀತ ಮತ್ತು ಭಕ್ತಿಯ ಪ್ರತೀಕ ಎಂದು ಭೈರನಹಟ್ಟಿಯ ಪೂಜ್ಯ ಶ್ರೀ ಶಾಂತಲಿಂಗ ಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೭೭೧ ನೇಯ ಶಿವಾನುಭವದ ಸಮ್ಮುಖ ವಹಿಸಿ ಮಾತನಾಡಿದ ಶ್ರೀಗಳು, ಬಯಲು ಆಲಯದೊಳಗೊ, ಆಲಯದೊಳಗೆ ಬಯಲೋ ಎಂದು ಸಾರಿದವರು ಸಂತ ಶ್ರೇಷ್ಠ ಕನಕದಾಸರು. ತೊರೆದು ಜೀವಿಸಬಹುದೇ ಹರಿಯೇ ಎನ್ನುತ್ತಾ ಬದುಕಿದ ಭಕ್ತಿ ಪಂಥದ ಶ್ರೇಷ್ಠ ಸಂತ.
ಸಮಾಜದಲ್ಲಿನ ಅನಿಷ್ಟ ಪದ್ದತಿಯ ವಿರುದ್ಧ ಧ್ವನಿಯೆತ್ತಿದ ದಾರ್ಶನಿಕರು. ಹಾಗೆಯೇ ರಾಜಪೀಠ ತೊರೆದು ದಾಸಪೀಠ ಏರಿದ ಮಹಾನ್ ಸಂತಶ್ರೇಷ್ಠರು ಕನಕದಾಸರು ಎಂದು ಹೇಳಿದರು.

ಕೆ.ಎಲ್.ಇ. ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಡಾ. ವೀಣಾ ಉಪನ್ಯಾಸಕರಾಗಿ ಮಾತನಾಡಿ, ಕನಕದಾಸರು ಭಕ್ತಿಯ ಸೆಳೆತ ಜಾಸ್ತಿಯಾಗಿ, ಆಧ್ಯಾತ್ಮಿಕವಾಗಿ ತಾರತಮ್ಯವಿಲ್ಲದೆ ಹೇಗೆ ಬದುಕಬೇಕೆನ್ನುವ ತತ್ವವನ್ನು ಅವರ ಕೀರ್ತನೆಗಳು ಸಾರುತ್ತವೆ. ಭಕ್ತನಿಗೆ ದೇವರ ಮೇಲಿನ ಪ್ರೇಮಕ್ಕಿಂತ. ಭಕ್ತನ ಮೇಲಿನ ಪ್ರೇಮವೇ ದೇವರಿಗೆ ಪ್ರಾಮುಖ್ಯತೆಯಾಗಿದೆ.
ಸಂತ ಕನಕದಾಸರು ೩೧೬ ಕಿರ್ತನೆಗಳನ್ನು ರಚಿಸಿದ್ದಾರೆ. ಮೋಹನ ತರಂಗಿಣಿ, ನಳ ಚರಿತ್ರೆ, ರಾಮಧಾನ್ಯ ಚರಿತ್ರೆ, ಹರಿಭಕ್ತಿಸಾರ, ಮುಂತಾದ ಕೃತಿಗಳನ್ನು ಬರೆದಿದ್ದಾರೆ. ತಾರತಮ್ಯವಿಲ್ಲದ ಸಮಾಜವನ್ನು ಹೇಗೆ ಕಟ್ಟಬೇಕೆಂಬುದನ್ನು ಕನಕದಾಸರು ತಿಳಿಸಿದ್ದಾರೆ ಎಂದು ಮಾತನಾಡಿದರು.
ಕನಕಸಿರಿ ಪ್ರಶಸ್ತಿಗೆ ಭಾಜನರಾದ ನಿವೃತ್ತ ಪ್ರಾಚಾರ್ಯರಾದ ಡಾ. ಎನ್.ಎಂ. ಅಂಬಲಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಕುರುಬರ ಸಮಾಜದ ಗದಗ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರ ಅವರು ಉಪಸ್ಥಿತರಿದ್ದರು.

ವಚನ ಗಾಯನವನ್ನು ಐಶ್ವರ್ಯ ಹೂಲಿ, ಲಾವಣ್ಯ ಉತ್ತರಕರ, ತಬಲಾವನ್ನು ಕುಮಾರ ಭುವನ, ಕೊಳಲು ವಾದನವನ್ನು ಕುಮಾರ್ ಶ್ರೇಯಸ್ಸು ಮನಮೋಹಕವಾಗಿ ಪ್ರಸ್ತುತಪಡಿಸಿದರು. ವಚನ ಸಂಗೀತ ಗುರುನಾಥ್ ಸುತಾರ ಹಾಗೂ ಮೃತ್ಯುಂಜಯ ಹಿರೇಮಠ ನಡೆಸಿಕೊಟ್ಟರು.
ಧಾರ್ಮಿಕ ಗ್ರಂಥ ಪಠಣವನ್ನು ಸಂಜನಾ ಎಂ. ಹದ್ಲಿ ಹಾಗೂ ವಚನ ಚಿಂತನವನ್ನು ಜೈಬಾ ಎಂ. ನಾಗನೂರು ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಮುರುಘರಾಜೇಂದ್ರ ಮಹಾಂತಣ್ಣ ಬಡ್ನಿ ಹಾಗೂ ಕುಟುಂಬ ವರ್ಗದವರು ಮತ್ತು ಹುಚ್ಚಣ್ಣ ರೇವಣಪ್ಪ ಶಹಾಪೂರ ಶ್ರೀ ಹಾಲೇಶ್ವರ ಟ್ರೇಡಿಂಗ್ ಕಂಪನಿ ಇವರು ವಹಿಸಿದ್ದರು.
ನಾಡು ನುಡಿಯ ಸಾಮೂಹಿಕ ನೃತ್ಯರೂಪಕವನ್ನು ಗುರುಬಸವ ಸಿಬಿಎಸ್ಇ ಶಾಲೆ ಗದಗ ವಿದ್ಯಾರ್ಥಿಗಳಿಂದ ಜರುಗಿತು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮು ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
