ನೆಲ, ಜಲ, ತರುಗಳ ಉಳಿಸಿ ಬೆಳೆಸುವುದೇ ಕನ್ನಡಾಂಬೆಯ ಪೂಜೆ: ಡಾ. ತೋಂಟದ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ:

ಕನ್ನಡ ನಾಡು ಸಂಪದ್ಭರಿತ ನಾಡು. ಕನ್ನಡದ ಅಭಿಮಾನ ಮೂಡಿಸುವ ಕೆಲಸ ಹೆಚ್ಚು ಹೆಚ್ಚು ಆಗಬೇಕು. ಈ ನೆಲ, ಈ ಜಲ, ಈ ತರುಗಳಲ್ಲಿ, ವಿಶೇಷವಿದೆ ಅವನ್ನು ಉಳಿಸಿ ಬೆಳೆಸಬೇಕು. ಅಂತೆಯೇ ಕುವೆಂಪುರವರು ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದರು ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2772 ನೇಯ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬಹಳ ಜನ ಹೋರಾಟ ಮಾಡಿ, ಬೇರೆ ಬೇರೆ ಕಡೆಗೆ ಹಂಚಿ ಹೋಗಿದ್ದ ಪ್ರದೇಶಗಳನ್ನು ಒಂದು ಗೂಡಿಸಿದ ಶ್ರೇಯಸ್ಸು ಏಕೀಕರಣಕ್ಕೆ ಹೋರಾಡಿದ ನೇತಾರರಿಗೆ ಸಲ್ಲುತ್ತದೆ.

ನಮ್ಮ ನಾಡು ನಮ್ಮ ನುಡಿ ಎನ್ನದ ಮಾನವನೆದೆ ಸುಡುಗಾಡು ಎನ್ನುತ್ತಾರೆ ಕವಿ ಕುವೆಂಪು. ಕನ್ನಡಿಗರು ನಿರಭಿಮಾನಿಗಳಾಗದೇ ಕನ್ನಡಾಭಿಮಾನಿಗಳು ಆಗಬೇಕು. ಕನ್ನಡ ನುಡಿ ಮನವನು ಸೆಳೆವ ಮೋಹನ ಸುಧೆ. ಕನ್ನಡದ ಗ್ರಂಥಗಳನ್ನು ಓದುವುದರ ಮೂಲಕ ಆ ಸವಿಯನ್ನು ಸವಿಯಬಹುದು ಎಂದು ಹೇಳಿದರು.

ಸಮ್ಮುಖವನ್ನು ವಹಿಸಿದ ಭೈರನಟ್ಟಿ ಪೂಜ್ಯ ಶಾಂತಲಿಂಗ ಸ್ವಾಮಿಗಳು, ಕನ್ನಡದ ಅನೇಕ ಆಯಾಮಗಳನ್ನು ಅವಲೋಕನ ಮಾಡುವುದು ಸಹಜ. ತೋಂಟದಾರ್ಯ ಮಠ ಕನ್ನಡಕ್ಕಾಗಿ ಕೈಯೆತ್ತಿದ ಮಠ. ಜಗದ್ಗುರು ಡಾ. ಸಿದ್ದಲಿಂಗ ಶ್ರೀಗಳು ಗೋಕಾಕ ಚಳವಳಿಯ ಸಂದರ್ಭದಲ್ಲಿ ಹೋರಾಟಗಾರೊಂದಿಗೆ, ತಹಶೀಲ್ದಾರ್ ಕಚೇರಿ ಮುಂದೆ ನೆಲದ ಮೇಲೆ ಕೂತಾಗ, ನಮ್ಮ ಮಠದ ಭಕ್ತರು, ನಮ್ಮ ಜಗದ್ಗುರುಗಳನ್ನು ನೆಲದ ಮೇಲೆ ಕೂಡ್ರಿಸಿದ್ದೀರಿ.

ಇದು ಗೌರವ ಅಲ್ಲ ಎಂದು ಅಲ್ಲಿದ್ದವರಿಗೆ ಹೇಳಿದಾಗ, ಸಿದ್ದಲಿಂಗ ಶ್ರೀಗಳು, ನಮಗೆ ಪೀಠ ಮುಖ್ಯ ಅಲ್ಲ, ಈ ನಾಡಿನ ನೆಲ ಜಲ ಭಾಷೆ ಮುಖ್ಯ ಎಂದು ಹೇಳಿ ಕನ್ನಡದ ಜಗದ್ಗುರುಗಳೆ ಆದರು ಎಂದರು. ಕನ್ನಡಕ್ಕೆ ಹೋರಾಡಿದ ಮಹನೀಯರನ್ನು ಕೃತಜ್ಞತೆಯಿಂದ ನೆನೆಯಬೇಕು ಎಂದರು.

ಧಾರವಾಡದ ಅಂಜುಮನ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ರುದ್ರೇಶ ಮೇಟಿ ಅವರು, ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ವಿಷಯ ಕುರಿತು ಮಾತನಾಡುತ್ತಾ, ನಾನು ಚೆನ್ನಾಗಿ ಬದುಕಿದ್ದೇನೆ ಎಂದರೆ ಅದು ಕನ್ನಡದಿಂದ, ನನ್ನ ನೌಕರಿ ಕನ್ನಡದ್ದು, ನನ್ನ  ಭಾಷೆ ಕನ್ನಡ, ನಾನು ಸಾಧನೆ ಮಾಡಿದ್ದು ಕನ್ನಡದಲ್ಲಿ, ಆದರೆ ಯು ಪಿ ಎಸ್ ಸಿ ಯಲ್ಲಿ ಕನ್ನಡ ಇದೆ, ಆದರೆ ಕೆ ಪಿ ಎಸ್ ಸಿ ಯಲ್ಲಿ ಕನ್ನಡವಿಲ್ಲ. ಕರ್ನಾಟಕದವರು ಕನ್ನಡ ತೆಗಿತಾರ. ನಮಗೆ ಪ್ರದೇಶದ ಪ್ರೀತಿಗಿಂತಲೂ ನಾಡಿನ ಬಗ್ಗೆ ಪ್ರೀತಿ ಬೇಕು.

ಭಾರತ ದೇಶ ಏನಾದರೂ ಏಳ್ಗೆಯಾಗುವದಿದ್ದರೆ ಅದು ಕನ್ನಡದಿಂದಲೇ ಎಂದು ಬೇಂದ್ರೆಯವರು ಮನೆಯ ಮುಂದೆ ಬರೆದಿರುವರು. ಈ ಅಭಿಮಾನ ಬರಬೇಕು. ಯಾವುದೋ ಧ್ವಜ ಹಾರಿಸುವ ಇಂದಿನ ದಿನಗಳಲ್ಲಿ ಶ್ರೀಮಠದ ಮೇಲೆ ಕನ್ನಡ ಧ್ವಜ ಹಾರಾಡುತ್ತಿದೆ, ಆದ್ದರಿಂದ ನಾಡಿನಲ್ಲಿ ಇದು ಕನ್ನಡದ ಮಠ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಡಾ. ಬಸವರಾಜ ಮಲ್ಲೂರು ಪ್ರಾಚಾರ್ಯರು ಸರ್ಕಾರಿ ಐಟಿಐ ಬೆಟಗೇರಿ-ಗದಗ ಮತ್ತು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಗದಗ ಇವರು ಉಪಸ್ಥಿತರಿದ್ದರು.

‘ಬೆಸ್ಟ್ ಪರ್ಫಾರ್ಮಿಂಗ್ ಐಟಿಐ ಆಫ್ ಕರ್ನಾಟಕ’ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ಐಟಿಐ ಶಿರೋಳದ ಪ್ರಾಚಾರ್ಯರಾದ ಬಿ.ಎಸ್. ಸಾಲಿಮಠ ಹಾಗೂ ಸಿಬ್ಬಂದಿ ವರ್ಗದವರನ್ನು ಇದೇ ಸಂದರ್ಭದಲ್ಲಿ ಶ್ರೀಮಠದಲ್ಲಿ ಸನ್ಮಾನಿಸಲಾಯಿತು.

ಗದಗ ಶ್ರೀ ರಾಜೇಶ್ವರಿ ಕಲಾ ಕುಟೀರ ಮಕ್ಕಳಿಂದ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು.ನಾಡು ನುಡಿಯ ನೃತ್ಯ ರೂಪಕವನ್ನು ಗದಗ ಬಸವೇಶ್ವರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸುಂದರವಾಗಿ ಪ್ರದರ್ಶಿಸಿದರು.

ವಚನ ಸಂಗೀತ ಸೇವೆಯನ್ನು ಗುರುನಾಥ ಸುತಾರ ಹಾಗೂ ಮೃತ್ಯುಂಜಯ ಹಿರೇಮಠ ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ವೃತ್ವಿಕ ಹೂಗಾರ, ವಚನ ಚಿಂತನವನ್ನು ಶ್ರೇಯಸ್ ಅಂಗಡಿ ನಡೆಸಿದರು.

ದಾಸೋಹ ಸೇವೆಯನ್ನು ದೇವರಹಿಪ್ಪರಗಿಯ ಬಸವರಾಜ ಭೀಮಪ್ಪ ಅಸ್ಕಿ ಮತ್ತು ಕುಟುಂಬ ವರ್ಗ ಮತ್ತು ಶಿವಪ್ಪ ಮಲ್ಲಪ್ಪ ಜಡಗೊಂಡ ಮತ್ತು ಕುಟುಂಬ ವರ್ಗ ವಹಿಸಿದ್ದರು. ಸನ್ಮಾನಿತರ ಪರಿಚಯವನ್ನು ವೀರನಗೌಡ ಮರಿಗೌಡ್ರ ನಿರ್ವಹಿಸಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮು ಪುರಾಣಿಕ ಹಾಗೂ ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.

ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು, ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *