ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿದಂತೆ ಮೂವರು ಸಹೋದರರ ದುರಂತ ಸಾವು

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರಗಿ

ಜೀವರ್ಗಿ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ, 51, ಹಾಗೂ ಅವರ ಇಬ್ಬರು ಸಹೋದರರು ಮಂಗಳವಾರ ಸಾವನ್ನಪ್ಪಿದ್ದಾರೆ. ಮೂವರು ಸಹೋದರರು ಸಾವಿನಲ್ಲೂ ಒಂದಾಗಿದ್ದಾರೆ.

51 ವರ್ಷದ ಮಹಾಂತೇಶ್ ತಮ್ಮ ಇಬ್ಬರು ಸಹೋದರರಾದ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಅವರ ಜೊತೆ ಸಂಬಂಧಿಕರ ಮದುವೆಗೆಂದು ವಿಜಯಪುರಿಂದ ಕಲಬುರಗಿಗೆ ತೆರಳುತ್ತಿದ್ದರು.

ಏಕಾಏಕಿ ಅಡ್ಡ ಬಂದ ಶ್ವಾನವನ್ನು ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ KA 04, NC 7982 ಸಂಖ್ಯೆಯ ಇನ್ನೋವಾ ಕಾರು ಗೌನಹಳ್ಳಿ ಕ್ರಾಸ್ ಬಳಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.

ಶಂಕರ ಬೀಳಗಿ, ಈರಣ್ಣ ಶಿರಸಂಗಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮಹಾಂತೇಶ್ ಬೀಳಗಿ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಮಹಾಂತೇಶ್​ ಬೀಳಗಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಐಜಿಪಿ ಶಾಂತನು ಸಿನ್ಹಾ, ಕಲಬುರಗಿ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳ ‌ದೌಡಾಯಿಸಿದ್ದಾರೆ.

ಮಹಾಂತೇಶ್ ಬೀಳಗಿ ಅವರು 2012ರ ಕರ್ನಾಟಕ ಕೇಡರ್​ನ IAS ಅಧಿಕಾರಿಯಾಗಿದ್ದು, ಪ್ರಸ್ತುತ ಅವರು ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಬೆಸ್ಕಾಂ ಎಂಡಿ ಸಹ ಆಗಿದ್ದರು. ಅಲ್ಲದೇ ದಾವಣಗೆರೆ, ಉಡುಪಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಕಡೆ ಕಾರ್ಯನಿರ್ವಹಿಸಿದ್ದರು.

ಹುಟ್ಟೂರಿನಲ್ಲಿ ನೀರವ ಮೌನ

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಟ ನಲ್ಲಿರುವ ನಿವಾಸದ ಎದುರು ಸಂಬಂಧಿಕರು, ಆಪ್ತರು, ಗ್ರಮಾಸ್ಥರು ಜಮಾವಣೆಗೊಂಡಿದ್ದಾರೆ. ಸಾವಿನ ಸುದ್ದಿ ಕೇಳಿ ಮನೆಯತ್ತ ಧಾವಿಸಿದ ಮಹಾಂತೇಶ್ ಬೀಳಿಗಿಗೆ ಕಲಿಸಿದ ಗುರುಗಳು,‌ ಸ್ನೇಹಿತರು ಮನಯತ್ತೆ ಆಗಮಿಸಿದ್ದಾರೆ. ಮಹಾಂತೇಶ್ ಬೀಳಗಿ ಸ್ನೇಹಿತರು, ಆಪ್ತರು ಭಾವುಕರಾಗಿದ್ದರು. ಎರಡು ಹೊತ್ತು ಊಟ ಮಾಡದಷ್ಟು ಕಡು ಬಡತನದಲ್ಲಿ ಮಹಾಂತೇಶ್ ಬೆಳೆದಿದ್ದರು ಎಂದು ಆಪ್ತರು ಹೇಳಿದ್ದಾರೆ. ಡಿಗ್ರಿ ವರೆಗೂ ರಾಮದುರ್ಗದಲ್ಲಿ ಓದಿದ್ದ ಮಹಾಂತೇಶ್ ಬಳಿಕ ಕರ್ನಾಟಕ ಯುನಿವರ್ಸಿಟಿ ಧಾರವಾಡದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದರು.

ತಾಯಿ ಸಮಾಧಿ ಪಕ್ಕದಲ್ಲಿ ಅಂತ್ಯಸಂಸ್ಕಾರ

ಬುಧವಾರ ರಾಮದುರ್ಗದ ತೋಟದಲ್ಲಿ ತಾಯಿ ಸಮಾಧಿ ಪಕ್ಕದಲ್ಲಿ ಮಹಾಂತೇಶ್ ಬೀಳಗಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಗಣ್ಯರ ಸಂತಾಪ

ಸಿದ್ದರಾಮಯ್ಯ

ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿಗಳಾದ ಮಹಾಂತೇಶ್ ಬೀಳಗಿ ಅವರು ಕಾರು ಅಪಘಾತದಲ್ಲಿ ವಿಧಿವಶರಾಗಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ.

ಹಲವು ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಜಿಲ್ಲಾಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದರು. ಮಹಾಂತೇಶ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಎಲ್ಲ ಕಡೆಗಳಲ್ಲಿಯೂ ತಮ್ಮ ದಕ್ಷತೆಯಿಂದಾಗಿ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ದೊರಕಲೆಂದು ಪ್ರಾರ್ಥಿಸುತ್ತೇನೆ. ಅವರ ದುಃಖತಪ್ತ ಕುಟುಂಬಕ್ಕೆ ನನ್ನ ಸಂತಾಪಗಳು.

ಎಂ ಬಿ ಪಾಟೀಲ್

ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಜನಸ್ನೇಹಿ IAS ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಕಲಬುರಗಿ ಜಿಲ್ಲೆಯ ಜೇವರ್ಗಿ ಸಮೀಪ ಜರುಗಿದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ.

ಜಿಲ್ಲಾಧಿಕಾರಿಗಳಾಗಿ ಹಲವು ಜಿಲ್ಲೆಗಳಲ್ಲಿ ಪ್ರಾಮಾಣಿಕತೆ-ದಕ್ಷತೆಯಿಂದ ಸೇವೆ ಸಲ್ಲಿಸಿದ್ದರು. ಉತ್ತಮ ವಾಗ್ಮಿಯಾಗಿ ಅನೇಕ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದ್ದರು. ಅವರ ಅಗಲಿಕೆ ಆಡಳಿತ ವ್ಯವಸ್ಥೆಗೆ, ತುಂಬಲಾರದ ನಷ್ಟವಾಗಿದೆ.

ಅವರ ಆತ್ಮಕ್ಕೆ ಚಿರಶಾಂತಿ, ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಡಿ.ಕೆ. ಶಿವಕುಮಾರ್

ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಜನಸ್ನೇಹಿ IAS ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಕಲಬುರಗಿ ಜಿಲ್ಲೆಯ ಜೇವರ್ಗಿ ಸಮೀಪ ಜರುಗಿದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ.

ಜಿಲ್ಲಾಧಿಕಾರಿಗಳಾಗಿ ಹಲವು ಜಿಲ್ಲೆಗಳಲ್ಲಿ ಪ್ರಾಮಾಣಿಕತೆ-ದಕ್ಷತೆಯಿಂದ ಸೇವೆ ಸಲ್ಲಿಸಿದ್ದರು. ಉತ್ತಮ ವಾಗ್ಮಿಯಾಗಿ ಅನೇಕ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದ್ದರು. ಅವರ ಅಗಲಿಕೆ ಆಡಳಿತ ವ್ಯವಸ್ಥೆಗೆ, ತುಂಬಲಾರದ ನಷ್ಟವಾಗಿದೆ.

ಅವರ ಆತ್ಮಕ್ಕೆ ಚಿರಶಾಂತಿ, ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಈಶ್ವರ ಖಂಡ್ರೆ

ಐಎಎಸ್ ಅಧಿಕಾರಿ ಶ್ರೀ ಮಹಾಂತೇಶ್ ಬಿಳಗಿ ಅವರ ದುರಂತ ನಿಧನದ ಸುದ್ದಿ ಮನಸ್ಸಿಗೆ ತೀವ್ರ ವೇದನೆಯನ್ನುಂಟುಮಾಡಿದೆ. ಬೀದರ್ ಜಿಲ್ಲೆಯಲ್ಲಿ ಜಿಲ್ಲಾಪಂಚಾಯತ್ ಸಿಇಒ ಆಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಅವರು ತೋರಿದ ನಿಷ್ಠೆ, ಪರಿಶ್ರಮ ಮತ್ತು ಜನಪರ ಆಡಳಿತ ಜನಮನದಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದೆ.

ಬೀದರ ಜಿಲ್ಲೆಯ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಾರದರ್ಶಕ ಆಡಳಿತ ಕ್ಷೇತ್ರಗಳಲ್ಲಿ ಅವರು ತಂದ ಬದಲಾವಣೆಗಳು ಅತ್ಯಂತ ಶ್ಲಾಘನೀಯ. ಸರಳತೆ, ಸಂವೇದನೆ ಮತ್ತು ಸೇವಾಭಾವ ಇವರ ಕಾರ್ಯಶೈಲಿಯ ಗುರುತು.

ತಾವು ಸಮಾಜಕ್ಕೆ ಸಲ್ಲಿಸಿದ ಸೇವೆ ಸದಾ ಸ್ಮರಣೀಯ. ಅವರ ಅಗಲಿಕೆ ಆಡಳಿತ ವ್ಯವಸ್ಥೆಗೆ, ಜಿಲ್ಲೆಯ ಜನತೆಗೆ ತುಂಬಲಾರದ ನಷ್ಟ.

ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ದುಃಖಿತ ಕುಟುಂಬಕ್ಕೆ ದೇವರು ಶಕ್ತಿ ಮತ್ತು ಸಹನೆಯನ್ನು ಕರುಣಿಸಲಿ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
4 Comments
  • ಕಾಲನಿಗೆ ಕರುಣೆ ಇಲ್ಲ,ಮಾತು ಮೌನವಾಗಿದೆ ಅಗಲಿದ ಶರಣ ಚೇತನಗಳಿಗೆ ಭಾವಪೂರ್ಣ ಶರಣಾಂಜಲಿ,😥🌷🌷🙏🙏🇮🇳.

  • 😳🥲
    ಆಗಬಾರದ್ದು ಆಗಿಹೋಗಿದೆ. ಅಡ್ಡ ಬಂದ ನಾಯಿ ಉಳಿಸುವ ಪ್ರಯತ್ನ ಅಪಘಾತಕ್ಕೆ ಅಮೂಲ್ಯ ಜೀವ ಹಾನಿಗೆ ಕಾರಣ. ನಿಧಾನವೆ ಪ್ರಧಾನ ನೆನಪಿಸುತ್ತೆ.

  • ಅವರ ಬದುಕೇ ಒಂದು ಆದರ್ಶ. ಅವರ ಮಾತುಗಳೇ ಅನುಭಾವ. ಅವರ ಸಾಧನೆ ಸಾಧಿಸಬೇಕೆಂಬ ಯುವಕರಿಗೆ ಮಾದರಿ.

  • ಅತೀವ ದುಃಖಕರ ಸಂಗತಿ. ಅವರನ್ನು ಮಾತಾಡಿಸುವ ಹಾಗೂ ಅವರ ಮಾತು ಕೇಳುವ ಅವಕಾಶ ನನಗೂ ಒದಗಿತ್ತು. ಕೇಳಿದವರಿಗೆ ಅವರ ಜೀವನವೇ ಒಂದು ಆದರ್ಶದ ಪಾಠವಾಗಬಲ್ಲುದು.
    ಒಬ್ಬ ಶರಣನ ಹಾಗೆ ಸಮಾಜ ಸೇವೆ ಸಲ್ಲಿಸಿದ್ದಾರೆ. ಅಂಥವರ ಸೇವೆ ಸಮಾಜಕ್ಕೆ ಇನ್ನೂ ಬೇಕಾಗಿತ್ತು.
    ಅವರ ಅಕಾಲಿಕ ಮರಣ ಸಮಾಜಕ್ಕೆ ತುಂಬಲಾರದ ಹಾನಿ.
    ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ.
    ಓಂ ಶಾಂತಿಃ..

Leave a Reply

Your email address will not be published. Required fields are marked *