ಬೆಳಗಾವಿ:
ಗುರುಬಸವ ಬಳಗ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದಿಂದ ನಡೆಸಿದ ಹಿರೇಬಾಗೇವಾಡಿ ಗ್ರಾಮದ ಸರಕಾರಿ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಚನ ಕಂಠಪಾಠ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾ.ಲಿಂ. ಮಹಾಸಭಾದ ಬೆಳಗಾವಿ ತಾಲೂಕ ಘಟಕದ ಅಧ್ಯಕ್ಷರಾದ ಬಿ ಜಿ ವಾಲಿ ಇಟಗಿ ವಹಿಸಿ ಬಸವಾದಿ ಶರಣರ ವಚನಗಳಲ್ಲಿರುವ ಮೌಲ್ಯಗಳನ್ನು ವಿವರಿಸಿದರು.
ಮುಖ್ಯ ಅತಿಥಿಗಳಾಗಿದ್ದ ಮಹಾಸಭಾದ ಬೆಳಗಾವಿ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ಸಿ ಎಂ ಬೂದಿಹಾಳ ಮಾತನಾಡುತ್ತ, ಒಂಬತ್ತುನೂರು ವರ್ಷಗಳ ಹಿಂದೆ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ಎಲ್ಲ ಕಾಯಕ ವರ್ಗದವರು ಸಮಸಮಾಜವನ್ನು ಕಟ್ಟಿ ಅನುಭವ, ಅನುಭಾವದೊಂದಿಗೆ ಮಾನವನ ವಿಕಾಸಕ್ಕೆ ವಚನ ಸಾಹಿತ್ಯ ನೀಡಿದ್ದಾರೆ.

ಅವುಗಳನ್ನು ಕಂಠಪಾಠ ಮಾಡುವುದರೊಂದಿಗೆ ನೆನಪಿನ ಶಕ್ತಿಯನ್ನು ವೃದ್ಧಿಸಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದು ಹೇಳಿದರು.
ವೇದಿಕೆಯ ಮೇಲೆ ಮಹಾಸಭಾದ ಜಿಲ್ಲಾ ಖಜಾಂಚಿ ಎಂ.ಎಂ. ಬಾಳಿ, ಗುರುಬಸವ ಬಳಗದ ಎನ್ ಎಫ್ ಉಪ್ಪಿನ, ಬಾಬಾಗೌಡ ಪಾಟೀಲ ಇದ್ದರು. ಪ್ರಾರಂಭದಲ್ಲಿ ಹಿರಿಯ ಗುರುಮಾತೆ ಎಸ್ ಎಸ್ ಕಡೇಮನಿ ಸ್ವಾಗತಿಸಿದರು. ಶಿಕ್ಷಕ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಮಕ್ಕಳು, ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.
