ಚಿತ್ರದುರ್ಗ
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಇದೇ ೧೫ರಂದು ಶಿವರಾತ್ರಿ ಆಚರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಆಡಳಿತ ಮಂಡಳಿಯ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಅಂದು ಬೆಳಗ್ಗೆ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಅವರು ಸಹಜ ಶಿವಯೋಗ ಪ್ರಾತ್ಯಕ್ಷಿಕೆ
ನಡೆಸಿಕೊಡುವರು. ಈ ಸಂದರ್ಭದಲ್ಲಿ ಆಸಕ್ತರಿಗೆ ಇಷ್ಟಲಿಂಗ ದೀಕ್ಷೆ ನೆರವೇರಿಸಲಾಗುವುದು. ಇಷ್ಟಲಿಂಗವನ್ನು
ಶ್ರೀಮಠದಿಂದಲೇ ನೀಡಲಾಗುವುದು.
ಆಸಕ್ತರಿಗೆ ಶಿವಯೋಗದ ಮಹತ್ವ ಹಾಗೂ ಇಷ್ಟಲಿಂಗದ ಮೂಲಕ ಲಿಂಗಾನುಸಂಧಾನ ಮಾಡಿಕೊಳ್ಳುವ ಬಗ್ಗೆ ಶ್ರೀಗಳು ತಿಳಿಸಿಕೊಡಲಿದ್ದಾರೆ.
ಅದೇ ದಿನ ಸಂಜೆ ೭.೩೦ ಗಂಟೆಯಿಂದ ಶರಣರ ದೃಷ್ಟಿಯಲ್ಲಿ ಶಿವರಾತ್ರಿ ಆಚರಣೆ ಹೇಗೆ ಎಂಬ ವಿಷಯ ಕುರಿತು ಸಾಹಿತಿ ಮಲ್ಲಪ್ಪ ಫಕ್ಕೀರಪ್ಪ ಕರೆಣ್ಣನವರ ಉಪನ್ಯಾಸ ನೀಡಲಿದ್ದಾರೆ. ಚಿಕ್ಕಜಾಜೂರಿನ ಮಾರುತಿ ಭಜನಾ ಸಂಘದವರು ವಚನ, ತತ್ವಪದ, ಜಾನಪದ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಭಜನೆ ಮಾಡಲಿದ್ದಾರೆ.
ಶ್ರೀಮಠದ ಜಮುರಾ ಕಲಾವಿದರಿಂದ ವಚನ ಸಂಗೀತ ನಡೆಯಲಿದೆ. ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿರುವರು.
