ವಿದ್ಯಾರ್ಥಿಗಳ ನಿರಂತರ ಪರಿಶ್ರಮವೇ ಯಶಸ್ಸಿನ ಕೀಲಿಕೈ : ಸಿದ್ಧರಾಮ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ :

ಪರೀಕ್ಷೆ ಸಮೀಪಿಸುತ್ತಲಿದೆ, ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದಬೇಕು. ಓದಿದ್ದನ್ನು ಮನನ ಮಾಡಬೇಕು. ಪ್ರತಿದಿನ ಆರು ಗಂಟೆಯಾದರೂ ಓದಬೇಕು. ಹೀಗೆ ವಿದ್ಯಾರ್ಥಿಗಳು ನಿರಂತರ ಪರಿಶ್ರಮಪಟ್ಟರೆ ಖಂಡಿತ ಯಶಸ್ಸು ನಿಮ್ಮದಾಗುತ್ತದೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೭೮೫ ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ವಿದ್ಯಾರ್ಥಿಗಳ ಜೀವನದಲ್ಲಿ ಹತ್ತನೇ ತರಗತಿ ತುಂಬಾ ಮಹತ್ವದ ಹಂತ. ಶಿಕ್ಷಕರು ಹೇಳಿದ್ದನ್ನು ನೆನಪಿನಲ್ಲಿ ಇಟ್ಟುಕೊಂಡು, ಶ್ರಮವಹಿಸಿ ಅಭ್ಯಾಸಮಾಡಿ ಏಕಾಗ್ರತೆಯಿಂದ ಪರೀಕ್ಷೆ ಎದುರಿಸಬೇಕು.

ವಿದ್ಯಾರ್ಥಿಗಳ ಫಲಿತಾಂಶ ಚೆನ್ನಾಗಿ ಬರಬೇಕೆಂದು ಶಿಕ್ಷಕರು, ಇಲಾಖೆಯ ಅಧಿಕಾರಿಗಳು ಈ ವರ್ಷ ಬಹಳಷ್ಟು ಕಾರ್ಯಕ್ರಮ ರೂಪಿಸಿಕೊಂಡಿದ್ದಾರೆ. ಕಳೆದ ಸಾಲಿನಲ್ಲಿ ಎರಡಂಕಿಯ ಫಲಿತಾಂಶ ಬಂದಿದೆ. ಈ ವರ್ಷ ರಾಜ್ಯಮಟ್ಟದಲ್ಲಿ ಒಂದಂಕಿಯಲ್ಲಿ ಫಲಿತಾಂಶ ಬರಬೇಕು. ಅದು ಮೂರರೊಳಗೆ ಬರಬೇಕು. ಒಂದನೇ ಸ್ಥಾನ ಬರಲು ಪ್ರಯತ್ನವಿರಲಿ. ಎಲ್ಲಾ ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿ ಎಂದು ಶ್ರೀಗಳು ಶುಭಹಾರೈಸಿದರು.

ಉಪನ್ಯಾಸಕರಾಗಿ ಆಗಮಿಸಿದ ಗದಗ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಆರ್. ಎಸ್. ಬುರಡಿ ಮಾತನಾಡಿ, ಪರೀಕ್ಷಾ ಪ್ರೇರಣಾ ಸಂಭ್ರಮ ವಿಷಯ ಕುರಿತು ಮಾತನಾಡುತ್ತಾ, ಮಕ್ಕಳಿಗೆ ಈಗಾಗಲೇ ಹೇಗೆ ಅಭ್ಯಾಸ ಮಾಡಬೇಕು ಎಂಬುದನ್ನು ಶಿಕ್ಷಕರು ಹೇಳಿದ್ದಾರೆ.

ಪರೀಕ್ಷೆಯಂದು ಯಾರು ಭಯಪಡಬಾರದು. ಚೆನ್ನಾಗಿ ಓದಿ ಮನನ ಮಾಡಿಕೊಳ್ಳಿ. ಕಠಿಣ ವಿಷಯಗಳನ್ನು ಪದೇ ಪದೇ ಓದಿಕೊಳ್ಳಿ. ಅಂಡರಲೈನ್ ಮಾಡಿಕೊಳ್ಳಿ. ಇಷ್ಟಪಟ್ಟು ಪ್ರತಿದಿನ ಆರು ತಾಸು ಓದಿಕೊಳ್ಳಿ. ಉತ್ತಮ ಫಲಿತಾಂಶ ಬಂದೇ ಬರುತ್ತದೆ. ನಿರಂತರ ಓದು ನಿಮ್ಮದಾಗಲಿ ಎಂದು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ನಿವೃತ್ತ ಉಪನಿರ್ದೇಶಕರು ಹಾಗೂ ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು. ವಿಷಯ ಸಂಪನ್ಮೂಲ ವ್ಯಕ್ತಿಗಳಾಗಿ ಎಚ್.ಬಿ ರಡ್ಡೇರ, ಸೆಲ್ವಾ, ಚಂದ್ರಶೇಖರ ಜೋಗಿನ, ಮುತ್ತು ಗಾರವಾಡ, ನಾಗನಗೌಡ ಮೇಟಿ, ಎಂ.ಎಂ. ಯರಗುಡಿ, ನೂರಅಹಮ್ಮದ್ ನದಾಫ ಅವರು ಎಸ್‌ಎಸ್‌ಎಲ್‌ಸಿ ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ ಕೇಳಿದ ಅನೇಕ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು.

ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡವಿನಮನಿ ಹಾಗೂ ಆರ್.ವಿ. ಶೆಟ್ಟೆಪ್ಪನವರ ಉಪಸ್ಥಿತರಿದ್ದರು. ನಗರ ವಲಯದ ವಿವಿಧ ಶಾಲೆಗಳಿಂದ ಬಂದ ೫೦೦ಕ್ಕೂ ಹೆಚ್ಚಿಗೆ ಮಕ್ಕಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿಕ್ಷಕರು ಪಾಲಕರು ಉಪಸ್ಥಿತರಿದ್ದರು.

ಸ್ವರಾಲಯ ಸ್ಕೂಲ್ ಆಫ್ ಮ್ಯೂಸಿಕ್ ಗದಗ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನೆರವೆರಿತು. ವಚನ ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ, ಗುರುನಾಥ್ ಸುತಾರ ನೆಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ವರ್ಣಿಕಾ ಚಿಕ್ಕಮಠ, ವಚನ ಚಿಂತನವನ್ನು ಶ್ರೀರಕ್ಷಾ ಹೊನಗಣ್ಣವರ ನೆರವೇರಿಸಿದರು. ದಾಸೋಹ ಸೇವೆಯನ್ನು ರತ್ನಕ್ಕ ಬಸನಗೌಡ ಪಾಟೀಲ  ವಹಿಸಿಕೊಂಡಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಉಪಾಧ್ಯಕ್ಷ ಡಾ ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.

ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪರವರು ಸ್ವಾಗತಿಸಿದರು ಹಾಗೂ ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *