ಬಸ್ ನಿಲ್ದಾಣ, ರೈಲು ನಿಲ್ದಾಣ ಸಂಪರ್ಕ ರಸ್ತೆಯ ಸಮೀಪ ಬೃಹತ್ ಬಸವ ಪ್ರತಿಮೆ
ಅರಸೀಕೆರೆ:
ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಬಸ್ ನಿಲ್ದಾಣಕ್ಕೆ “ಬಸವೇಶ್ವರ”ರ ಹೆಸರು ಇಡಲಾಗುವುದು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಘೋಷಿಸಿದ್ದಾರೆ.
ಪಿಪಿ ವೃತ್ತದ ಬಳಿ ಬಸವೇಶ್ವರರ ಅಶ್ವಾರೂಢ ಕಂಚಿನ ಪ್ರತಿಮೆ ಸ್ಥಾಪನೆಗೆ ಬೇಕಾದ ಅಗತ್ಯ ಕ್ರಮಗಳು ಪೂರ್ಣಗೊಂಡಿದ್ದು, ಬಸವ ಜಯಂತಿಯೊಳಗೆ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯ ಸಾರಿಗೆ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸಮೀಪ ಪ್ರತಿಮೆ ಸ್ಥಾಪನೆಗೆ ನಿಗದಿಪಡಿಸಿದ ಸ್ಥಳಕ್ಕೆ ಶಾಸಕರು ಸೋಮವಾರ ಭೇಟಿ ನೀಡಿದರು. ನೂರಾರು ಬಸವ ಅನುಯಾಯಿಗಳು ಹಾಗೂ ಲಿಂಗಾಯತ ಸಮಾಜದ ಮುಖಂಡರು ಅವರ ಜೊತೆ ಹೋಗಿ ಚರ್ಚಿಸಿದರು.

“ಮಹಾ ಮಾನವತಾವಾದಿ ಬಸವೇಶ್ವರರ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ,” ಎಂದು ಹೇಳಿದರು. ಬೆಂಗಳೂರು ಮತ್ತು ಬಸವಕಲ್ಯಾಣ ಮಾದರಿಯಲ್ಲಿ ಬೃಹತ್ ಗಾತ್ರದ ಅಶ್ವರೂಢ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದಿಂದ 40 ಲಕ್ಷ ರೂ. ಅನುದಾನ ಮಂಜೂರಾಗಿದೆ. ಬಸವ ಅನುಯಾಯಿಗಳು ಸ್ವಯಂಪ್ರೇರಿತವಾಗಿ ತನು-ಮನ-ಧನ ಸಹಕಾರ ನೀಡಲು ಮುಂದಾಗಿದ್ದಾರೆ. ಅಗತ್ಯ ಬಿದ್ದಲ್ಲಿ ಹೆಚ್ಚುವರಿ ಅನುದಾನವನ್ನು ಸಹ ಸರ್ಕಾರದಿಂದ ತರಲಾಗುವುದು,” ಎಂದು ಶಿವಲಿಂಗೇಗೌಡ ಹೇಳಿದರು.
ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ ಮಾತನಾಡಿ, ತಾಲೂಕಿನ ಜನರ ದಶಕಗಳ ಕನಸು ಶಾಸಕರ ಇಚ್ಛಾಶಕ್ತಿಯಿಂದ ನನಸಾಗುತ್ತಿದೆ ಎಂದರು. ರೈಲು ಹಾಗೂ ಬಸ್ ನಿಲ್ದಾಣದ ಸಮೀಪ ಪ್ರತಿಮೆ ಸ್ಥಾಪನೆಯಾಗುವುದರಿಂದ ಸಂಚರಿಸುವ ಜನತೆಗೆ ಜಗಜ್ಯೋತಿ ಬಸವೇಶ್ವರರ ದರ್ಶನ ಲಭಿಸುವುದು ಸಂತಸದ ವಿಷಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಶಿಧರ್, ಹೇಮಾವತಿ ಶುಗರ್ ಕಾರ್ಖಾನೆಯ ನಿರ್ದೇಶಕ ಮಲ್ಲೇನಹಳ್ಳಿ ಶಿವಶಂಕರಸ್ವಾಮಿ, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಕಾಟಿಕೆರೆ ಉಮೇಶ, ಮಂಜಣ್ಣ, ಮುರುಂಡಿ ಶಿವಯ್ಯ, ದಿವಾಕರ್, ದುಮೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಗಿರೀಶ, ಗೀಜಿಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಧರ್ಮೇಶ, ತಾಪಂ ಮಾಜಿ ಅಧ್ಯಕ್ಷೆ ಮಂಜುಳಾಬಾಯಿ, ರೈತ ಸಂಘದ ಮುಖಂಡ ದಯಾನಂದ, ಪುರಸಭೆ ಮಾಜಿ ಸದಸ್ಯರಾದ ಸುಬ್ರಮಣ್ಯ, ಬಾಬು, ಉಮಾಶಂಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬಸವಣ್ಣನವರ ಕೃಪೆ ಸದಾ ಗೌಡರ ಮೇಲಿರಲೆಂದು ಎಲ್ಲಾ ಬಸವಾಭಿಮಾನಿಗಳ ಆಶಯ.ಶರಣುಶರಣಾರ್ಥಿಗಳು