ಮೈಸೂರು :
‘ವಚನ ಚಿತ್ರರಚನಾ ಪಿತಾಮಹ ಎಂ. ವೀರಪ್ಪ ದತ್ತಿ ಪ್ರಶಸ್ತಿ’ಗೆ ಚ.ಭೀ. ಸೋಮಶೆಟ್ಟಿ ಹಾಗೂ ಶಿವಪುತ್ರಪ್ಪ ಎಂ. ಬಡಿಗೇರ ಅವರನ್ನು ಆಯ್ಕೆ ಮಾಡಲಾಗಿದೆ.
ಇಲ್ಲಿನ ಜೆಎಸ್ಎಸ್ ಮಹಾವಿದ್ಯಾಪೀಠದಿಂದ ನೀಡಲಾಗುವ ಈ ಪ್ರಶಸ್ತಿಗೆ 2024ನೇ ಸಾಲಿಗೆ ಶಿವಪುತ್ರಪ್ಪ ಎಂ. ಬಡಿಗೇರ ಹಾಗೂ 2025ನೇ ಸಾಲಿಗೆ ಚ.ಭೀ. ಸೋಮಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ₹68 ಸಾವಿರ ನಗದು ಬಹುಮಾನ, ಸ್ವಸ್ತಿವಾಚನ ಹಾಗೂ ಫಲಕಗಳನ್ನು ಒಳಗೊಂಡಿದೆ.
ಹೈದರಾಬಾದ್ ಮೂಲದ ಚಿತ್ರಕಲಾವಿದ ಚ.ಭೀ. ಸೋಮಶೆಟ್ಟಿ ಬೀದರನಲ್ಲಿ ನೆಲಸಿದ್ದು, 33 ವರ್ಷಗಳ ಕಾಲ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಜಲವರ್ಣದಲ್ಲಿ 125ಕ್ಕೂ ಹೆಚ್ಚು ಕಲಾಕೃತಿಗಳನ್ನು ರಚಿಸಿದ್ದು, ಬಸವಾದಿ ಶರಣರ 200ಕ್ಕೂ ಹೆಚ್ಚು ರೇಖಾಚಿತ್ರಗಳನ್ನು ಸೃಷ್ಟಿಸಿರುವುದು ಅವರ ವಿಶೇಷ ಸಾಧನೆಯಾಗಿದೆ.
ಧಾರವಾಡದ ಕರಕುಶಲ ಕಲಾವಿದ ಶಿವಪುತ್ರಪ್ಪ ಅವರಿಗೆ 40 ವರ್ಷಗಳ ಕೆತ್ತನೆ ಅನುಭವವಿದ್ದು, ಅಲಂಕಾರಿಕ ಮೂರ್ತಿಗಳ ತಯಾರಿಕೆ, ದೇವತೆಗಳ ಮೂರ್ತಿಗಳು, ಮರದ ರಥ ನಿರ್ಮಾಣ ಹಾಗೂ ಮಣ್ಣು-ಪ್ಲಾಸ್ಟರ್ ಕಲಾಕೃತಿಗಳಲ್ಲಿ ಖ್ಯಾತಿ ಪಡೆದಿದ್ದಾರೆ. ಇವರ ಕಲಾಕೃತಿಗಳು ಅನೇಕ ದೇವಸ್ಥಾನಗಳಲ್ಲಿ ಪೂಜಿಸಲ್ಪಡುತ್ತಿವೆ.
