ಬೆಳಗಾವಿ:
ಸರ್ವರ ಆಶಯದಂತೆ ಜಾತಿ-ಧರ್ಮ, ಭಾಷೆ, ಭೇದ-ಭಾವ ತೊರೆದು ಬಸವಣ್ಣವರ ಕಾಯಕ ತತ್ವದಡಿಯಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ ಎಂದು ಬೆಳಗಾವಿ ನಗರ ನೂತನ ಮಹಾಪೌರರಾದ ಪ್ರೀತಿ ಕಾಮಕರ ಹೇಳಿದರು.
ಈಚೆಗೆ ಲಿಂಗಾಯತ ಸಂಘಟನೆ ವತಿಯಿಂದ ನೂತನವಾಗಿ ಆಯ್ಕೆಯಾದ ಮಹಾಪೌರ, ಉಪಮಹಾಪೌರರಿಗೆ ನೀಡಲಾದ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮೊದಲ ಬಾರಿಗೆ ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾಗುವದರ ಜೊತೆಗೆ, ಮೊದಲ ಪ್ರಯತ್ನದಲ್ಲಿ ಅತ್ಯಂತ ಜವಾಬ್ದಾರಿಯುತ ಮಹಾಪೌರ ಹುದ್ದೆ ಸಿಕ್ಕಿದೆ. ಜವಾಬ್ದಾರಿಗೆ ತಕ್ಕಂತೆ ಸರ್ವರ ಸಹಾಯ, ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವೆ ಎಂದು ಹೇಳಿದರು.

ಉಪಮಹಾಪೌರರಾಗಿ ಆಯ್ಕೆಯಾದ ಹನುಮಂತ ಕೊಂಗಾಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕೊಟ್ಟಿರುವ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ಬೆಳಗಾವಿ ನಗರದ ಅಭಿವೃದ್ಧಿಗೆ ನಾನೂ ಶ್ರಮಿಸುವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ಮಾತನಾಡಿ, ಬೆಳಗಾವಿ ಇತಿಹಾಸದಲ್ಲಿ ಮೊದಲ ಬಾರಿ ಇಬ್ಬರು ಕನ್ನಡಿಗರು ಪ್ರಥಮ ಪ್ರಜೆಗಳಾಗಿ ಆಯ್ಕೆಯಾದದ್ದು ಹರ್ಷ ತಂದಿದೆ. ನಗರದ ಸಮಗ್ರ ಸಮುದಾಯದಗಳ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಅವರು ಮಾಡಲೆಂಬ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಶಿಭೂಷಣ ಪಾಟೀಲ, ಬಿ. ಪಿ. ಜೇವಣಿ, ಶಿವಾನಂದ ನಾಯಕ, ಶಿವಾನಂದ ತಲ್ಲೂರ, ಎಂ.ವೈ. ಮೆಣಸಿನಕಾಯಿ, ಶ್ರೀದೇವಿ ನರಗುಂದ, ಮಹಾದೇವಿ ಅರಳಿ, ವಿಜಯ ಹುದಲಿಮಠ, ಬಸವರಾಜ ಬಿಜ್ಜರಗಿ, ಆನಂದ ಕರ್ಕಿ, ಸುನಿಲ ಸಾಣಿಕೊಪ್ಪ, ಶಂಕ್ರಪ್ಪ ಮೆಣಸಿಗಿ, ಲಕ್ಷ್ಮಿಕಾಂತ ಗುರವ, ಸುಶೀಲಾ ಗುರವ ಸೇರಿದಂತೆ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
ಆರಂಭದಲ್ಲಿ ಮಹಾದೇವಿ ಅರಳಿ ಸ್ವಾಗತ, ಸತೀಶ ಪಾಟೀಲ ಪರಿಚಯ, ಸಂಗಮೇಶ ಅರಳಿ ನಿರೂಪಿಸಿದರು. ಸುರೇಶ ನರಗುಂದ ವಂದಿಸಿದರು.
