ಹಾವೇರಿ:
ವರ್ಗ, ಜಾತಿರಹಿತ, ಲಿಂಗತಾರತಮ್ಯವಿಲ್ಲದ ಮಾನವೀಯತೆಯ ತಳಹದಿಯ ಮೇಲೆ ಸಮಸಮಾಜ ಕಟ್ಟಲು ಶ್ರಮಿಸಿದವರು ಬಸವಣ್ಣನವರು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹಾವೇರಿ ವಿಭಾಗದ ಸಾರಿಗೆ ಅಧಿಕಾರಿ ಅಶೋಕ ಪಾಟೀಲ ಹೇಳಿದರು.
ಹಾವೇರಿ ಘಟಕದಲ್ಲಿ ವಿಜೃಂಭಣೆಯಿಂದ ಆಚರಿಸಲಾದ ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಉತ್ಸವದಲ್ಲಿ ಮಾತನಾಡಿದರು. ಬಸವಾದಿ ಶಿವಶರಣರು ನೀಡಿದ ಸಂದೇಶಗಳು ಲೋಕಮಾನ್ಯವಾಗಿವೆ. ಬಸವಣ್ಣನವರು ನೀಡಿದ ಸಪ್ತಶೀಲಗಳು ಆದರ್ಶ ಜೀವನಕ್ಕೆ ಅಡಿಪಾಯವಾಗಿದ್ದು ಅವುಗಳ ಅನುಷ್ಠಾನ ಅತ್ಯವಶ್ಯಕವಾಗಿವೆ. ಎಲ್ಲರೂ ವಚನಗಳ ಅಧ್ಯಯನ ಮತ್ತು ಅದರ ಅಂಶಗಳ ಅನುಷ್ಠಾನಕ್ಕೆ ಕಾರ್ಯೋನ್ಮುಖರಾಗಬೇಕಾದ ಅನಿವಾರ್ಯತೆ ಇದೆ ಎಂದರು.
ಧಾರವಾಡದ ನ್ಯಾಯವಾದಿ ಕೆ .ಎಸ್. ಕೋರಿಶೆಟ್ಟರ ಮಾತನಾಡಿ, ಬಸವಣ್ಣನವರು ಸ್ತ್ರೀ ಸಮಾನತೆಯ ಹರಿಕಾರರು. ಬಸವಣ್ಣವರ ನಡೆ ನುಡಿ ಒಂದಾದ ತತ್ವಗಳು ಪ್ರಸ್ತುತ ವಿಶ್ವಮಾನ್ಯತೆಯನ್ನು ಪಡೆದಿದ್ದು, ಅವರ ಕಾಯಕ ದಾಸೋಹ ತತ್ವಗಳು ಅತ್ಯಂತ ಶ್ರೇಷ್ಠ ಕೊಡುಗೆಯಾಗಿದೆ.
ಕಾಯಕತತ್ವ ಅಕ್ಷರ ಸಹ ಸಾರಿಗೆ ಸಂಸ್ಥೆಯ ಕಾರ್ಮಿಕ, ಸಿಬ್ಬಂದಿ ವರ್ಗದವರಿಂದ ಸರ್ವಕಾಲಕ್ಕೂ ಸಾರ್ವಜನಿಕರಿಗೆ ಸಾರಿಗೆ ಸೇವೆಯನ್ನು ನೀಡುವುದರ ಮುಖಾಂತರ ಆಚರಣೆಯಾಗುತ್ತಿದೆ ಎಂದರು.

ನಿವೃತ್ತ ಸಿಬ್ಬಂದಿ ಮೇಲ್ವಿಚಾರಕ ಮಲ್ಲಿಕಾರ್ಜುನ ಹಿಂಚಿಗೇರಿ ಮಾತನಾಡಿ, ಬಸವಣ್ಣವರ ವಚನಗಳ ವಿಶ್ಲೇಷಣೆ ಮಾಡುವುದರ ಜೊತೆಗೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಕಾರ್ಮಿಕ ಸಂಘಟನೆಯ ಮುಖಂಡ ಮಂಜುನಾಥ ಅಂಗಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಘಟಕ ವ್ಯವಸ್ಥಾಪಕ ಪ್ರಶಾಂತ ಸಂಗ್ರೇಶಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಮಿಕ ಕಲ್ಯಾಣ ಅಧಿಕಾರಿ ಈರಪ್ಪ ಕಡ್ಲಿಮಟ್ಟಿ, ಸಂಚಾರ ನಿರೀಕ್ಷಕ ಟಿ.ಕೆ. ನದಾಫ, ಎಸ್. ಎಸ್. ಸೋಮನಾಳ, ಎಂ.ಎಸ್. ಪವಾರ, ಸಂತೋಷ ಪಟ್ಟಣಶೆಟ್ಟಿ, ವಿಜಯಕುಮಾರ, ಎಸ್. ಪಿ, ಗೊಲ್ಗೊಂಡ, ಎಚ್.ಎಸ್. ಗುಳೇದ, ಜಯವರ್ಧನ, ಅಭಿಷೇಕ, ಪಾರ್ವತಿ ಯತ್ನಳ್ಳಿ, ಗೀತಾಂಜಲಿ ದೇವಗೇರಿ, ಶೋಭಾ ದೇಟಿನ, ಕಾರ್ಮಿಕ ಸಂಘಟನೆಗಳ ಮುಖಂಡರು, ಕಾರ್ಮಿಕರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಪ್ರಸಾದ ದಾಸೋದ ವ್ಯವಸ್ಥೆ ಮಾಡಲಾಗಿತ್ತು.
