ಇಲಕಲ್ಲ:
ಇಲ್ಲಿನ ಬಸವ ಕೇಂದ್ರ, ವಿಜಯ ಮಹಾಂತೇಶ ತರುಣ ಸಂಘ, ಕದಳಿ ವೇದಿಕೆ, ಅಕ್ಕನ ಬಳಗ ಹಾಗೂ ಇತರ ಸಂಘಗಳ ಸಹಯೋಗದಲ್ಲಿ ಬಸವ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬಸವ ಜಯಂತೋತ್ಸವದ ಅಂಗವಾಗಿ ಬೆಳಿಗ್ಗೆ ಗುರುಮಹಾಂತ ಸ್ವಾಮೀಜಿಯವರ ಸಾನಿಧ್ಯದಲ್ಲಿ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಿವರುದ್ರಪ್ಪ ಗೊಂಗಡಶೆಟ್ಟಿ ಹಾಗೂ ನಗರದ ವಿವಿಧ ಸಂಘ ಸಂಸ್ಥೆಗಳ ಮುಖಂಡರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ನಂತರ ವಿಜಯಮಹಾಂತ ಮಠದಿಂದ ಆರಂಭವಾದ ಬಸವ ಭಾವಚಿತ್ರದ ಮೆರವಣಿಗೆ ಹಾಗೂ ಜನಜಾಗೃತಿ ಪಾದಯಾತ್ರೆಗೆ ಗುರುಮಹಾಂತ ಸ್ವಾಮೀಜಿ ಚಾಲನೆ ನೀಡಿ, ನೇತೃತ್ವ ವಹಿಸಿದರು. ಬಸವ ಕೇಂದ್ರದ ಅಧ್ಯಕ್ಷ ಶಿವಾನಂದ, ಜಿ.ಪಿ. ಪಾಟೀಲ, ಮಹಾಂತೇಶ ವಾಲಿ, ವಿಜಯಮಹಾಂತೇಶ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ಎಂ.ವಿ. ಪಾಟೀಲ, ಉಪಾಧ್ಯಕ್ಷ ಅರುಣ ಬಿಜ್ಜಳ, ಅಶೋಕ ಬಿಜ್ಜಳ, ಕಾರ್ಯದರ್ಶಿ ಗೌತಮ ಬಿಜ್ಜಳ, ಸಿ.ಎಸ್.ವಿ.ಎಂ. ಅಧ್ಯಕ್ಷ ಗುರುನಾಥ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಜನಜಾಗೃತಿ ಪಾದಯಾತ್ರೆಯಲ್ಲಿ ಸಾವಿರಾರು ಭಕ್ತಾದಿಗಳು, ಸಂಘ ಸಂಸ್ಥೆಗಳ ಮುಖಂಡರು, ಶಿಕ್ಷಕರು, ವಿದ್ಯಾರ್ಥಿಗಳು, ಯುವಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.
ಪಾದಯಾತ್ರೆಯಲ್ಲಿ ಬಸವಣ್ಣನವರ ವಚನಗಳನ್ನು ಪಠಿಸುತ್ತಾ, ಗಾಯನ ಮಾಡುತ್ತಾ ಸಾಗಿದರು. ಮಕ್ಕಳು ಬಸವಾದಿ ಶರಣರ ವೇಷಭೂಷಣ ಧರಿಸಿದ್ದು ವಿಶೇಷವಾಗಿತ್ತು.

ಪಾದಯಾತ್ರೆ ಬಸವಣ್ಣ ದೇವಸ್ಥಾನ ರಸ್ತೆ, ರಾಮಮಂದಿರ ರಸ್ತೆ, ಕೊಪ್ಪರ ಪೇಟೆ, ಬನ್ನಿಕಟ್ಟಿ, ಹಳೆ ಪೊಲೀಸ್ ಮೈದಾನ, ಮಹಾಂತೇಶ ಚಿತ್ರಮಂದಿರ ರಸ್ತೆ, ಸಾಲಪೇಟೆ, ಕಂಟೋನ್ಮೆಂಟ್, ಬಸ್ ನಿಲ್ದಾಣ, ಕಾಲೇಜು ರಸ್ತೆ ಮೂಲಕ ಬಸವೇಶ್ವರ ವೃತ್ತಕ್ಕೆ ತಲುಪಿತು. ಅಲ್ಲಿ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಲಾಯಿತು.
ಪಾದಯಾತ್ರೆಯಲ್ಲಿ ಭಾಗವಹಿಸಿದ ಭಕ್ತರಿಗೆ ಬಾಳೆಹಣ್ಣು, ಚಾಕೊಲೇಟ್, ಐಸ್ ಕ್ರೀಂ, ಮಜ್ಜಿಗೆ, ಮೊಸರು ಹಾಗೂ ತಂಪಾದ ಪಾನೀಯಗಳನ್ನು ವಿತರಿಸಲಾಯಿತು.
