ಬೆಳಗಾವಿ
ಕೆಎಲ್ಇ ವಿಶ್ವವಿದ್ಯಾಲಯ ವತಿಯಿಂದ ಭಾನುವಾರ 893ನೇ ಬಸವ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
JNMC ಆವರಣದಲ್ಲಿ ವಿಶ್ವವಿದ್ಯಾಲಯದ ಕನ್ನಡ ಬಳಗದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕುಲಪತಿ, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಸಾಂಸ್ಕೃತಿಕ ನಾಯಕ ಬಸವಣ್ಣನವರಿಗೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿ ಡಾ. ಸಂದೀಪ್ ಶ್ರೀವಾಸ್ತವ ಬಸವಣ್ಣವರ ವಚನಗಳನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು.

ಕುಲಸಚಿವ ಡಾ. ವಿ. ಎಂ. ಪಟ್ಟಣಶೆಟ್ಟಿ ಅವರು ಬಸವ ತತ್ವದಿಂದ ಇಂದಿನ ಪೀಳಿಗೆ ಅರ್ಥಪೂರ್ಣ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.
“ಜಾಗತಿಕ ಶಾಂತಿಗೆ ಬಸವ ತತ್ವಶಾಸ್ತ್ರವೇ ಪರಿಹಾರ” ಎಂಬ ವಿಷಯವನ್ನು ಪ್ರತಿಬಿಂಬಿಸುವ ಟ್ಯಾಬ್ಲೋ ವಾಹನದೊಂದಿಗೆ ನಡೆದ ಮೆರವಣಿಗೆ ನಗರದೆಲ್ಲೆಡೆ ಸಂಚರಿಸಿ ಲಿಂಗರಾಜ್ ಕಾಲೇಜು ಆವರಣದಲ್ಲಿ ಸಮಾಪ್ತಿಯಾಯಿತು.
ಈ ಕಾರ್ಯಕ್ರಮದಲ್ಲಿ ಎಲ್ಲಾ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಘಟಕಗಳ ಮುಖ್ಯಸ್ಥರು, ವಿಶ್ವವಿದ್ಯಾಲಯದ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕನ್ನಡ ಬಳಗದ ಪರವಾಗಿ ಡಾ. ಅವಿನಾಶ ಕವಿ ಅವರು ಸ್ವಾಗತಿಸಿದರು. ಎಂಬಿಬಿಎಸ್ ವಿದ್ಯಾರ್ಥಿ ಅಭಿಲಾಷ್ ಅವರು ವಿಶ್ವಗುರು ಬಸವಣ್ಣವರ ಜೀವನ ಮತ್ತು ಸಾಧನೆಗಳ ಕುರಿತು ಮಾತನಾಡಿದರು. ಕುಮಾರಿ ಅಮೂಲ್ಯ ಅವರು ಬಸವಣ್ಣವರ ವಚನಗಳನ್ನು ಹಾಡಿದರು. ಎಂಬಿಬಿಎಸ್ ವಿದ್ಯಾರ್ಥಿನಿ ಕುಮಾರಿ ಸೋನಾಲಿ ಅವರು ವಂದನೆ ಸಲ್ಲಿಸಿದರು.
