ದಾವಣಗೆರೆ :
ಇತ್ತೀಜೆಗೆ ವಿದ್ಯಾನಗರದ ಲಯನ್ಸ್ ಭವನದಲ್ಲಿ ಕದಳಿ ಮಹಿಳಾ ವೇದಿಕೆಯಿಂದ “ಅಕ್ಕನ ಅಸ್ಮಿತೆ” 180ನೇಯ ಕಮ್ಮಟ್ಟದಲ್ಲಿ ಅಕ್ಕ ಮಹಾದೇವಿ ಜಯಂತಿ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷರಾದ ನಿರ್ಮಲ ಶಿವಕುಮಾರ ವಹಿಸಿದ್ದರು.

ಲಿಂಗೈಕ್ಯ ಶರಣ ಮಾಗನೂರು ರಾಜಶೇಖರ ದತ್ತಿ ಕಾರ್ಯಕ್ರಮದಲ್ಲಿ ದತ್ತಿ ದಾನಿಗಳಾದ ಶರಣೆ ಸುಲೋಚನಾ ರಾಜಶೇಖರ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ಬಾಳೆ ಸಸಿಗೆ ನೀರೇರಿಯುವ ಮೂಲಕ ಉದ್ಘಾಟಿಸಿ, ನಂತರ ಮಾತನಾಡಿ ಕದಳಿ ವೇದಿಕೆಯ ಅಚ್ಚುಕಟ್ಟಾದ ಕೆಲಸಗಳಿಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶರಣ ಕೆ. ಬಿ. ಪರಮೇಶ್ವರಪ್ಪ ಅವರು ತಮ್ಮ ಆಶಯ ನುಡಿಗಳಲ್ಲಿ ಕದಳಿ ವೇದಿಕೆಗೆ ತಮ್ಮ ಬೆಂಬಲ ಹಾಗೂ ಸಹಕಾರ ಎಂದಿಗೂ ಇರುತ್ತದೆ ಎಂದರು.
ವೇದಿಕೆಯಿಂದ ವಿಶಿಷ್ಟ ಶೈಲಿಯಲ್ಲಿ ಅಕ್ಕನ ಜಯಂತಿಯನ್ನು ಆಚರಿಸಲಾಯಿತು. ಏಳು ಜನ ಅನುಭಾವಿಗಳಿಂದ ಅಕ್ಕನ ಜೀವನ ವೃತ್ತಾಂತವನ್ನು ಹಂತ ಹಂತವಾಗಿ ಅಕ್ಕನ ವಚನಗಳೊಂದಿಗೆ ನಿರೂಪಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಸುಮತಿ ಜಯಪ್ಪನವರು, ಅಕ್ಕಮಹಾದೇವಿಯ ಜೀವನ ವೃತ್ತಾಂತ ತಿಳಿಸುವ ಕಾರ್ಯಕ್ರಮವನ್ನು ನಿರ್ವಹಿಸಿದರು.
ಬಾಪುಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಜಿ.ಎಸ್. ಸುನಿತಾ ಅವರು ಅಕ್ಕನ ಜನನ ಹಾಗೂ ಬಾಲ್ಯವನ್ನು ವಿವರಿಸಿದರು. ಅಕ್ಕನಿಗೆ ಬಾಲ್ಯದಲ್ಲಿ ಅವಳ ತಂದೆ, ತಾಯಿ ಹಾಗೂ ಗುರುಗಳಿಂದ ಯಾವ ರೀತಿಯ ಸಂಸ್ಕಾರ ದೊರೆಯಿತು ಎಂದು ತಿಳಿಸಿದರು.
ಭರಮಪ್ಪ ಮೈಸೂರು ನಿವೃತ್ತ ಶಿಕ್ಷಣಾಧಿಕಾರಿಗಳು ಹಾಗೂ ದಾವಣಗೆರೆ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ, ಅವರು ಅಕ್ಕನ ಎರಡು ರೀತಿಯ ವೈವಾಹಿಕ ಬಂಧನಗಳನ್ನು ವಿವರಿಸಿದರು. ಚೆನ್ನಮಲ್ಲಿಕಾರ್ಜನನೊಂದಿಗೆ ಪಾರಮಾರ್ಥಿಕ ಸಂಬಂದ ಹಾಗೂ ಕೌಶಿಕ ಮಹಾರಾಜನೊಂದಿಗೆ ಲೌಕಿಕ ಬಂಧನದಲ್ಲಿ ಅಕ್ಕ ಹೇಗೆ ಸಿಲುಕಿದಳು ಎಂದು ವಿವರಿಸಿದರು.
ಜೆ. ಎಚ್. ಪಟೇಲ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶೈಲಾ ಎನ್. ಶೆಟ್ಟಿ ಅವರು ಸಂಸಾರದ ಭವ ಬಂಧನವನ್ನು ತೊರೆದು ವೈರಾಗ್ಯದೆಡೆಗೆ ವಾಲುವ ಅಕ್ಕನಿಗೆ ಒದಗಿ ಬಂದ ಸನ್ನಿವೇಶಗಳನ್ನು ಕುರಿತು ವಿವರಿಸಿದರು.
ಎ. ಆರ್. ಜಿ. ಕಾಲೇಜಿನ ನಿವೃತ್ತ ಪ್ರಾದ್ಯಾಪಕರಾದ ಮಲ್ಲಿಕಾರ್ಜುನ ಜವಳಿ ಅವರು, ಅಕ್ಕಮಹಾದೇವಿ ವೈರಾಗ್ಯ ನಿಧಿಯಾಗಿ ಅನುಭವ ಮಂಟಪ ಪ್ರವೇಶಿಸುವ ಸಂದರ್ಭ ಹಾಗೂ ಇತರ ಶರಣರೊಂದಿಗೆ ಅವಳ ಚಿಂತನೆಗಳನ್ನು ಮಂಡಿಸುವ ಪರಿಯನ್ನು ಅಕ್ಕನ ವಚನಗಳೊಂದಿಗೆ ವಿವರಿಸಿದರು.
ಟೀಮ್ ಅಕಾಡೆಮಿಯ ಕನ್ನಡ ಪ್ರಾಧ್ಯಾಪಕರಾದ ಬಸವರಾಜ ಹನುಮಲಿ ಅವರು ಅಕ್ಕ ಆತ್ಮ ಸಾಕ್ಷಾತ್ಕಾರಕ್ಕಾಗಿ ಕದಳಿಯಡೆಗೆ ಪಯಣಿಸಿದ ಬಗೆಯನ್ನೂ ವಿವರಿಸಿದರು.
ಶ್ರೀಮತಿ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಅನಿತಾ ದೊಡ್ಡಗೌಡರ ಅವರು ಅಕ್ಕನ ವಚನಗಳನ್ನು ಪ್ರಸ್ತಾಪಿಸುತ್ತಾ, ಅಕ್ಕನ ವಚನಗಳು ಸಮಾಜಕ್ಕೆ ಏನು ಸಂದೇಶ ಕೊಡುತ್ತವೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಅಕ್ಕ ಮಹಾದೇವಿ ನಾಟಕದ ಆಯ್ದ ದೃಶ್ಯಗಳನ್ನು ಶರಣೆ ಯಶಾ ದಿನೇಶ ಹಾಗೂ ಸುಮತಿ ಜಯಪ್ಪ ಅವರಿಂದ ಅಭಿನಯಿಸಲ್ಪಟ್ಟಿತು.
ಅಕ್ಕಮಹಾದೇವಿ ಜಯಂತಿಯ ಅಂಗವಾಗಿ ಅಕ್ಕಮಹಾದೇವಿ ಕುರಿತು ಲಿಖಿತ ಪ್ರಶ್ನೋತ್ತರ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಮೊದಲ ಬಹುಮಾನ ಬಿ. ಜಿ. ಗೀತಾ, ಎರಡನೆಯ ಬಹುಮಾನ ಮಧುಮತಿ, ಮೂರನೆಯದು ಪ್ರೇಮ ಮಂಜುನಾಥ ಹಾಗೂ ಸಮಾಧಾನಕರ ಬಹುಮಾನವನ್ನು ಕುಸುಮಾ ಲೋಕೇಶ್ ಅವರು ಪಡೆದರು.
ಕಾರ್ಯಕ್ರಮದಲ್ಲಿ ನಿರ್ಮಲಾ ಶಿವಕುಮಾರ ಸರ್ವರನ್ನು ಸ್ವಾಗತಿಸಿದರು. ತಾಲೂಕು ಅಧ್ಯಕ್ಷರಾದ ವಿಜಯ ಚಂದ್ರಶೇಖರ ದತ್ತಿ ಹಾಗೂ ದತ್ತಿ ದಾನಿಗಳನ್ನು ಪರಿಚಯಿಸಿದರು. ಕದಳಿ ಸದಸ್ಯರಿಂದ ವಚನ ಪ್ರಾರ್ಥನೆ ನೆರವೇರಿತು. ಜಿಲ್ಲಾ ಖಜಾಂಚಿಯಾದ ಶರಣೆ ಪೂರ್ಣಿಮ ಪ್ರಸನ್ನಕುಮಾರ ಬಹುಮಾನ ವಿತರಣೆ ಮತ್ತು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಜಿಲ್ಲಾ ಸಹಕಾರ್ಯದರ್ಶಿ ನಂದಿನಿ ಗಂಗಾಧರ ವಂದಿಸಿದರು.

ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ರತ್ನಾ ಸಿ. ರೆಡ್ಡಿ, ವಸಂತ ಕೆ. ಆರ್, ವಿಜಯಲಕ್ಷ್ಮಿ ಬಸವರಾಜ, ವಾಣಿ ರಾಜ್, ಲಕ್ಷ್ಮೀ ಮಲ್ಲಿಕಾರ್ಜುನ, ನಿಕಟಪೂರ್ವ ಅಧ್ಯಕ್ಷರಾದ ಮಮತಾ ನಾಗರಾಜ, ಪೂರ್ವಾಧ್ಯಕ್ಷರಾದ ಸುಜಾತಾ ರವೀಂದ್ರ, ಪಲ್ಲವಿ ಪಾಟೀಲ, ವಿನೋದ ಅಜಗಣ್ಣವರ ಹಾಗೂ ಸಲಹಾ ಸಮಿತಿಯವರಾದ ಪಂಕಜ ದಯಾನಂದ, ಸರೋಜ ಚಂದ್ರಶೇಖರ ಹಾಗೂ ಎಂ. ಎಂ. ಕಾಲೇಜಿನ ಪ್ರಾಧ್ಯಾಪಕರಾದ ನಾಗರಾಜ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
