ಅಮ್ಮಂದಿರ ದಿನದ ವಿಶೇಷ
ಭಾಲ್ಕಿ:
ಪುಳಿಯೊಗರೆ, ಚಿತ್ರಾನ್ನ, ಕೇಸರಿಬಾತ್, ಉಪ್ಪಿಟ್ಟು ಹೀಗೆ ಬಗೆ ಬಗೆಯ ಭೋಜನದೊಂದಿಗೆ ನೂರಾರು ತಾಯಂದಿರು ಮಕ್ಕಳಿಗೆ ಕೈ ತುತ್ತು ತಿನ್ನಿಸಿ ವಿನೂತನವಾಗಿ ತಾಯಂದಿರ ದಿನ ಆಚರಿಸಿಕೊಂಡರು.
ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಸಮುಚ್ಛಯದಲ್ಲಿ ಭಾನುವಾರ ತಾಯಂದಿರ ದಿನ ಕಾರ್ಯಕ್ರಮದಲ್ಲಿ ಇಂತಹ ವೈಶಿಷ್ಟ್ಯತೆ ಮನೆ ಮಾಡಿತ್ತು.
ಕಾರ್ಯಕ್ರಮದಲ್ಲಿ ತಾಯಂದಿರು ಮಕ್ಕಳೊಂದಿಗೆ ಬೆರೆತು ಖುಷಿ ಪಟ್ಟರು.
ತಾವೇ ಮನೆಯಿಂದ ತಯಾರಿಸಿ ತಂದ ಬಗೆಬಗೆಯ ಊಟ, ತಿನಿಸುಗಳನ್ನು ಡಬ್ಬಿಯಲ್ಲಿ ತಂದು ಇಡೀ ಮಕ್ಕಳ ಗುಂಪುಗಳಿಗೆ ನೀಡಿದರು. ತಮ್ಮ ಮಕ್ಕಳೊಂದಿಗೆ ಅವರ ಸ್ನೇಹಿತರಿಗೂ ಊಟ ಬಡಿಸಿದ್ದು ವಿಶೇಷವಾಗಿತ್ತು.
ಈ ವಿನೂತನ ಕಾರ್ಯಕ್ರಮಕ್ಕೆ ಕದಳಿ ವಸತಿ ನಿಲಯದ ಮೇಲ್ವಿಚಾರಕಿ ಪ್ರೇಮಾ, ವಾರ್ಡನ್ ಸಪ್ನಾ, ಲಕ್ಷ್ಮಿ, ಮಹಾದೇವಿ, ಕಾವ್ಯ, ಮಹಾದೇವಿ, ದೀಕ್ಷಾ, ನಾಗರತ್ನ, ಭಾಗೀರಥಿ, ಲಕ್ಷ್ಮಿಬಾಯಿ, ಅಕ್ಷಯಾ, ಸುಜಾತಾ, ಪಿಯುಶಾ, ಅಶ್ವಿನಿ ಸೇರಿದಂತೆ ಮುಂತಾದವರು ಸಾಕ್ಷಿಯಾದರು.
ಬಾಲ್ಯದಲ್ಲಿ ತಾಯಿ ನೀಡುವ ಕೈತುತ್ತು ಕೇವಲ ಆಹಾರವಲ್ಲ. ಅದರಲ್ಲಿ ಪ್ರೀತಿ, ವಾತ್ಸಲ್ಯ ಹಾಗೂ ಅಂತಃಕರಣ, ಆನಂದ, ಸದ್ಭಾವನೆ ಇರುತ್ತದೆ. ಆದರೆ ಇಂದಿನ ಎಐ ಯುಗದಲ್ಲಿ ಅದೆಲ್ಲವೂ ಮರೆಯಾಗುತ್ತಿದೆ ಎನ್ನುವ ಆತಂಕ ಕಾಡುತ್ತಿದೆ.
ಅದರ ನಡುವೆಯು ಗುರುಕುಲದಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಕೈತುತ್ತು ತಿನ್ನಿಸಿ ಪ್ರೀತಿ, ವಾತ್ಸಲ್ಯ ಮೆರೆದಿರುವುದು ಹೆಮ್ಮೆ ತರಿಸಿದೆ. ಇಂದಿನ ದಿನಮಾನಗಳಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ಉಣಬಡಿಸಿ ಸಮಾಜಕ್ಕೆ ಆರೋಗ್ಯವಂತ ಮಕ್ಕಳನ್ನು ನೀಡಬೇಕು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದ್ದಾರೆ.
