ಶಹಾಪುರ
‘ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ರಾಜ್ಯ ಸರ್ಕಾರವು ಬಸವಾದಿ ಶರಣರ ಹಿಂದೂ ಸಮಾವೇಶ ನಡೆಸುತ್ತಿರುವ ಬಗ್ಗೆ ಮೌನವಾಗಿ ಇರುವುದು ಸರಿಯಲ್ಲ. ಸರ್ಕಾರವೇ ಮುಂದೆ ನಿಂತು ಸಮಾವೇಶಕ್ಕೆ ತಡೆಯೊಡ್ಡಬೇಕು’ ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಪೂಜ್ಯ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ನಗರದಲ್ಲಿ ಶುಕ್ರವಾರ ಜರುಗಿದ ಬಸವಾದಿ ಶರಣರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ಬಸವಾದಿ ಶರಣರ ಹಿಂದೂ ಸಮಾವೇಶ’ದ ಮುಖೇನ ಬಸವಣ್ಣನ ವಚನಗಳ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಸೂಫಿ ಸಂತರ ನಾಡಿನಲ್ಲಿ ಮನುವಾದಿ, ದುಷ್ಟ ಶಕ್ತಿಗಳು ಲಗ್ಗೆ ಇಟ್ಟು ಯುವಕರಲ್ಲಿ ದ್ವೇಷ, ಮತೀಯ ಹಾಗೂ ಕೋಮುಭಾವನೆ ಬಿತ್ತುವುದನ್ನು ನಿಲ್ಲಿಸಲಿ’ ಎಂದರು.
‘ಹಿಂದೂ ನಾವೆಲ್ಲರೂ ಒಂದು ಎನ್ನುವ ಮಠಾಧೀಶರು ತಮ್ಮ ಮಠಗಳಲ್ಲಿನ ಸಹಪಂಕ್ತಿ ಭೋಜನ, ಗುಡಿ ಗುಂಡಾರಗಳಲ್ಲಿ ಇವತ್ತಿಗೂ ಶೋಷಿತರಿಗೆ ಮುಕ್ತ ಪ್ರವೇಶ ಕೊಡುತ್ತಿಲ್ಲ. ಕೃಷಿ ಬಗ್ಗೆ ಪಾಠ ಮಾಡುವ ಕನ್ನೇರಿ ಸ್ವಾಮಿ ಸ್ವಾಮಿನಾಥನ್ ಆಯೋಗ ವರದಿ ಜಾರಿ ಆಗದೇ ಇರುವುದರ ಬಗ್ಗೆ, ರೈತ ವಿರೋಧಿ ಕಾಯ್ದೆಗಳ ಕುರಿತು ಮಾತನಾಡುವುದಿಲ್ಲ. ಅಂತಹವರು ಸಮಾವೇಶಕ್ಕೆ ಬಂದು ಕೃಷಿ ಬಗ್ಗೆ ಏನು ಮಾತನಾಡುವರು’ ಎಂದು ಕೇಳಿದರು.
