ದಾವಣಗೆರೆ
ಕದಳಿ ಮಹಿಳಾ ವೇದಿಕೆಯ ಜಿಲ್ಲಾ ಘಟಕದಿಂದ 182ನೇ ಕದಳಿ ಕಮ್ಮಟದಲ್ಲಿ ಶರಣ ಕುರುಬ ಗೊಲ್ಲಾಳೇಶ್ವರ ಹಾಗೂ ಅಂಬಿಗರ ಚೌಡಯ್ಯ ಅವರ ಸಂಸ್ಮರಣೆ, ಪರಿಸರ ದಿನಾಚರಣೆ, ಹಾಗೂ ದತ್ತಿ ಕಾರ್ಯಕ್ರಮವನ್ನು ನಗರದ ವನಿತಾ ಸಮಾಜದ ಆಶ್ರಯ ಹಿರಿಯ ವನಿತೆಯರ ಆನಂದ ಧಾಮದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾವಣಗೆರೆ ಕದಳಿ ಮಹಿಳಾ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ನಿರ್ಮಲಾ ಶಿವಕುಮಾರ್ ವಹಿಸಿದ್ದರು.

ದತ್ತಿ ಲಿಂಗೈಕ್ಯ ಶರಣೆ ಸಿದ್ಧಮ್ಮ ಮತ್ತು ಲಿಂಗೈಕ್ಯ ಶರಣ ಚೆನ್ನಬಸಪ್ಪ, ದತ್ತಿ ಲಿಂಗೈಕ್ಯ ಡಾ॥ ಶಶಿಕಲಾ ದತ್ತಿ ಹಾಗೂ ಲಿಂಗೈಕ್ಯ ಶರಣೆ ಗೌರಮ್ಮ, ಶರಣ ವೀರಭದ್ರಯ್ಯ ಹಂಜಗಿಮಠ ಅವರ ದತ್ತಿ ಕಾರ್ಯಕ್ರಮದಲ್ಲಿ ಅನುಭಾವ ನೀಡಿದ ಕದಳಿ ವೇದಿಕೆಯ ಪೂರ್ವಾಧ್ಯಕ್ಷರಾದ ವಿನೋದ ಅಜಗಣ್ಣ ಅವರು, ಆನಂದಧಾಮದ ಹಿರಿಯರನ್ನು ಉದ್ಧೇಶಿಸಿ, ಬಸವಾದಿ ಶರಣರ ವಚನಗಳು ಜೀವನ ಪಾಠಗಳ ನಿಧಿಗಳಾಗಿವೆ ಎಂದು ಹೇಳಿದರು.
ಹನ್ನೆರಡನೇಯ ಶತಮಾನದ ಶಿವಶರಣರಾದ ಬಸವಣ್ಣ, ಮೊಳಿಗೆ ಮಾರಯ್ಯ, ಅಂಬಿಗರ ಚೌಡಯ್ಯ ಅವರ ವಚನಗಳನ್ನು ಉದಾಹರಿಸಿ ಎಲ್ಲರ ಬದುಕಿನಲ್ಲೂ ಒಂದು ನೋವಿನ ಕತೆ ಅಡಗಿದ್ದು, ಅದನ್ನು ಭೇದಿಸಿ ನಮ್ಮ ಜೀವನದ ಕ್ಷಣಗಳನ್ನು ಸಂತೋಷದಿಂದ ಕಳೆಯಬೇಕೆಂದರು.

ಮುಖ್ಯ ಅತಿಥಿಗಳಾಗಿ ಆನಂದ ಧಾಮದ ಅಧ್ಯಕ್ಷರಾದ ಉಷಾ ರಂಗನಾಥ ಅವರು ಬಸವಾದಿ ಶಿವಶರಣರನ್ನು ಹೆಸರಿಸಿ ಇಂತಹ ಮಹಾನ್ ಶರಣರ ವಿಚಾರಗಳನ್ನು ಪ್ರಸಾರ ಮಾಡುತ್ತಿರುವ ಕದಳಿ ವೇದಿಕೆಯನ್ನು ಪ್ರಶಂಶಿಸಿದರು.
ದತ್ತಿ ದಾನಿಗಳ ಪರವಾಗಿ ಶಾಂಭವಿ ಹಾಗೂ ರಾಜೇಶ್ವರಿ ಎಂ.ಎಸ್. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಾಂಭವಿ ಅವರು ತಾವು ಹಿರಿಯರ ಹೆಸರಿನಲ್ಲಿ ಶರಣ ಸಾಹಿತ್ಯ ಪರಿಷತ್ತಿಗೆ ಎಷ್ಟೋ ವರ್ಷಗಳ ಹಿಂದೆ ದತ್ತಿ ಹಣವನ್ನು ಇಟ್ಟಿದ್ದೆವು. ಪ್ರತಿವರ್ಷ ತಪ್ಪದೇ ಕದಳಿ ವೇದಿಕೆಯ ಮೂಲಕ ಅರ್ಥಪೂರ್ಣವಾದ ಕಾರ್ಯಕ್ರಮ ನೀಡುತ್ತಿರುವುದನ್ನು ಶ್ಲಾಘಿಸಿದರು.
ದಾವಣಗೆರೆ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ. ಬಿ. ಪರಮೇಶ್ವರಪ್ಪ ಅವರು ಮಾತನಾಡಿ, ಈ ಕಾರ್ಯಕ್ರಮವನ್ನು ಹಿರಿಯರಿಗೋಸ್ಕರ ಹಮ್ಮಿಕೊಂಡಿದ್ದು, ನಮ್ಮ ತಾಯಿಯನ್ನು ಈ ಹಿರಿಯರಲ್ಲಿ ಕಂಡು ಸಂತೋಷ ಪಡುತ್ತಿದ್ದೇನೆ ಎಂದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ದಾವಣಗೆರೆ ಕದಳಿ ವೇದಿಕೆಯ ಜಿಲ್ಲಾಧ್ಯಕ್ಷರಾದ ನಿರ್ಮಲಾ ಶಿವಕುಮಾರ್ ಅವರು, ಜೀವನದಲ್ಲಿ ಏಳು ಬೀಳುಗಳು ಬರುತ್ತವೆ, ಅದಕ್ಕೆ ಎದೆಗುಂದದೆ ಜೀವನವನ್ನು ಧೈರ್ಯವಾಗಿ ಎದುರಿಸಬೇಕೆಂದರು.
ಪರಿಸರ ದಿನಾಚರಣೆ ಅಂಗವಾಗಿ ತಾವು ನೀಡಿದ ಹೂವಿನ ಗಿಡವು ಹೂ ಬಿಟ್ಟು ನಿಮ್ಮೆಲರ ಮನಸ್ಸನ್ನು ಸಂತೋಷ ಪಡಿಸಲಿ ಎಂದು ಆಶಿಸುತ್ತೇನೆಂದರು.
ಕದಳಿ ವೇದಿಕೆಯ ಸದಸ್ಯರಾದ ಆಶಾ ಪವನ್ ವಚನ ಗಾಯನವನ್ನು ಹೇಳಿಕೊಟ್ಟರು. ವೇದಿಕೆಯ ಸದಸ್ಯರಿಂದ ವಚನ ಪ್ರಾರ್ಥನೆ ನೆರವೇರಿತು. ನಂದಿನಿ ಗಂಗಾಧರ್ ಸ್ವಾಗತಿಸಿದರು. ಚಂದ್ರಿಕಾ ಮಂಜುನಾಥ ದತ್ತಿ ಹಾಗೂ ದತ್ತಿ ದಾನಿಗಳನ್ನು ಪರಿಚಯಿಸಿದರು. ಪೂರ್ಣಿಮಾ ಪ್ರಸನ್ನಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ತಾಲುಕು ಅಧ್ಯಕ್ಷರಾದಂತಹ ವಿಜಯ ಚಂದ್ರಶೇಖರ, ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಮಮತಾ ನಾಗರಾಜ, ಪೂರ್ವಾಧ್ಯಕ್ಷರಾದ ಸುಜಾತಾ ರವೀಂದ್ರ, ಪಲ್ಲವಿ ಪಟೇಲ್, ಆಶಾ ಮಹಾಬಲೇಶ್ವರಗೌಡ, ಗಾಯತ್ರಿ ವಸ್ತ್ರದ್, ಸಮಿತಿ ಸದಸ್ಯರಾದ ವಸಂತ ಕೆ. ಆರ್, ವಾಣಿ ರಾಜ್, ಬಸವ ಬಳಗದ ಶಿವಬಸಮ್ಮ, ಹಿರಿಯ ತಾಯಂದಿರು ಹಾಗೂ ಸಿಬ್ಪಂದಿ ವರ್ಗದವರು ಉಪಸ್ಥಿತರಿದ್ದರು.
