ಕನ್ನಡ ಮತ್ತು ಬೆಳಗಾವಿಗಾಗಿ ಪ್ರಾಣತ್ಯಾಗಕ್ಕೂ ಸಿದ್ಧ: ಡಾ. ಅಲ್ಲಮಪ್ರಭು ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಳಗಾವಿ

ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರ ನಿರ್ಣಯ ಅಂಗೀಕರಿಸಬೇಕು ಎಂದು ಒತ್ತಾಯಿಸಿ ಕನ್ನಡ ಹೋರಾಟಗಾರರು ನಡೆಸುತ್ತಿರುವ ಹೋರಾಟ ದಿನೇದಿನೆ ಕಾವು ಪಡೆದುಕೊಳ್ಳುತ್ತಿದೆ.

ಬೆಳಗಾವಿ ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಗಡಿ ವಿವಾದದಲ್ಲಿ ಮಹಾಜನ್ ವರದಿಯೇ ಅಂತಿಮ ಎಂಬ ನಿರ್ಣಯವನ್ನು ಮಹಾನಗರ ಪಾಲಿಕೆಯಲ್ಲಿ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಹೋರಾಡುತ್ತಿವೆ. ಈ ವಿಷಯದ ಕುರಿತು ನಾಗನೂರು ರುದ್ರಾಕ್ಷಿಮಠದ ಪೀಠಾಧಿಕಾರಿ ಪೂಜ್ಯ ಅಲ್ಲಮಪ್ರಭು ಸ್ವಾಮೀಜಿ ಅವರನ್ನು ಸೋಮವಾರ ಭೇಟಿಯಾಗಿ ಬೆಂಬಲ ಕೋರಿದವು.

ಕನ್ನಡ ಹಾಗೂ ಬೆಳಗಾವಿಗಾಗಿ ಎಂತಹ ಹೋರಾಟಕ್ಕೂ ಸಿದ್ದ ಅಷ್ಟೇ ಅಲ್ಲ ಪ್ರಾಣತ್ಯಾಗಕ್ಕೂ ತಾವು ಸಿದ್ಧವಿರುವುದಾಗಿ ಸಭೆಯಲ್ಲಿ ಡಾ. ಅಲ್ಲಮಪ್ರಭು ಸ್ವಾಮೀಜಿ ಘೋಷಿಸಿದರು.

‘ಗಡಿಯಲ್ಲಿ ನಾಡು–ನುಡಿ ಹಿತಾಸಕ್ತಿಗೆ ಧಕ್ಕೆ ಬಂದಾಗಲೆಲ್ಲ, ನಮ್ಮ ಮಠ ಹೋರಾಡುತ್ತಲೇ ಬಂದಿದೆ. ಈಗ ಪಾಲಿಕೆಯಲ್ಲಿ ರಾಜ್ಯದ ಪರ ನಿರ್ಣಯ ಅಂಗೀಕಾರಕ್ಕಾಗಿ ಎಂಥದ್ದೇ ಹೋರಾಟಕ್ಕೂ ಸಿದ್ಧವಿದ್ದೇವೆ’ ಎಂದು ಹೇಳಿದರು.

“ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಸೂರ್ಯ ಚಂದ್ರರು ಇರುವವರೆಗೂ ಯಾರು ಅಲ್ಲಗಳೆಯರಾಗದು. ಆದರೆ, ಬೆಳಗಾವಿ ನಮ್ಮದು ಎಂದು ಸಾಬೀತುಪಡಿಸುವ ಪರಿಸ್ಥಿತಿ ಎದುರಾಗಿದ್ದು ದುರದೃಷ್ಟಕರ.

ಪಾಲಿಕೆಯಲ್ಲಿ ಕನ್ನಡಿಗರೇ ಮೇಯರ್‌ ಮತ್ತು ಉಪಮೇಯರ್‌ ಇದ್ದರೂ, ನಿರ್ಣಯ ಅಂಗೀಕಾರ ಮಾಡಲು ಹಿಂದೇಟು ಹಾಕುತ್ತಿರುವುದು ಏಕೆ ಎಂದು ತಿಳಿಯುತ್ತಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕಾಗಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಾ ಇರುವ ಹೋರಾಟಕ್ಕೆ ಶ್ರೀಮಠದ ಸಂಪೂರ್ಣ ಬೆಂಬಲವಿದೆ ಎಂದರು.

“ರಾಜಕೀಯ ಸ್ವಾರ್ಥಕ್ಕಾಗಿ ಪಾಲಿಕೆಯಲ್ಲಿ ಈ ನಿರ್ಣಯ ಅಂಗೀಕಾರಕ್ಕೆ ಯಾರೂ ಮೀನಮೇಷ ಎಣಿಸಬಾರದು. ಸುಪ್ರೀಂಕೋರ್ಟ್‌ ನೆಪ ಹೇಳುವುದು ಬೇಡ. ತಕ್ಷಣವೇ ಬೇಡಿಕೆ ಈಡೇರಿಸಬೇಕು. ಈ ಕುರಿತು ಮೇಯರ್‌ ಪ್ರೀತಿ ಕಾಮಕರ, ಉಪಮೇಯರ್‌ ಹನುಮಂತ ಕೊಂಗಾಲಿ ಅವರೊಂದಿಗೆ ಚರ್ಚಿಸುತ್ತೇನೆ,” ಎಂದು ತಿಳಿಸಿದರು.

‘ಇಂದು ಬೆಳಗಾವಿ ಕರ್ನಾಟಕದಲ್ಲಿ ಉಳಿದಿದೆ ಎಂದರೆ, ಅದಕ್ಕೆ ನಾಗನೂರು ರುದ್ರಾಕ್ಷಿಮಠದ ಲಿಂ.ಶಿವಬಸವ ಸ್ವಾಮೀಜಿ ಕೊಡುಗೆಯೂ ಇದೆ. ಮರಾಠಿ ಭಾಷಿಕ ಗೂಂಡಾಗಳಿಂದ ಸಾಕಷ್ಟು ನೋವುಂಡು, ಬೆಳಗಾವಿಯನ್ನು ಕರ್ನಾಟಕದಲ್ಲೇ ಉಳಿಸಲು ಅವರು ಪ್ರಯತ್ನಿಸಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರು, ಕನ್ನಡದ ಪರವಾಗಿ ನಡೆದ ಹೋರಾಟಗಳು ಮತ್ತು ಮಹಾನಗರ ಪಾಲಿಕೆಯಲ್ಲಿ ಈ ಸಂಬಂಧ ಕೈಗೊಳ್ಳಲಾದ ನಡಾವಳಿಗಳ ಕುರಿತು ಮತ್ತು ಪ್ರಸ್ತುತ ಮಹಾನಗರ ಪಾಲಿಕೆ ನಡೆದುಕೊಳ್ಳುತ್ತಿರುವ ವಿರೋಧಿ ನಿಲುವನ್ನು ತೀವ್ರವಾಗಿ ಖಂಡಿಸಿದರು.

ಕನ್ನಡದ ಪರವಾಗಿ ಗೊತ್ತುವಳಿ ಕೈಗೊಳ್ಳುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.

ಕನ್ನಡ ಹೋರಾಟಗಾರರಾದ ಮಹಾದೇವ ತಳವಾರ, ಶ್ರೀನಿವಾಸ ತಾಳೂಕರ, ಬಲರಾಮ್ ಮಾಸೇನಟ್ಟಿ, ವಾಜೀದ್ ಹಿರೇಕೋಡಿ, ಮಹಾನಗರ ಪಾಲಿಕೆ ಸದಸ್ಯರಾದ ರಮೇಶ ಸೊಂಟಕ್ಕಿ, ದಿನೇಶ ನಾಶಿಪುಡಿ, ಸಾಹಿತಿ ನೀಲಗಂಗಾ ಚರಂತಿಮಠ ಸೇರಿದಂತೆ 20 ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *