ತುಮಕೂರು:
ಬಸವಾದಿ ಶರಣರ ಚಿಂತನೆ, ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು. ಮುಖ್ಯವಾಗಿರುವ ಈ ಕೆಲಸ ಎಲ್ಲರೂ ಮಾಡಬೇಕಾಗಿದೆ ಎಂದು ಸಿದ್ಧಗಂಗಾ ಮಠದ ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಸಲಹೆ ಮಾಡಿದರು.

ನಗರದಲ್ಲಿ ಭಾನುವಾರ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ, ವಚನ ಸಾಹಿತ್ಯ ವಿಚಾರ ಸಂಕಿರಣ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ವಚನ ಸಾಹಿತ್ಯದ ಬಗ್ಗೆ ಅರಿವು ಮೂಡಿಸಲು ವಿಚಾರ ಸಂಕಿರಣ ಮಾಡುತ್ತಿರುವುದು ಉತ್ತಮ ಬೆಳವಣಿಗೆ, ಶರಣರ ಬದುಕು, ಸಂಸ್ಕೃತಿ ಕುರಿತು ಯುವ ಸಮೂಹಕ್ಕೆ ತಿಳಿಸಬೇಕು ಎಂದರು.

ಪ್ರೊ. ಶಂಕರಗೌಡ ಮ. ಬಿರಾದಾರ ಅವರಿಗೆ ‘ಶರಣಶ್ರೀ ಪ್ರಶಸ್ತಿ, ಅಮೃತಾ ವೀರಭದ್ರಯ್ಯ ಅವರಿಗೆ ‘ಕದಳಿಶ್ರೀ’, ರುದ್ರಮೂರ್ತಿ ಎಲೆರಾಂಪುರ ಅವರಿಗೆ ‘ವಚನಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಲೇಖಕ ಬ್ಯಾಡನೂರು ಚೆನ್ನಬಸವಣ್ಣ, ವಿಜಯಮ್ಮ, ಬಿ. ನಂಜುಂಡಸ್ವಾಮಿ, ಪೌಳಿ ಶಂಕರಾನಂದಪ್ಪ, ಜಯಂತಿ ಚಿತ್ತರಂಜನ, ರಾಗಿಣಿ ಅವರನ್ನು ಗೌರವಿಸಲಾಯಿತು.

‘ಸಾಂಸ್ಕೃತಿಕ ನಾಯಕ ಬಸವಣ್ಣ’, ‘ವಚನಕಾರ್ತಿಯರ ಕೊಡುಗೆ’ ಕುರಿತು ವಿಚಾರ ಗೋಷ್ಠಿಗಳು ನಡೆದವು.

ಶಾಸಕ ಜಿ.ಬಿ. ಜ್ಯೋತಿಗಣೇಶ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಸಿ. ಸೋಮಶೇಖರ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಿ. ಸಿದ್ದರಾಮಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ವೀರಶೈವ ಸಮಾಜದ ಅಧ್ಯಕ್ಷ ಕೋರಿ ಮಂಜುನಾಥ, ಕದಳಿ ಮಹಿಳಾ ವೇದಿಕೆ ರಾಜ್ಯ ಸಂಚಾಲಕಿ ಸುಶೀಲಾ ಸೋಮಶೇಖರ, ಜಿಲ್ಲಾ ಅಧ್ಯಕ್ಷೆ ಶಿವಲಿಂಗಮ್ಮ, ಮುಖಂಡರಾದ ಎಸ್.ಪಿ. ಚಿದಾನಂದ, ಬ್ಯಾಡನೂರು ಚನ್ನಬಸವಣ್ಣ, ವಿಜಯಮ್ಮ, ಬಿ. ನಂಜುಂಡಸ್ವಾಮಿ ಮೊದಲಾದವರು ಪಾಲ್ಗೊಂಡಿದ್ದರು.

ಶರಣ ಧರ್ಮದಂತಹ ಶ್ರೇಷ್ಠ ಧರ್ಮ ಧರೆಯ ಮೇಲೆ ಇನ್ನೊಂದು ಇಲ್ಲ. ಆದ್ಯ ವಚನಕಾರ ಜೇಡರ ದಾಸಮಪ್ಪ ಆದಿಯಾಗಿ ಬಸವಾದಿ ಶರಣರು ಅಚ್ಚುಗನ್ನಡದಲ್ಲಿ ವಚನಗಳನ್ನು ರಚಿಸಿ ಶರಣ ಧರ್ಮದ ಸಂವಿಧಾನವನ್ನು ಸರ್ವ ಸಾಮಾನ್ಯರು ಸಹಿತ ಅಧ್ಯಯನ ಮಾಡಿ ಅರಿತುಕೊಳ್ಳಬಹುದು. ಆದರೆ ಅದರ ಅರಿವು ಆಚರಣೆ ಪ್ರಚಾರ ಪ್ರಸಾರದ ಕೊರತೆಯಿಂದ ಯುವ ಪೀಳಿಗೆ ವಂಚಿತರಾಗಿದ್ದಾರೆ. ಸಿದ್ಧಗಂಗಾ ಮಠದ ಪೂಜ್ಯರು ತಿಳಿಸಿರುವ ಮಾತುಗಳನ್ನು ಪ್ರತಿಯೊಬ್ಬ ಶರಣ ಧರ್ಮೀಯ ಭಕ್ತಿ ಪ್ರೀತಿಯಿಂದ ಪಾಲಿಸಬೇಕಾಗಿದೆ.