ಆನೇಕಲ್ಲ:
ಯುವಜನರು ಶರಣರ ವಚನಗಳ ಸಾರ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಿನ ಸಮಾಜದಲ್ಲಿದ್ದ ಜಾತೀಯತೆ, ಮೌಡ್ಯತೆಯನ್ನು ತೊಲಗಿಸಲು ಶರಣರು ವಚನಗಳನ್ನು ರಚಿಸಿ ಜಾಗೃತಿ ಮೂಡಿಸಿದ್ದಾರೆ. ಆ ಜಾಗೃತಿ ಎಲ್ಲರಲ್ಲಿ ಬರಲಿ’ ಎಂದು ನಿವೃತ್ತ ಪ್ರಾಧ್ಯಾಪಕ ಎ.ಆರ್. ಶಿವಕುಮಾರ್ ಅವರು ಹೇಳಿದರು.
ಈಚೆಗೆ ಪಟ್ಟಣದ ಶರಣ ಸಾಹಿತ್ಯ ಪರಿಷತ್ನಿಂದ ವಚನ ದಿನಾಚರಣೆ ಮತ್ತು ವಿದ್ಯಾರ್ಥಿಗಳಿಗೆ ವಚನ ನೃತ್ಯ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.


‘ವಚನಗಳು ಅನುಭಾವ ಸಾಹಿತ್ಯವಾಗಿದ್ದು, ಶರಣರು ತಮ್ಮ ಅನುಭವದ ಸಾರಗಳನ್ನು ವಚನಗಳ ಮೂಲಕ ಜನರಿಗೆ ಕೊಡಮಾಡಿದ್ದಾರೆ. ಕರ್ಮ ಸಿದ್ಧಾಂತದ ವಿರುದ್ಧ ಕಾಯಕ ಸಿದ್ಧಾಂತಗಳನ್ನು ವಚನಗಳಲ್ಲಿ ಪ್ರತಿಪಾದಿಸಿದ್ದಾರೆ.

ಸಮಾನತೆ, ಕಾಯಕ, ದಾಸೋಹ ಸೇರಿದಂತೆ ವಿವಿಧ ಮಾನವೀಯ ಮೌಲ್ಯಗಳನ್ನು ಶರಣರ ವಚನಗಳಲ್ಲಿ ಕಾಣಬಹುದಾಗಿದೆ ಎಂದು ನುಡಿದರು.
‘ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ವಚನಗಳು ಪ್ರಮುಖ ಪಾತ್ರ ವಹಿಸುತ್ತವೆ. 850 ವರ್ಷಗಳ ಹಿಂದೆಯೇ ಶರಣರು ಜಾಗತಿಕ ಶ್ರೇಷ್ಠ ಸಾಹಿತ್ಯ ನೀಡಿದ್ದಾರೆ. ಮಕ್ಕಳಲ್ಲಿ ವಚನ ಸಾಹಿತ್ಯವನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಪರಿಷತ್ ಕಾರ್ಯನಿರ್ವಹಿಸಲಿದೆ’ ಎಂದು ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಎಂ. ಶಿವಣ್ಣ ತಿಳಿಸಿದರು.

ಕಾರ್ಯಕ್ರಮದಲ್ಲಿ ಅಕ್ಷರ ಕಾಲೇಜಿನ ಪ್ರಾಚಾರ್ಯರಾದ ವೀಣಾ ನಾಗರಾಜು, ಮುಖಂಡರಾದ ಎಚ್.ಎಸ್. ನಂಜಪ್ಪ, ಚಿಕ್ಕರೇವಣ್ಣ ಅರಳ್ಳಪ್ಪನವರ, ಹಾರಗದ್ದೆ ಚಂದ್ರಶೇಖರ, ಕನಕಮ್ಮ, ಮನುಕುಮಾರಿ ಮತ್ತಿತರರು ಉಪಸ್ಥಿತರಿದ್ದರು.

