ಚಿಂಚೋಳಿ:
ತಾಲೂಕಿನ ಚಿಮ್ಮನಚೋಡ ಗ್ರಾಮದ ಶ್ರೀ ಬಸವ ಪರುಷಕಟ್ಟೆ ಸಮಿತಿ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಪ್ರತಿ ರವಿವಾರ ಆಯೋಜಿಸಲಾಗುತ್ತಿರುವ ವಚನ ಚಿಂತನಗೋಷ್ಠಿ ಕಾರ್ಯಕ್ರಮದಲ್ಲಿ ಚಿಂತಕ ಹಾಗೂ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಅವರು ವಿಶೇಷ ಉಪನ್ಯಾಸ ನೀಡಿದರು.
ಬಸವಾದಿ ಶರಣರ ವಚನಗಳನ್ನು ವಿವರಿಸಿದ ಅವರು, ವಚನಗಳಲ್ಲಿರುವ ಜೀವನ ಮೌಲ್ಯಗಳು ಹಾಗೂ ಜೀವನದ ನಶ್ವರತೆಯ ಅರಿವು ಕುರಿತು ಜನರಿಗೆ ಮನಮುಟ್ಟುವಂತೆ ತಿಳಿಸಿದರು. ತಮ್ಮ ಹಾಸ್ಯ ಚಟಾಕಿಗಳ ಮೂಲಕ ಗಂಭೀರ ವಿಚಾರಗಳನ್ನು ಸರಳವಾಗಿ ವಿವರಿಸಿ, ಕಾರ್ಯಕ್ರಮದಲ್ಲಿ ನಗೆಗಡಲನ್ನು ಹರಿಸಿದರು.
ಇಂದಿನ ಯುವಜನತೆ ನಶೆ ಹಾಗೂ ಮಾದಕ ವಸ್ತುಗಳ ಬಳಕೆಯಿಂದ ದೂರವಿದ್ದು, ಉತ್ತಮ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಆರೋಗ್ಯಕರ ಹಾಗೂ ಸಾರ್ಥಕ ಬದುಕು ನಡೆಸಬೇಕು ಎಂದು ಅವರು ಕರೆ ನೀಡಿದರು. ಹಾಸ್ಯದೊಂದಿಗೆ ಸಾಮಾಜಿಕ ಸಂದೇಶವನ್ನು ನೀಡಿದ ಅವರ ಉಪನ್ಯಾಸವು ಸಭಿಕರ ಗಮನ ಸೆಳೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭುಲಿಂಗ ಮಠ ವಹಿಸಿದ್ದರು. ಜ್ಯೋತಿ ಸಂಗೊಂಡ ನಿರೂಪಿಸಿದರು. ಅಶ್ವಿನಿ ಸೀತಾಳಗೆರೆ ಸ್ವಾಗತಿಸಿದರು. ರಾಧಿಕಾ ಸಜ್ಜನ ವಂದಿಸಿದರು.
ಕಾರ್ಯಕ್ರಮದಲ್ಲಿ ಜಗನ್ನಾಥ ರೆಡ್ಡಿ ರಂಜೋಳ, ರಾಜಶೇಖರ ದುಬಲಗುಂಡಿ, ವಿಶ್ವನಾಥ ಬುರುಕಪಳ್ಳಿ, ಆನಂದ ಬೆಡಸೂರು, ಶಿವಮೂರ್ತಿ ಜಾಡರ, ನಾಗಶೆಟ್ಟಿ ಮಾಲಿಪಾಟೀಲ ಐನಾಪುರ, ಪ್ರದೀಪ ಕಲ್ಲೂರು ಚೆನ್ನೂರು, ವಿಶ್ವನಾಥ ಉಚ್ಚೇದ ಕೊಟಗ, ಮಹೇಶಕುಮಾರ ಕೊಡಂಗಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
