ಸಾಣೇಹಳ್ಳಿ:
ಖ್ಯಾತ ರಂಗಕರ್ಮಿ ಚಿದಂಬರರಾವ್ ಜಂಬೆ ಅವರ ನಿಧನಕ್ಕೆ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಶೋಕ ವ್ಯಕ್ತಪಡಿಸಿದ್ದಾರೆ.
ಜಂಬೆ ಅವರು ಅಪರೂಪದ ರಂಗನಿರ್ದೇಶಕರು. ಒಂದು ರಂಗಸಂಸ್ಥೆಯನ್ನು ಹೇಗೆ ಕಟ್ಟಿ ಬೆಳೆಸಬೇಕೆಂಬ ಕನಸು ಕಂಡು ಅದನ್ನು ನನಸು ಮಾಡಿದವರು. ನೀನಾಸಂ ಸಂಸ್ಥೆಯಲ್ಲಿ ಪ್ರಾಚಾರ್ಯರಾಗಿ ಅವಿಸ್ಮರಣೀಯ ರಂಗಸೇವೆ ಸಲ್ಲಿಸಿದವರು. ಅವರ ವಿದ್ಯಾರ್ಥಿಗಳು ಇಂದು ನಾಡಿನ ನಾನಾ ಭಾಗಗಳಲ್ಲಿ ರಂಗಸೇವೆ ಸಲ್ಲಿಸುತ್ತಿದ್ದಾರೆ.
ನಮ್ಮ ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆಯ ಮೊದಲ ಪ್ರಾಚಾರ್ಯರಾಗಿ ಅದಕ್ಕೊಂದು ಭದ್ರ ಬುನಾದಿ ಹಾಕಿದವರು. ಕಳೆದ ತಿಂಗಳು ಅವರ ಮನೆಯಲ್ಲೇ ಭೇಟಿಯಾದಾಗ ರಂಗಶಾಲೆ ಹೇಗೆ ನಡೆಯುತ್ತದೆ? ನನ್ನ ಆರೋಗ್ಯ ಸ್ವಲ್ಪ ಚೇತರಿಸಿಕೊಂಡ ಮೇಲೆ ಸಾಣೇಹಳ್ಳಿಗೆ ಬರುವೆ ಎಂದು ಲವಲವಿಕೆಯಿಂದ ಮಾತನಾಡಿದ್ದರು. ನಾವು ಕೊಟ್ಟ ಬಾಳೆಹಣ್ಣನ್ನು ಪ್ರಸಾದವೆಂದು ಸ್ವೀಕರಿಸಿ ಸೇವನೆ ಮಾಡಿದ್ದರು.

ಕ್ಯಾನ್ಸರಿನಿಂದ ಅವರು ಚೇತರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮನೆಯವರಿಗೆಲ್ಲ ಗೊತ್ತಿದ್ದರೂ ಅದು ಅವರ ಗಮನಕ್ಕೆ ಬಾರದಂತೆ ಪ್ರೀತಿಯಿಂದ ತಾಯಿ, ಮಗ ಆರೈಕೆ ಮಾಡುತ್ತಿದ್ದರು.
ಅವರ ಅಗಲುವಿಕೆಯಿಂದ ಮನೆತನಕ್ಕೆ ಮಾತ್ರವಲ್ಲ; ರಂಗಭೂಮಿಗೂ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇವೆ. ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಮನೆತನದ ಸದಸ್ಯರಿಗೆ ಬಸವಾದಿ ಶರಣರು ಕರುಣಿಸಲಿ ಎಂದು ಸ್ವಾಮಿಗಳು ತಮ್ಮ ಸಂತಾಪ ಸಂದೇಶದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
