ನರಗುಂದ:
ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯ ಗುಣಗಳಿಗೆ ಹೆಸರಾಗಿದ್ದ ವೀರಯ್ಯ ಸಾಲಿಮಠ ಅವರ ಬದುಕು ಇಂದಿನ ಶಿಕ್ಷಕರಿಗೆ ಪ್ರೇರಣೆಯಾಗಿದೆ.
ಶಿಕ್ಷಕ ವೃತ್ತಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸಿದ ಸಾಲಿಮಠ ಅವರು ಶ್ರೇಷ್ಠ ಸಮಾಜಪರ ಚಿಂತಕರಾಗಿ ಹಲವಾರು ರ್ಷಗಳ ಕಾಲ ಶಿಕ್ಷಕರಾಗಿ, ಡಯಟ್ ಪ್ರಾಚಾರ್ಯರಾಗಿ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೆಯಾದ ಕೊಡುಗೆಯನ್ನು ನೀಡಿದ್ದಾರೆ.

ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳನ್ನು ಅಕ್ಷರಶಃ ಮೈಗೂಡಿಸಿಕೊಂಡಿದ್ದ ಅವರು ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಆ ಕಾಲದಲ್ಲಿ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದರು ಎಂದು ಶಿರೋಳ ತೋಂಟದಾರ್ಯ ಮಠದ ವ್ಯವಸ್ಥಾಪಕರಾದ ಎಸ್.ವ್ಹಿ. ಕುಪಸ್ತ ಅವರು ಬಣ್ಣಿಸಿದರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಶ್ರೀ ದೊರೆಸ್ವಾಮಿ ವಿವಿದೋದ್ಧೇಶ ಟ್ರಸ್ಟ್ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ರಾಂತ ಪ್ರಾಚಾರ್ಯ ಲಿಂಗೈಕ್ಯ ವೀರಯ್ಯ ಸಾಲಿಮಠ ಹಾಗೂ ನಿವೃತ್ತ ಶಿಕ್ಷಕ ಶಿವಪುತ್ರಪ್ಪ ಕಂಬಳಿ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೋಧನೆಯನ್ನೆ ತಮ್ಮ ಉಸಿರಾಗಿಸಿಕೊಂಡಿದ್ದ ವಿರಯ್ಯನವರು ಶಿಕ್ಷಕ ವೃತ್ತಿ ಆರಂಭದಿಂದ ತಮ್ಮ ಬದುಕಿನ ಕೊನೆ ಕ್ಷಣದವರೆಗೂ ಮಕ್ಕಳ ಶಿಕ್ಷಣಕ್ಕೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ತ್ಯಾಗ ಜೀವಿಗಳು ಅವರ ಸ್ಮರಣೆ ಮಾಡುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ. ಸ್ನೇಹಜೀವಿಗಳಾಗಿದ್ದ ಅವರು ಸರ್ವರನ್ನೂ ಅತ್ಯಂತ ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು. ಹೀಗಾಗಿ ಗ್ರಾಮಸ್ಥರೆಲ್ಲರಿಗೂ ವೀರಯ್ಯನವರೆಂದರೆ ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದರು ಎಂದು ಹೇಳಿದರು.
ಸಾನಿದ್ಯ ವಹಿಸಿದ್ದ ಪೂಜ್ಯ ಶಾಂತಲಿಂಗ ಶ್ರೀಗಳು, ತಮ್ಮ ಆಶೀರ್ವಚನದ ಮೂಲಕ ಲಿಂಗೈಕ್ಯ ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಹತ್ತಿರವಾಗಿದ್ದ ವೀರಯ್ಯನವರು ಶಿರೋಳದ ಗುರುಬಸವ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ಅದರ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ.
ಪ್ರಾಮಾಣಿಕತೆ ಎನ್ನುವ ಪದಕ್ಕೆ ಅನ್ವರ್ಥಕವಾಗಿ ಬಾಳಿ ಬದುಕಿದ ಅವರು ಇಂದಿನ ಯುವ ಸಮುದಾಯಕ್ಕೆ ಆದರ್ಶಪ್ರಾಯವಾಗಿದ್ದಾರೆ. ನಿವೃತ್ತಿ ನಂತರ ವಿಶ್ರಾಂತ ಜೀವನವನ್ನು ಬಯಸದೆ ಸಾಮಾಜಿಕವಾಗಿ ಸದಾ ಚಿಂತನೆಯನ್ನು ಮಾಡುತ್ತ ಸಮಾಜಕ್ಕಾಗಿಯೇ ತಮ್ಮ ಜೀವನವನ್ನು ಸೆವೆಸಿದ ವೀರಯ್ಯನವರ ಉದಾತ್ತ ಜೀವನ ಎಲ್ಲರಿಗೂ ಮಾದರಿಯಾದುದು ಎಂದು ಹೇಳಿದರು.

ವೇದಿಕೆ ಮೇಲೆ ನಿವೃತ್ತ ಶಿಕ್ಷಕ ಬಿ. ಎಮ್. ಬೆಳಹಾರ, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಪಿ.ಎಸ್. ಅಣ್ಣಿಗೇರಿ, ಪುನಿತಪ್ಪ ಸಾಂಬ್ರಾಣಿ, ಬಿ.ಎಮ್. ಗೊಜನೂರ, ಬಸಲಿಂಗಯ್ಯ ಇಂಗಳಹಳ್ಳಿಮಠ, ಬೀಮಸೇನ ಪವಾರ, ಲಿಂಗಯ್ಯ ಸಾಲಿಮಠ, ಮಹಾಂತೇಶ ಸಾಲಿಮಠ, ಬಿ. ಎಸ್. ಸಾಲಿಮಠ, ಚನ್ನಯ್ಯ ಸಾಲಿಮಠ, ವಿಶ್ವನಾಥ ಕಂಬಳಿ, ಕಲಾವಿದರಾದ ಪ್ರಕಾಶ ಚಂದನ್ನವರ ಪ್ರಮುಖರು ಉಪಸ್ಥಿತರಿದ್ದರು.
ಪ್ರೊ. ಆರ್. ಬಿ. ಚಿನಿವಾಲರ ಕಾರ್ಯಕ್ರಮ ನಿರ್ವಹಿಸಿದರು. ಮಹಾಂತೇಶ ಹಿರೇಮಠ ಸ್ವಾಗತಿಸಿದರು. ಕೊನೆಯಲ್ಲಿ ಪ್ರೊ. ಆರ್. ಬಿ. ಚಿನಿವಾಲರ ಶರಣು ಸಮರ್ಪಿಸಿದರು.
