ಗದಗ:
ಕರ್ನಾಟಕದ ಹೆಮ್ಮೆಯ ನಟ ಪದ್ಮಭೂಷಣ ಶ್ರೀ ಅನಂತನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾಗಿರುವ ‘ದಾದಾಸಾಹೇಬ್ ಫಾಲ್ಕೆ’ ಪುರಸ್ಕಾರ ಪ್ರಾಪ್ತವಾಗಿರುವುದು ಕನ್ನಡಿಗರಿಗೆ ಅತ್ಯಂತ ಸಂತೋಷವನ್ನುಂಟುಮಾಡಿದೆ ಎಂದು ಡಂಬಳ-ಗದಗ ಜಗದ್ಗುರು ತೋಂಟದಾರ್ಯಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ವರನಟ ಡಾ. ರಾಜಕುಮಾರ ಅವರ ನಂತರ ಈ ಪ್ರಶಸ್ತಿಗೆ ಭಾಜನರಾದ ಇವರು ನಾಡು-ನುಡಿಗೆ ಸಲ್ಲಿಸಿದ ಸೇವೆ ಅಪೂರ್ವವಾದುದು. ಮುನ್ನೂರಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಟಿಸಿದ ಹಿರಿಮೆ ಅವರದು. ಹಿರಿಯ ನಟ ಅನಂತನಾಗ ಅವರು ನಟಿಸಿರುವ ಹತ್ತು ಹಲವು ಚಲನಚಿತ್ರಗಳಿಗೂ ಈ ಮೊದಲು ಅನೇಕ ಪ್ರಶಸ್ತಿಗಳು ಬಂದಿವೆ.
ಪದ್ಮಭೂಷಣ, ಅತ್ಯುತ್ತಮ ನಟ ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳಿಂದ ವಿಭೂಷಿತರಾದ ಅವರಿಗೆ ಕರ್ನಾಟಕಕ್ಕೆ ರಾಷ್ಟ್ರಮಟ್ಟದ ಗೌರವ ತಂದುಕೊಟ್ಟಿರುವುದಕ್ಕಾಗಿ ಸಮಸ್ತ ಕನ್ನಡಿಗರ ಅಭಿನಂದನೆಗಳು ಸಲ್ಲುತ್ತವೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಪದ್ಮಭೂಷಣ ಶ್ರೀ ಅನಂತನಾಗ ಅವರು ಅಭಿಜಾತ ಪ್ರತಿಭೆ. ತಾವು ನಟಿಸಿದ ಮುನ್ನೂರಕ್ಕೂ ಅಧಿಕ ಚಲನಚಿತ್ರಗಳ ಪಾತ್ರಗಳಿಗೆ ಜೀವ ತುಂಬಿದ ಅಪರೂಪದ ಕಲಾವಿದರಾಗಿದ್ದಾರೆ. ಸರಳ-ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ ಅವರು ಪ್ರಬುದ್ಧ ಕಲಾವಿದರೆನಿಸಿದ್ದಾರೆ.
ಬಹುಮುಖ ಪ್ರತಿಭೆಯ, ಶ್ರೇಷ್ಠ ಕಲಾವಿದರಾಗಿರುವ ಅನಂತನಾಗ ಅವರು ಇನ್ನೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗುವ ಮೂಲಕ ನಮ್ಮ ನಾಡಿನ ಗೌರವವನ್ನು ಹೆಚ್ಚಿಸುವಂತಾಗಲಿ ಎಂದು ಶ್ರೀಗಳು ಹಾರೈಸಿದ್ದಾರೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6
