ರಾಯಚೂರು:
ದೇಶದ ಕೃಷಿ ಸಂಸ್ಕೃತಿ ಹಾಗೂ ಸರ್ವಜನಾಂಗದ ಸಮಾನತೆಯ ದೃಷ್ಟಿಕೋನವನ್ನು ಇಟ್ಟುಕೊಂಡು ಶರಣರು ರಚಿಸಿದ ವಚನ ಸಾಹಿತ್ಯ ಇಡೀ ಭೂಮಂಡಲ ಜನರ ಸರ್ವೋದಯಕ್ಕಾಗಿ ಎಂಬುದನ್ನು ನಾವು ಅರಿಯಬೇಕೆಂದು ಶರಣತತ್ವ ಚಿಂತಕಿ ಕೆ. ನೀಲಾ ಹೇಳಿದರು.
ಬಸವ ಕೇಂದ್ರದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಮೂಲ್ಯ ಶರಣ ಸಾಹಿತ್ಯವನ್ನು ಅಳಿಸಿಹಾಕಲು ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸುತ್ತಲೇ ಬಂದಿರುವುದು ನಮಗೆಲ್ಲ ತಿಳಿದ ವಿಷಯ.
ಈಗ ಕನ್ನೇರಿ ಸ್ವಾಮಿಗಳನ್ನು ಮುಂದಿಟ್ಟುಕೊಂಡು ವಚನ ಸಾಹಿತ್ಯ ಮತ್ತು ಶರಣರ ಚರಿತ್ರೆಯನ್ನು ಅಳಿಸಿಹಾಕಲು ಹೊರಟಿರುವ ಸಂಘ ಪರಿವಾರದವರ ಕುತಂತ್ರವನ್ನು ಇಡೀ ದೇಶವೇ ಗಮನಿಸುತ್ತಿದೆ ಎಂದರು.

ಇದಲ್ಲದೇ 2027ರಲ್ಲಿ ಬಸವ ಕಲ್ಯಾಣದಲ್ಲಿ ಸಂಘ ಪರಿವಾರದವರು ‘ಬಸವ ಭಾರತ ಉತ್ಸವ’ವನ್ನು ಆಯೋಜಿಸಲು ನಿರ್ಧರಿಸಿದ್ದಾರೆ.
ಅವರ ಹುನ್ನಾರದ ವಿರುದ್ಧ, ಶರಣ ಸಾಹಿತ್ಯದ ಉಳಿವಿಗಾಗಿ ತನು ಮನ ಧನದಿಂದ ಹೋರಾಡುವದು ಅನಿವಾರ್ಯವೆಂದರು.
ಇದೇ ಸಂದರ್ಭದಲ್ಲಿ ನೀಲಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಸವ ಕೇಂದ್ರದ ಸಂಸ್ಥಾಪಕರಲ್ಲೊಬ್ಬರಾದ ಚೆನ್ನಯ್ಯ ಸ್ವಾಮಿಗಳು ಲಿಂಗೈಕ್ಯರಾದ ಪ್ರಯುಕ್ತ ಅವರ ಆತ್ಮಕ್ಕೆ ಶಾಂತಿಕೋರಿ ಶ್ರದ್ಧಾಂಜಲಿ ಸಲ್ಲಿಸಿ, ಮೌನಚರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಹರವಿ ನಾಗನಗೌಡ, ಚನ್ನಬಸವ ಇಂಜನಿಯರ್, ನಾಗೇಶ್ವರಪ್ಪ, ಡಾ. ಸರ್ವಮಂಗಳ ಸಕ್ರಿ, ಸುಮಂಗಲ ಹಿರೇಮಠ, ಜೆ ಬಸವರಾಜ, ಸಿ.ಬಿ. ಪಾಟೀಲ, ಶಂಕರಗೌಡ ಹರವಿ, ಅನ್ನಪೂರ್ಣ ಹರವಿ, ಪಾರ್ವತಿ ಪಾಟೀಲ, ಡಾ. ಪ್ರಿಯಾಂಕಾ ಗದ್ವಾಲ್, ಬಸವರಾಜ ಕುರುಗೋಡ, ಮಲ್ಲಿಕಾರ್ಜುನ ಗುರುಮನಿ ಮುಂತಾದವರು ಉಪಸ್ಥಿತರಿದ್ದರು.
