ಭಾಲ್ಕಿ:
ಶ್ರೀ ಚನ್ನಬಸವೇಶ್ವರ ಗುರುಕುಲ ಕರಡ್ಯಾಳದಲ್ಲಿ ಗುರುಕುಲ ಸೌರಭ ಸಮಾರಂಭ ನಡೆಯಿತು.
ಸಮಾರಂಭದ ಸಾನಿಧ್ಯ ವಹಿಸಿ ಡಾ. ಈಶ್ವರಚಂದ್ರ ವಿದ್ಯಾಸಾಗರ ಅವರು ಆಶೀರ್ವಚನ ಮಾತುಗಳನ್ನಾಡುತ್ತಾ, ತಂದೆ-ತಾಯಿಗಳು ಪ್ರೀತಿ, ತ್ಯಾಗ ಮತ್ತು ಬದುಕಿನ ಮೌಲ್ಯಗಳ ಜೀವಂತ ವಿಶ್ವವಿದ್ಯಾಲಯವಿದ್ದಂತೆ. ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಡುವ ಅವರ ತ್ಯಾಗಕ್ಕೆ ಜಗತ್ತಿನಲ್ಲಿ ಯಾವುದೂ ಸಾಟಿಯಿಲ್ಲ.
ವಿದ್ಯಾರ್ಥಿಗಳು ಜೀವನದಲ್ಲಿ ತಂದೆ ತಾಯಿಯರನ್ನು ಗೌರವಿಸಬೇಕು, ಅವರ ಆಜ್ಞೆಯನ್ನು ಪಾಲಿಸಬೇಕು, ಅವರ ಕನಸುಗಳನ್ನು ಈಡೇರಿಸಬೇಕು ಎಂದು ತಮ್ಮ ಜೀವನದಲ್ಲಿ ನಡೆದ ಒಂದು ಘಟನೆಯನ್ನು ತಿಳಿಸುತ್ತ ಹೇಳಿದರು.
ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ, ವಿಶ್ರಾಂತ ಕುಲಪತಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಅಮರಕಂಟಕ ಮಧ್ಯಪ್ರದೇಶದ ಪ್ರೊ. ತೇಜಸ್ವಿ ಕಟ್ಟಿಮನಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಈ ಒಂದು ಗುರುಕುಲದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಬಹಳಷ್ಟು ಪುಣ್ಯವಂತರು ಎಂದರು.
ಇಲ್ಲಿ ಅಪ್ಪ ಅವ್ವ ಎರಡು ಆಗಿರುವ ಪೂಜ್ಯರು ನಿಮಗೆ ಸಿಕ್ಕಿರುವುದು ನಿಮ್ಮೆಲ್ಲರ ಸೌಭಾಗ್ಯ, ಪೂಜ್ಯರು ಗಡಿಭಾಗದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗಾಗಿ ಸಂಸ್ಕಾರಯುತ ಶಿಕ್ಷಣ ಸಂಸ್ಥೆ ನಡೆಸುತ್ತಿರುವುದು ಈ ಭಾಗದ ಅಹೋಭಾಗ್ಯ.
ಇಲ್ಲಿ ಕಲಿತ ಮಕ್ಕಳು ಇಂದು ದೊಡ್ಡ ದೊಡ್ಡ ಹುದ್ದೆಗಳನ್ನು ಮಾಡುತ್ತ ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಪೂಜ್ಯರು ಮಾಡುತ್ತಿರುವ ಶೈಕ್ಷಣಿಕ ಸೇವೆ ಅಮೋಘವಾಗಿದೆ.
ವಿದ್ಯಾರ್ಥಿಗಳು ದೊಡ್ಡವರಿಗೆ ಗೌರವ, ಪ್ರಾಣಿಗಳಿಗೆ ದಯೆ, ಹಸಿದವರಿಗೆ ಅನ್ನ, ಅರಿವೇ, ಹೆಣ್ಣು ಮಕ್ಕಳಿಗೆ ಗೌರವ, ಪರಸ್ತ್ರೀಯರಲ್ಲಿ ಅಕ್ಕ ತಂಗಿಯ ಭಾವ ಹೊಂದಬೇಕು.
ಅನ್ನ ಎಷ್ಟು ಬೇಕು ಅಷ್ಟೇ ತೆಗೆದುಕೊಳ್ಳಬೇಕು. ಇವತ್ತಿನ ಕಾಯಕ ಇವತ್ತೆ ಮುಗಿಸುವುದು, ಇವೆಲ್ಲವೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪೂಜ್ಯರು ಇಲ್ಲಿ ಶಾಲೆ ನಡೆಸುತ್ತಿಲ್ಲ ಬದಲಾಗಿ ದೇಶ ಕಟ್ಟುವವರನ್ನು ತಯಾರಿಸುತ್ತಿದ್ದಾರೆ.

ಯಾವುದೇ ಕೆಲಸ ಚಿಕ್ಕದೆಂದು ಭಾವಿಸಬಾರದು. ಬಸವಣ್ಣನವರು ಕಾಯಕವೇ ಕೈಲಾಸ ಎಂಬ ಸಂದೇಶವನ್ನು ಸಾರಿದ್ದಾರೆ. ನಾವೆಲ್ಲರೂ ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು. ಇಲ್ಲಿಗೆ ಬಂದು ನನ್ನ ಹೃದಯ ತುಂಬಿ ಬಂದಿದೆ ಎಂದು ಕಟ್ಟಿಮನಿ ನುಡಿದರು.
ಕಾರ್ಯಕ್ರಮದಲ್ಲಿ ಸಿ. ಬಿ. ಕಾಲೇಜಿನ ಉಪನ್ಯಾಸಕ ಮಂಜು ಮಾರುತಿ ಉಪಸ್ಥಿತರಿದ್ದರು.
ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಬಸವರಾಜ ಮೊಳಕೇರಿ ಸ್ವಾಗತಿಸಿದರು. ಲಕ್ಷ್ಮಣ ಮೇತ್ರೆ ನಿರೂಪಿಸಿದರು. ಸೃಷ್ಟಿ ಬಾಬು ವಚನ ಗಾಯನ ನಡೆಸಿಕೊಟ್ಟರು. ಉಪಪ್ರಾಚಾರ್ಯ ಸಿದ್ರಾಮ ಗೊಗ್ಗಾ ವಂದಿಸಿದರು.
