ಜಿಲ್ಲೆಯಲ್ಲಿ ಹೊಸದಾಗಿ ಶುರುವಾಗಿರುವ ‘ಅನುಭವ ಮಂಟಪ ಬಳಗ’ದ ಕಾರ್ಯಕ್ರಮ
ದಾವಣಗೆರೆ:
ಇಷ್ಟಲಿಂಗ ಬಸವಣ್ಣನವರ ಸಂಶೋಧನೆ. ಅವರು ಸ್ತ್ರೀಯರಿಗೆ, ಶೂದ್ರರಿಗೆ, ಅಸ್ಪೃಶ್ಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಲು ಮಾಡಿದ ಸಂಶೋಧನೆ ಎಂದು ಶರಣ ಸಾಹಿತಿ ಶಿವಪ್ರಸಾದ ಕರ್ಜಗಿ ಅವರು ತಿಳಿಸಿದರು.
ಅನುಭವ ಮಂಟಪ ಬಳಗದ ವತಿಯಿಂದ ಗೋಪನಾಳ ಗ್ರಾಮದಲ್ಲಿ ನಡೆದ ಶರಣರ ಸಂಜೆ ಕಾರ್ಯಕ್ರಮದಲ್ಲಿ ಅನುಭಾವ ನೀಡಿದರು.
ಮುಂದುವರೆದು ಮಾತನಾಡಿದ ಅವರು, ಮುಖ ನೋಡಿಕೊಳ್ಳಲು ಕನ್ನಡಿ ಹೇಗೆ ಇದೆಯೋ ಅದೇ ರೀತಿ ನಮ್ಮ ಮನಸ್ಸಿನ ಕೊಳಕನ್ನು ತೆಗೆದುಹಾಕಲು ಇಷ್ಟಲಿಂಗ ಇದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅನುಭವ ಮಂಟಪ ಬಳಗದ ಸದಸ್ಯರಾದ ವಿಶ್ವೇಶ್ವರಯ್ಯ ಬಿ.ಎಂ. ಹೆಮ್ಮನಬೇತೂರು, ದೇಹವೇ ಕೈಲಾಸ, ನಮ್ಮ ಚೈತನ್ಯವೇ ಶಿವ. ಶಿವ ಬೇರೆ ಎಲ್ಲೂ ಇಲ್ಲ ಎಂದರು.
ಅನುಭವ ಮಂಟಪ ಯಾರೊಬ್ಬರ ಸ್ವತ್ತಲ್ಲ, ಅದು ನಿಮ್ಮ ನಿಮ್ಮೆಲ್ಲರಿಗೂ ಸೇರಿದ್ದು. ಈ ಗ್ರಾಮದವರೂ ಸಹ ಅನುಭವ ಮಂಟಪದಲ್ಲಿ ಒಂದು ದಿನ ಸೇವೆ ಮಾಡಬೇಕು ಎಂದು ಮನವಿ ಮಾಡಿದರು.
ರಾಜಶೇಖರಪ್ಪ ರಾಮಗೊಂಡನಹಳ್ಳಿ ಅವರು, ಬಸವಾದಿ ಶರಣರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಶರಣರಿಗೆ ನಾವು ಗೌರವ ಕೊಟ್ಟಂತೆ ಎಂದು ಹೇಳಿದರು.

ಅನುಭವ ಮಂಟಪ ಬಳಗದ ಸದಸ್ಯರಾದ ಆವರಗೆರೆ ರುದ್ರಮುನಿ ಅವರು, ಶರಣರು ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದರು. ದಾಸೋಹ ತತ್ವ ಜಾರಿಗೆ ತಂದರು ಎಂದು ತಿಳಿಸಿದರು.
ಆರತಿ ಲಿಂಗರಾಜ ವಚನ ಗೀತೆ ಹಾಡಿದರು. ಅನುಭವ ಮಂಟಪ ಬಳಗದ ಸದಸ್ಯರಾದ ರುದ್ರೇಗೌಡರು ಸ್ವಾಗತಿಸಿದರು.

ಇದಕ್ಕೂ ಮೊದಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ಮಾಡಲಾಯಿತು.
ಸಮಾರಂಭದಲ್ಲಿ ಅನುಭವ ಮಂಟಪ ಬಳಗದ ಅತ್ತಿಗೆರೆ ನಾಗರಾಜ, ಟಿ.ಎಂ. ಶಿವಮೂರ್ತಯ್ಯ ಹಾಗೂ ಗ್ರಾಮದ ಮುಖಂಡರಾದ ಹೆಚ್. ಈಶ್ವರಪ್ಪ, ಎನ್.ಎಸ್. ರಾಜು, ಹೆಚ್.ಕೆ. ಪಾಲಾಕ್ಷಪ್ಪ, ಬೇತೂರು ಶೇಖರಪ್ಪ, ಎಸ್.ಆರ್. ಪ್ರಭು, ಎಸ್.ಹೆಚ್. ಕಾಂತರಾಜ, ಡಿ. ಸಿ. ಮಹಾರುದ್ರಪ್ಪ, ಹೆಚ್.ಕೆ. ಷಣ್ಮುಖಪ್ಪ, ಆರತಿ ಲಿಂಗರಾಜ, ಸರ್ವಮಂಗಳಮ್ಮ, ಗ್ರಾಮಸ್ಥರು ಉಪಸ್ಥಿತರಿದ್ದರು.

