ರಾಯಚೂರು ಜಿಲ್ಲಾ ಪ್ರಥಮ ಕದಳಿ ಮಹಿಳಾ ಸಮ್ಮೇಳನಕ್ಕೆ ಡಾ. ಆಶಾದೇವಿ ಚಾಲನೆ

ಹಸಿವುಮುಕ್ತ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕರೆ

ರಾಯಚೂರು:

೧೨ನೇ ಶತಮಾನದಲ್ಲಿ ಶರಣ-ಶರಣೆಯರು ಸೇರಿ ಮಾಡಿದ ವಚನ ಚಳುವಳಿ ಇಂದಿನ ಪ್ರಸ್ತುತ ದಿನಮಾನಕ್ಕೂ ಅಗತ್ಯವಿದೆ. ವಚನಗಳ ನೆಲೆಗಳನ್ನು ಗುರುತಿಸಿದ್ದೇವೆ. ಆದರೆ ಅವುಗಳನ್ನು ಅಳವಡಿಸಿಕೊಂಡು ಗೆದ್ದಿದ್ದೀವಾ? ಸೋತಿದ್ದೀವಾ? ಎನ್ನುವ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಚಿಂತಕರು, ಸಹಪ್ರಾಧ್ಯಾಪಕಿ ಡಾ.ಎ.ಎಸ್. ಆಶಾದೇವಿ ಹೇಳಿದರು.

ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪ್ರಥಮ ಕದಳಿ ಮಹಿಳಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ನಮಗೆ ವಚನಗಳ ಭಯವಿದೆ, ಶರಣ ಶರಣೆಯರ ವಚನಗಳ ಬಗ್ಗೆ ಮಾತನಾಡುವಾಗ ಅವರ ವಚನಗಳನ್ನು ನಮ್ಮ ಬದುಕಿನಲ್ಲಿ ಅಳವಸಿಡಿಸಿಕೊಂಡಿದ್ದೀವಾ, ಅಕ್ಕಮಹಾದೇವಿ, ನೀಲಮ್ಮ ಅವರು ಸಮಸಮಾಜದಲ್ಲಿ ಮಹಿಳೆಯರನ್ನು ಗೌರವದಿಂದ ಕಾಣಬೇಕು ಎನ್ನುವ ಕನಸು ಅವರದ್ದಾಗಿದೆ, ಅವರ ಬದುಕಿನಲ್ಲಿ ಸಾಕಷ್ಟು ಕಷ್ಟ ನೋವುಗಳನ್ನು ಅನುಭವಿಸಿದ್ದರು, ಆದರೆ ಅವರು ಮಹಿಳೆಯರಿಗೆ ಸಮಾಜದಲ್ಲಿ ಗಂಡಿನಷ್ಟೆ ಸಮನಾಗಿರಬೇಕು ಎನ್ನುವ ಆಶಯವಾಗಿತ್ತು ಎಂದರು.

ಮಹಿಳೆಯರು ಸಂಸಾರ, ದಾಂಪತ್ಯ, ಕುಟುಂಬಕ್ಕಾಗಿ ಎಲ್ಲವನ್ನು ಧಾರೆ ಎರೆಯುತ್ತಿದ್ದು, ಆದರೆ ಅವರಿಗೆ ಸಿಗಬೇಕಾದ ಗೌರವ ಇಂದು ಸಿಗುತ್ತಿಲ್ಲ, ಮಹಿಳೆಯರು ಗಂಡಸರ ವಿರೋಧಿ ಅಲ್ಲ, ಆದರೆ ಮಹಿಳೆಯರನ್ನು ತಮ್ಮಿಷ್ಟದಂತೆ ಸಮಾಜ ನಡೆಸಿಕೊಳ್ಳುವುದು ಮಹಿಳಾ ವಿರೋಧಿಯಾಗಿದೆ. ಮಹಿಳೆಯರು ಮೇಲೆ ಸಾಕಷ್ಟು ಹಲ್ಲೆ, ಕೊಲೆ ಸೇರಿದಂತೆ ಹಲವು ರೀತಿಯಲ್ಲಿ ಶೋಷಣೆ ಮಾಡುತ್ತಿದ್ದೇವೆ, ಸರ್ಕಾರ ನಿರ್ಭಯ ಕಾನೂನು ತಂದಿದೆ ಎಂದು ಹೇಳುತ್ತಿದೆ ಆದರೆ ವ್ಯವಸ್ಥೆ ಮಾತ್ರ ಹಾಗೆಯೇ ಇದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಮಸಮಾಜದಲ್ಲಿ ಮಹಿಳೆಯರಿಗೆ ದೊರಕುವ ಗೌರವ ಸಿಗುವಂತಾಗಬೇಕಾಗಿದೆ, ಇದು ನಮ್ಮ ಕದಳಿ ವೇದಿಕೆ ಉದ್ದೇಶವಾಗಿದೆ ಎಂದರು.

ಇದೇ ವೇಳೆ ಸಮ್ಮೇಳನಾಧ್ಯಕ್ಷೆ ಶರಣ ಚಿಂತಕಿ ಡಾ. ಗಂಗಮ್ಮ ಸತ್ಯಂಪೇಟೆ ಮಾತನಾಡಿ, ಹಸಿವುಮುಕ್ತ ಮತ್ತು ವ್ಯಸನಮುಕ್ತ ಸಮಾಜ ನಿರ್ಮಿಸಲು ಕರೆ ನೀಡಿದರು.

ಸಮ್ಮೇಳನಕ್ಕೆ ಮುಂಚಿತವಾಗಿ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಲಾಯಿತು.

ನಂತರ ಬಸವೇಶ್ವರ ವೃತ್ತದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರ ಮೆರವಣಿಗೆಗೆ ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಸಂತೋಷ ರಾಣಿ ಅವರು ಚಾಲನೆ ನೀಡಿದರು.

ಮೆರವಣಿಗೆ ಬಸವೇಶ್ವರ ವೃತ್ತದಿಂದ ಆರಂಭವಾಗಿ ಅಂಬೇಡ್ಕರ್ ವೃತ್ತದ ಮೂಲಕ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರ ತಲುಪಿತು.

ಈ ಸಂದರ್ಭದಲ್ಲಿ ಕದಳಿ ವೇದಿಕೆ ರಾಜ್ಯ ಸಂಚಾಲಕಿ ಸುಶೀಲ ಸೋಮಶೇಖರ, ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ಲಲಿತಾ ಬಸನಗೌಡ, ಹೆಚ್.ಬಿ ಹಂಪಣ್ಣ, ನಾಗರಾಜ ಮಸ್ಕಿ, ದಾನಮ್ಮ ಸುಭಾಷ್ ಚಂದ್ರ, ಸುಮಂಗಲಾ ಸಕ್ರಿ, ಸದನಮ್ಮ ಗುಂಡಪ್ಪ, ಸುಮಂಗಲಾ ಸೂಗುರಯ್ಯ ಹಿರೇಮಠ, ಮುಕ್ತಾ ನರಕಲದಿನ್ನಿ, ಚೈತ್ರಾ ಸತ್ಯಂಪೇಟೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಸಮ್ಮೇಳನಾಧ್ಯಕ್ಷರ ಭಾಷಣ

ಕದಳಿ ಎಂಬುದು ತನು, ಕದಳಿ ಎಂಬುದು ಮನ ಎಂದು ಹೇಳಿದ ಅಕ್ಕ ಸ್ತ್ರೀ ಕುಲದ ಬಂಧನದ ಬೇರನ್ನು ಅಮೂಲಾಗ್ರವಾಗಿ ಕಿತ್ತೆಸೆದು, ಮಹಿಳಾ ಕುಲದ ಘನತೆಯನ್ನು ಎತ್ತಿ ಹಿಡಿದ ಜಗತ್ತಿನ ಮೊದಲ ಪ್ರವಾದಿ. ಸ್ತ್ರೀ ಸಮಾನತೆಯ ಪ್ರತಿನಿಧಿ ಬಸವ ಮಾನಸ ಪುತ್ರಿ.

ಎಡದೊರೆಯ ನಾಡಾದ ರಾಯಚೂರು ಜಿಲ್ಲೆ ಶರಣ ಶರಣೆಯರ ತವರೂರು. ಗ್ರಾನೈಟ್, ಚಿನ್ನ, ಖನಿಜಕ್ಕೆ ಪ್ರಸಿದ್ಧಿ ಪಡೆದಿದೆ. ದಾಸ, ಜನಪದ, ಶರಣ, ಅನುಭಾವಿಗಳ ನುಡಿಗಳು ನಮ್ಮ ಬದುಕನ್ನು ಸಮೃದ್ಧಗೊಳಿಸಿವೆ.

ಶರಣರ ಚಳವಳಿಗೆ ವಚನಕಾರ್ತಿಯರ ಕೊಡುಗೆ ಅಪಾರವಾಗಿದೆ. ಶರಣರ ಜೀವನಕ್ಕೆ ಸಾಥ್ ನೀಡಿದ ಶರಣೆಯರು ಅವರಿಗಿಂತ ಒಂದು ಹೆಜ್ಜೆ ಮುಂದಿದ್ದರು. ಇದಕ್ಕೆ ಮೋಳಿಗೆಯ ಮಹಾದೇವಿ, ನೀಲಮ್ಮ, ಅಕ್ಕನಾಗಮ್ಮ, ಅಕ್ಕ, ಸತ್ಯಕ್ಕ, ಸೂಳೆ ಸಂಕವ್ವೆ, ದುಗ್ಗಳೆ ಮುಂತಾದವರು ಸಾಕ್ಷಿಯಾಗಿದ್ದಾರೆ.

ಮಹಿಳೆಯರು ಮೌಢ್ಯಾಚರಣೆಗಳಿಂದ ಹೊರ ಬರಬೇಕು ಎಂದು ಸಮ್ಮೇಳನಾಧ್ಯಕ್ಷೆ ಡಾ. ಗಂಗಮ್ಮ ಸತ್ಯಂಪೇಟೆ ತಿಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *