ಬೆಳಗಾವಿ
ವಿಜಯದಶಮಿಯ ಬನ್ನಿ ಗಿಡವನ್ನು ಪೂಜಿಸಿ ಅದರ ಎಲೆಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಪದ್ದತಿಯಿದೆ. ‘ಬನ್ನಿ ತೊಗೊಂಡು, ಬಂಗಾರದ್ಹಂಗ ಇರಣ’ ಎಂಬ ಸಂದೇಶವನ್ನು ಪ್ರತಿ ಸಲ ಬನ್ನಿ ನೀಡಿದಾಗಲೂ ಪರಸ್ಪರ ಒಪ್ಪಿಸಿಕೊಳ್ಳುತ್ತಾರೆ.
ಆದರೆ ಇತ್ತೀಚಿಗೆ ನಡೆದ ನಗರದ ವಿಶ್ವಗುರು ಬಸವ ಮಂಟಪದಲ್ಲಿ ಬಸವ ಧರ್ಮ ವಿಜಯೋತ್ಸವ ಕಾರ್ಯಕ್ರಮದಲ್ಲಿ ಬನ್ನಿ ತೊಪ್ಪಲ ಬದಲು ಚಿಕ್ಕಚಿಕ್ಕ ಹಾಳೆಗಳಲ್ಲಿ ಬರೆದ ವಚನಗಳನ್ನು ಪರಸ್ಪರ ಹಂಚಿಕೊಂಡು ವಜ್ರದಂತಾಗೋಣ ಎಂದು ಪರಸ್ಪರ ಹಾರೈಸಿದರು.
ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕ್ಕ ನಾಗಲಾಂಬಿಕ ಮಹಿಳಾ ಗಣದ ಶರಣೆಯರಿಂದ ಧರ್ಮಪಿತ ಬಸವಣ್ಣನವರ ಪೂಜೆ ನೆರವೇರಿತು.

ಪ್ರಾರ್ಥನೆಯನ್ನು ಕೆ. ಶರಣಪ್ರಸಾದ ಅವರು ನಡೆಸಿಕೊಟ್ಟರು. ನಂತರ 770 ಅಮರಗಣಂಗಳಿಗೆ ಶರಣಾರ್ಥಿ ಸಲ್ಲಿಸುವ ಕಾರ್ಯಕ್ರಮ ಜರುಗಿತು.
ಚಿಂತನಾಗೋಷ್ಠಿಯಲ್ಲಿ ಅಧ್ಯಕ್ಷರಾದ ಅಶೋಕ ಬೆಂಡಿಗೇರಿ , ಲಿಂಗಾಯತ ಧರ್ಮ ಮಹಾಸಭಾದ ಜಿಲ್ಲಾಧ್ಯಕ್ಷರಾದ ಮಹಾಂತೇಶ ಗುಡಸ , ಆನಂದ ಗುಡಸ , ಮಾರಯ್ಯ ಗಡಗಲಿ, ಸುಶೀಲಾ ಲಿಂಗಾಯತ, ನೀಲಗಂಗಾ ಪಾಟೀಲ ಅವರು ಅನುಭಾವವನ್ನು ಗೈದರು.


