ಭಾಲ್ಕಿ
ಅಮರಾವತಿ ಶಿವಯ್ಯ ಹಿರೇಮಠ ಪ್ರತಿಷ್ಠಾನ ವತಿಯಿಂದ ನೀಡುವ ಪ್ರಸಕ್ತ ಸಾಲಿನ `ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಸಾಹಿತ್ಯ ಪ್ರಶಸ್ತಿಗೆ’ ಪ್ರೊ.ಸಿದ್ಧಣ್ಣ ಲಂಗೋಟಿ ಅವರಿಗೆ ಆಯ್ಕೆ ಮಾಡಲಾಗಿದೆ. ಅಮರಾವತಿ ಶಿವಯ್ಯ ಪ್ರತಿಷ್ಠಾನ ಕಳೆದ ೯ ವರ್ಷಗಳಿಂದ ಈ ಪ್ರಶಸ್ತಿ ನಾಡಿನ ಖ್ಯಾತ ಸಾಹಿತಿಗಳು, ಸಂಶೋಧಕರಿಗೆ ನೀಡುತ್ತ ಬರುತ್ತಿದೆ.
ಇಲ್ಲಿಯವರೆಗೆ ಡಾ.ಜಿ.ಬಿ.ವಿಸಾಜಿ, ದೇಶಾಂಶ ಹುಡಗಿ, ಡಾ.ಸೋಮನಾಥ ಯಾಳವಾರ, ಡಾ.ಗುರುಲಿಂಗಪ್ಪ ಧಬಾಲೆ, ಪ್ರೊ.ಶಾಲಿನಿ ದೊಡಮನಿ, ಡಾ.ಇಂದುಮತಿ ಪಾಟೀಲ, ಪಂಚಾಕ್ಷರಿ ಪುಣ್ಯಶೆಟ್ಟಿ, ಸ್ವರೂಪಾತಾಯಿ ಬಿರಾಜದಾರ, ವೀರಶೆಟ್ಟಿ ಬಾವುಗೆ, ಪ್ರೊ.ಎಸ್.ಬಿ.ಬಿರಾದಾರ ಮುಂತಾದ ಗಣ್ಯರಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆಯಾದ ಡಾ. ಎಂ.ಮಕ್ತುAಬಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಪರಿಚಯ:
ಬಸವ ಜನ್ಮಭೂಮಿಯಾಗಿರುವ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಾಂದಕವಠೆ ಎಂಬ ಗ್ರಾಮದ ಲಿಂಗಾಯತ ಕೃಷಿ ಕುಟುಂಬದ ಶರಣ ಯಮನಪ್ಪ ಶರಣೆ ರಾಚವ್ವ ದಂಪತಿಗಳ ಉದರದಲ್ಲಿ ಜನಿಸಿರುವ ಪ್ರೊ.ಸಿದ್ಧಣ್ಣ ಲಂಗೋಟಿ ಅವರು ನಾಡಿನ ಖ್ಯಾತ ಸಾಹಿತಿಗಳು, ಅನುಭಾವಿಗಳು ಆಗಿದ್ದಾರೆ. ಬಾಲ್ಯದಿಂದಲೇ ಅನೇಕ ಪೂಜ್ಯರ ದಿವ್ಯಸಾನಿಧ್ಯದಲ್ಲಿ ಬೆಳೆದ ಇವರು ಬಸವಾದಿ ಶರಣರ ಸಾಹಿತ್ಯ ಅಧ್ಯಯನದಲ್ಲಿ ಆಸಕ್ತಿ ಬೆಳೆಸಿಕೊಂಡರು. ಭಾರತೀಯ ಹಾಗು ಪಾಶ್ಚಿಮಾತ್ಯ ತತ್ವಶಾಸ್ತç ಜಾಗತಿಕ ಧರ್ಮಗಳ ಅಧ್ಯಯನ ಮಾಡಿದ್ದಾರೆ.
ಅರಿವು-ಆಚಾರ-ಅನುಭಾವ ಅಳವಡಿಸಿಕೊಂಡು ಬಸವತತ್ವಜ್ಞಾನದ ಅನುಭಾವಿಗಳಾಗಿ ಐದು ದಶಕಗಳಿಂದ ಬಸವಕಾರ್ಯದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಜಂಗಮ ಕಾರ್ಯ ಮಾಡುತ್ತಿದ್ದಾರೆ. ನಿರಂತರ ಅಧ್ಯಯನ, ಅಧ್ಯಾಪನೆ, ಬರವಣಿಗೆ ಮತ್ತು ಅನುಭಾವ ಇವರ ಜೀವನದ ಉಸಿರಾಟವಾಗಿದೆ. ಡಾ.ಕಲ್ಯಾಣಮ್ಮ ಲಂಗೋಟಿ ಅವರು ಪತಿಗೆ ತಕ್ಕ ಸತಿಯಾಗಿದ್ದಾರೆ. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎನ್ನುವ ಶರಣವಾಣಿಯಂತೆ ಇವರ ದಾಂಪತ್ಯ ಜೀವನವಾಗಿದೆ ಎಂದು ಹೇಳಲು ಸಂತೋಷವಾಗುತ್ತಿದೆ. ಇಳಕಲ್ನ ವಿಜಯಮಹಾಂತೇಶ್ವರ ಸಂಸ್ಥಾನ ಮಠದಿಂದ ಪ್ರಕಟವಾಗುವ
ಬಸವಬೆಳಗು’ ಪತ್ರಿಕೆಯ ಸಂಪಾದಕರಾಗಿ ೩೫ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಭಾಲ್ಕಿ ಹಿರೇಮಠದೊಂದಿಗೆ ಪ್ರೊ.ಸಿದ್ಧಣ್ಣ ಲಂಗೋಟಿ ಅವರು ಅವಿನಾಭಾವ ಸಂಬಂಧ ಬೆಳೆದು ಬಂದಿದೆ. ಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ಮೇಲೆ ಅಪಾರ ಭಕ್ತಿ ಶ್ರದ್ಧೆಯನ್ನಿಟ್ಟುಕೊಂಡು ಬಸವಕಲ್ಯಾಣದ ಅನುಭವಮಂಟಪದ ಕಾರ್ಯದಲ್ಲಿ ಪೂಜ್ಯರಿಗೆ ಸಹಕರಿಸಿದ್ದಾರೆ. ನಾಡಿನ ಶರಣ ಸಾಹಿತ್ಯ ಸಮ್ಮೇಳನಗಳಲ್ಲಿ, ಕಮ್ಮಟಗಳಲ್ಲಿ, ಬಸವತತ್ವದ ಉಪನ್ಯಾಸನಗಳನ್ನು ನೀಡುವ ಮೂಲಕ ಬಸವಧರ್ಮ ಜಾಗೃತಿ ಮಾಡುತ್ತಿದ್ದಾರೆ. ಬಹುಭಾಷಾ ಬಲ್ಲವರಾದ ಇವರು ದೇಶ-ವಿದೇಶಗಲ್ಲಿ ಬಸವತತ್ವ ಪ್ರಸಾರದ ಸೇವೆ ಮಾಡುತ್ತಿದ್ದಾರೆ. ಬೆಂಗಳೂರು ಬಸವ ಸಮಿತಿ ವತಿಯಿಂದ ನಡೆಯುತ್ತಿರುವ ವಚನ ಅನುವಾದ ಕಾರ್ಯಗಾರದಲ್ಲಿ ಇವರ ಪಾತ್ರ ಬಹುದೊಡ್ಡದಾಗಿದೆ. ಇವರ ಸಮಗ್ರ ಸೇವಾ ಸಾಧನೆಯನ್ನು ಗುರುತಿಸಿ, ಪ್ರಸಕ್ತ ಸಾಲಿನ `ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ.