ಬೆಂಗಳೂರು
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಆಯೋಜಿತವಾಗಿದ್ದ ಲಿಂಗಾಯತ ಸಮಾಜದ ಪ್ರಮುಖ ಮಠಾಧೀಶರ ಮತ್ತು ಗಣ್ಯರ ಭೇಟಿ ಫೆಬ್ರವರಿ 22ರಿಂದ 24ಕ್ಕೆ ಮುಂದೂಡಲಾಗಿದೆ.
ಮುಖ್ಯಮಂತ್ರಿಗಳ ಅಲಭ್ಯತೆ ಕಾರಣದಿಂದ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿದೆ ಎಂದು ಹಿರಿಯ ಸಚಿವ ಎಂ. ಬಿ. ಪಾಟೀಲರ ಕಚೇರಿಯಿಂದ ಬಂದಿರುವ ಪ್ರಕಟಣೆ ತಿಳಿಸಿದೆ.
“ಪ್ರಸ್ತುತ ಸಂದರ್ಭದಲ್ಲಿ ವಿಶ್ವಗುರು ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರರ ಹಾಗೂ ಬಸವಾದಿ ಶರಣರ ವಿಚಾರಗಳನ್ನು ಜನನಿತಗೊಳಿಸುವುದು ಅಗತ್ಯವಾಗಿದೆ.
ಈ ಕುರಿತು ಕಳೆದ ತಿಂಗಳು ಚಿತ್ರದುರ್ಗದಲ್ಲಿ ನಡೆದ 13ನೆ ಅಖಿಲಭಾರತ ಶರಣ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಪರಮಪೂಜ್ಯ ಸುತ್ತೂರು ಮಹಾಸ್ವಾಮಿಗಳವರ ನೇತೃತ್ವದಲ್ಲಿ, ಗದಗ, ಭಾಲ್ಕಿ ಸೇರಿದಂತೆ ಪ್ರಮುಖ ಮಠಾಧೀಶರು ಸೇರಿ ಚಿಂತನೆ ಮಾಡಿ ಒಂದು ವಿಶೇಷ ಯೋಜನೆಯ ರೂಪುರೇಷೆಗಳನ್ನು ರೂಪಿಸಿದ್ದಾರೆ. ಇದೆಲ್ಲವನ್ನೂ ಕ್ರೋಢೀಕರಿಸಿ ಒಂದು ಮನವಿಯನ್ನು ಪೂಜ್ಯರ ಸಮ್ಮುಖದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಫೆಬ್ರವರಿ 24 ಸೋಮವಾರ ಬೆಳಗ್ಗೆ 11 ಗಂಟೆಗೆ ಸಲ್ಲಿಸಲಾಗುವುದು.
ಮನವಿ ಸಲ್ಲಿಕೆ ಮುಂಚೆ ಅಂದು ಬೆಳಗ್ಗೆ 10ಗಂಟೆಗೆ ಎಂ. ಬಿ. ಪಾಟೀಲರ ಸರ್ಕಾರಿ ನಿವಾಸ ನಂ. 1 ರೇಸ್ ವ್ಯೂ ಕಾಟೇಜ್ ನಲ್ಲಿ ಎಲ್ಲರೂ ಸೇರಿ ಚರ್ಚೆ ಮಾಡಿ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಗುವುದು,” ಎಂದು ಪ್ರಕಟಣೆ ತಿಳಿಸಿದೆ.